ಬೆಲೆಏರಿಕೆಯಿಂದ ಜನರ ಸಹನೆಯ ಕಟ್ಟೆ ಒಡೆಯುವ ಪರಿಸ್ಥಿತಿ: ವಿಜಯೇಂದ್ರ

ಬಿ.ವೈ.ವಿಜಯೇಂದ್ರ
ಹಾಸನ: ಬೆಲೆ ಏರಿಕೆಯ ಕಾರಣ ಜನರ ಸಹನೆಯ ಕಟ್ಟೆ ಒಡೆಯುವ ಪರಿಸ್ಥಿತಿ ಬಂದಿದೆ. ಜನಾಕ್ರೋಶ ಯಾತ್ರೆ ಎಲ್ಲ ಕಡೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ಜನರು ಪರದಾಡುವ ಪರಿಸ್ಥಿತಿಯನ್ನು ಸಿದ್ದರಾಮಯ್ಯರ ಸರಕಾರ ನಿರ್ಮಿಸಿದ್ದು, ಇದು ದುರದೃಷ್ಟಕರ ಎಂದು ಟೀಕಿಸಿದರು. ಭ್ರಷ್ಟಾಚಾರ ಮಿತಿ ಮೀರಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕವೇ ನಂಬರ್ ಒನ್ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ ಎಂದು ಗಮನ ಸೆಳೆದರು.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ, ಇದೀಗ ರಾಜ್ಯವು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಸ್ವತಃ ಬಸವರಾಜ ರಾಯರೆಡ್ಡಿ ಅವರೇ ತಿಳಿಸಿದ್ದಾಗಿ ವಿವರಿಸಿದರು.
ಇದರ ಜೊತೆಗೆ ಮುಸ್ಲಿಮರ ಓಲೈಕೆ ರಾಜಕಾರಣ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂ. ದುರುಪಯೋಗವನ್ನೂ ತಿಳಿಸಲು ನಮ್ಮ ಯಾತ್ರೆ ಇವತ್ತು ಮಡಿಕೇರಿ, ಮಂಗಳೂರಿಗೆ ತೆರಳಲಿದೆ ಎಂದು ವಿಜಯೇಂದ್ರ ತಿಳಿಸಿದರು.
ನನ್ನದು ಏಕಾಂಗಿ ಹೋರಾಟವಲ್ಲ; ಪಕ್ಷದ ವಿಪಕ್ಷ ನಾಯಕರು, ಹಿರಿಯರು ಒಟ್ಟಾಗಿ ಈ ಯಾತ್ರೆ ತೆರಳುತ್ತಿದ್ದೇವೆ. ಸಿದ್ದರಾಮಯ್ಯರ ಸರಕಾರ 50 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಎಳೆಯುವ ಕೆಲಸ ಮಾಡಿದೆ. ವಿಪಕ್ಷವಾಗಿ ತಕ್ಷಣ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.