ಹಾಸನ: ದೈತ್ಯಾಕಾರದ ಒಂಟಿ ಸಲಗ ಅನುಮಾನಾಸ್ಪದ ಸಾವು

ಹಾಸನ:ಮಾ,15: ಅರಕಲಗೂಡು ತಾಲ್ಲೂಕಿನ ನೆಲಬಳ್ಳಿ ಗ್ರಾಮದಲ್ಲಿ ದೈತ್ಯಾಕಾರದ ಒಂಟಿಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಸುಮಾರು 25 ವರ್ಷದ ಗಂಡಾನೆ ರೈತರ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಅದು ವಿದ್ಯುತ್ ಶಾಕ್ ಅಥವಾ ಗುಂಡೇಟಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯ ರೈತರು ಬೆಳಗ್ಗೆ ತಮ್ಮ ಜಮೀನಿಗೆ ತೆರಳಿದಾಗ ಆನೆ ಶವ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಕ್ಷಣವೇ ಅರಣ್ಯ ಇಲಾಖೆಯ ಎಮರ್ಜೆನ್ಸಿ ರೆಸ್ಪೋನ್ಸ್ ತಂಡ (ಇಟಿಎಫ್) ದೌಡಾಯಿಸಿದ್ದು, ಪರಿಶೀಲನೆ ನಡೆಸಿದೆ.
ನಿನ್ನೆಯಷ್ಟೇ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ 52 ವರ್ಷದ ಸುಶೀಲಮ್ಮ ಮೃತಪಟ್ಟಿದ್ದರು. ಅದರ ಬೆನ್ನಿಗ ಇಂದು ಆನೆ ಮೃತಪಟ್ಟಿರುವುದು ಕಾಡಾನೆ-ಮಾನವ ಸಂಘರ್ಷದ ತೀವ್ರತೆಗೆ ಕನ್ನಡಿ ಹಿಡಿದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆ ಸಾವು ಹೇಗೆ ನಡೆದಿದೆ ಎಂಬುದು ಬಹಿರಂಗವಾಗುವ ನಿರೀಕ್ಷೆಯಿದೆ.