ಥೈಲ್ಯಾಂಡ್ ಗೆ ಪಲಾಯನ ಮಾಡಿದ ಮ್ಯಾನ್ಮಾರ್ ನ ಯೋಧರು
Photo : Thunder Kawthoolei via Facebook
ಬ್ಯಾಂಕಾಕ್ : ಸಶಸ್ತ್ರ ಜನಾಂಗೀಯ ಗುಂಪಿನ ದಾಳಿಯ ಬಳಿಕ ಮ್ಯಾನ್ಮಾರ್ ನ ಯೋಧರು ಗಡಿದಾಟಿ ಥೈಲ್ಯಾಂಡ್ ಗೆ ಪಲಾಯನ ಮಾಡಿರುವುದಾಗಿ ಥೈಲ್ಯಾಂಡ್ ನ ಮಿಲಿಟರಿ ಶುಕ್ರವಾರ ಹೇಳಿದೆ.
2021ರಲ್ಲಿ ನಡೆಸಿದ ಕ್ಷಿಪ್ರದಂಗೆಯಲ್ಲಿ ಸೇನೆ ಅಧಿಕಾರ ವಶಪಡಿಸಿಕೊಂಡ ಬಳಿಕ ಸೇನಾಡಳಿತಕ್ಕೆ ವಿವಿಧ ಸಶಸ್ತ್ರ ಜನಾಂಗೀಯ ಗುಂಪುಗಳು ಹಾಗೂ ಪ್ರಜಾಪ್ರಭುತ್ವ ಪರ ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಾಗಿದ್ದು ಮ್ಯಾನ್ಮಾರ್ ನಲ್ಲಿ ಅಂತರ್ಯುದ್ಧ ಭುಗಿಲೆದ್ದಿದೆ.
ಮ್ಯಾನ್ಮಾರ್ ನ ಉತ್ತರದ ಗಡಿಯ ಸನಿಹದಲ್ಲಿರುವ ಪುಲು ಟು ನಗರದಲ್ಲಿ ಗಡಿಭದ್ರತಾ ಪಡೆಯ ನೆಲೆಯ ಮೇಲೆ ಶುಕ್ರವಾರ ಬೆಳಿಗ್ಗೆ ಕರೆನ್ ನ್ಯಾಷನಲ್ ಲಿಬರೇಷನ್ ಆರ್ಮಿ(ಕೆಎನ್ಎಲ್ಎ)ಯ ಸಶಸ್ತ್ರ ಹೋರಾಟಗಾರರು ದಾಳಿ ನಡೆಸಿದ್ದಾರೆ. ಮ್ಯಾನ್ಮಾರ್ ನ ಯೋಧರು ಪ್ರತಿದಾಳಿ ನಡೆಸಿದರೂ ಅಂತಿಮವಾಗಿ ಸೇನಾನೆಲೆಯನ್ನು ವಶಕ್ಕೆ ಪಡೆಯುವಲ್ಲಿ ಕೆಎನ್ಎಲ್ಎ ಯಶಸ್ವಿಯಾಗಿದ್ದು ಹಲವು ಯೋಧರು ಸಾವನ್ನಪ್ಪಿದ್ದಾರೆ. ಉಳಿದವರು ತಮ್ಮ ಗನ್ಗಳನ್ನು ತ್ಯಜಿಸಿ ಥೈಲ್ಯಾಂಡ್ನೊಳಗೆ ಪಲಾಯನ ಮಾಡಿದ್ದಾರೆ. ಗಡಿದಾಟಿ ಬಂದ ಯೋಧರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ಒದಗಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.