ಹಸೀನಾ ಸರಕಾರದಿಂದ ಮಾನವೀಯತೆಯ ವಿರುದ್ಧ ಅಪರಾಧದ ಸಂಭವ: ವಿಶ್ವಸಂಸ್ಥೆ ವರದಿ

ಶೇಖ್ ಹಸೀನಾ (Photo:PTI)
ಢಾಕ: ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ವ್ಯವಸ್ಥಿತ ದಾಳಿ ಹಾಗೂ ಪ್ರತಿಭಟನಾಕಾರರ ಹತ್ಯೆಯ ಹಿಂದೆ ಶೇಖ್ ಹಸೀನಾ ಸರಕಾರವಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದ್ದು ಈ ಕೃತ್ಯ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಕಳೆದ ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಸೀನಾ ಸರಕಾರ ಪದಚ್ಯುತಗೊಳ್ಳುವುದಕ್ಕೂ ಮುನ್ನ ಪ್ರತಿಭಟನೆಯನ್ನು ಕಠಿಣ ಕ್ರಮಗಳಿಂದ ಹತ್ತಿಕ್ಕಲು ಮತ್ತು ದಮನಿಸಲು ಮುಂದಾಗಿತ್ತು ಹಾಗೂ ನೂರಾರು ಮಂದಿಯ ಕಾನೂನು ಬಾಹಿರ ಹತ್ಯೆಯೂ ಹಸೀನಾ ಸರಕಾರದ ಅವಧಿಯಲ್ಲಿ ನಡೆದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಕಳೆದ ವರ್ಷದ ಜುಲೈ 1ರಿಂದ ಆಗಸ್ಟ್ 15ರವರೆಗಿನ ನಡುವಿನ ಅವಧಿಯಲ್ಲಿ ನಡೆದ ಘಟನೆಗಳ ಸತ್ಯಶೋಧನಾ ತನಿಖೆಯ ವರದಿಯನ್ನು ಬಿಡುಗಡೆಗೊಳಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ `ಕೊಲೆ, ಚಿತ್ರಹಿಂಸೆ, ಜೈಲುಶಿಕ್ಷೆ ಮತ್ತು ಇತರ ಅಮಾನವೀಯ ಕೃತ್ಯಗಳು ನಡೆದಿವೆ ಎಂದು ನಂಬಲು ಸಮಂಜಸವಾದ ಆಧಾರಗಳಿವೆ' ಎಂದಿದೆ. ಈ ಆಪಾದಿತ ಅಪರಾಧಗಳನ್ನು ಸರಕಾರ ಮತ್ತು ಹಸೀನಾ ಅವರ ಅವಾಮಿ ಲೀಗ್ ಪಕ್ಷ , ಬಾಂಗ್ಲಾದೇಶದ ಭದ್ರತೆ ಮತ್ತು ಗುಪ್ತಚರ ಸೇವಾ ಏಜೆನ್ಸಿ ನಡೆಸಿದ್ದು ಇವು ಅಧಿಕಾರದಲ್ಲಿ ಮುಂದುವರಿಯುವ ಉದ್ದೇಶದಿಂದ ಈ ಹಿಂದಿನ ಸರಕಾರ ಪ್ರತಿಭಟನಾಕಾರರು ಮತ್ತು ಇತರ ನಾಗರಿಕರ ವಿರುದ್ಧ ನಡೆಸಿರುವ ವ್ಯಾಪಕ ಮತ್ತು ವ್ಯವಸ್ಥಿತ ದಾಳಿಗಳಾಗಿವೆ ಎಂದು ವರದಿ ಹೇಳಿದೆ.