ಚಿಂದಿ ಆಯುವ ಬಡಹೆಣ್ಣನ್ನೂ ಬಿಡದ ಗಂಡು ಕ್ರೌರ್ಯ

ಕಲಬುರಗಿಯ ಕುವೆಂಪು ನಗರದಲ್ಲಿ ಚಿಂದಿ ಆಯುವ ಮಹಿಳೆಯರ ಜತೆ ಮಾತನಾಡಿದೆ. ಐದು ಮಹಿಳೆಯರಲ್ಲಿ ಒಬ್ಬರು 40 ವರ್ಷದ ಮಹಿಳೆಯನ್ನು ಹೊರತು ಪಡಿಸಿದರೆ ಉಳಿದವರು 20-30 ವರ್ಷದ ಅಂತರದ ವಯಸ್ಸಿನವರು. ಇವರ ಜತೆ 14 ವಯಸ್ಸಿನ ಶಾಲೆಯಲ್ಲಿ ಓದಬೇಕಾದ ಹುಡುಗಿ ಚಿಂದಿ ಆಯಲು ಅಮ್ಮನೊಂದಿಗೆ ಬಂದಿದ್ದಳು. ಇವರ ಜತೆ ಮಾತನಾಡಿದಾಗ ತಿಳಿದದ್ದು, ಬೆಳಗಿನ ಆರುಗಂಟೆಗೆ ಜೋಪಡಿ ಬಿಟ್ಟು ಚಿಂದಿ ಆಯಲು ಬರುತ್ತಾರೆ. ಬೆಳಗ್ಗೆ ಹನ್ನೊಂದು ಹನ್ನೆರಡು ಗಂಟೆಗೆ ಕೆಲಸ ಮುಗಿಸಿಕೊಂಡು ಆಯ್ದ ಸರಕನ್ನು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಹೊತ್ತೊಯ್ಯುತ್ತಾರೆ. ಗುಜರಿ ಅಂಗಡಿಗೆ ಹೋಗಿ ಆಯ್ದ ಚಿಂದಿಯಲ್ಲಿ ಪ್ಲಾಸ್ಟಿಕ್, ರಟ್ಟು, ಕಬ್ಬಿಣ ಹೀಗೆ ವರ್ಗೀಕರಿಸಿ ತೂಕಕ್ಕೆ ಹಾಕುತ್ತಾರೆ. ಹೆಚ್ಚೆಂದರೆ ಒಂದು ದಿನಕ್ಕೆ ನೂರರಿಂದ ಮುನ್ನೂರು ರೂ.ಗಳು ಸಿಗುತ್ತದೆ. ಈ ಮಹಿಳೆಯರ ಗಂಡಂದಿರು ಪ್ಲಾಸ್ಟಿಕ್ ಸಾಮಾನನ್ನು ಒಳಗೊಂಡಂತೆ ವಿವಿಧ ಚಿಕ್ಕಪುಟ್ಟ ವಸ್ತುಗಳ ವ್ಯಾಪಾರಕ್ಕೆ ಸುತ್ತಮುತ್ತಣ ಹಳ್ಳಿಗಳಿಗೆ ತೆರಳುತ್ತಾರೆ.
ಚಿಂದಿ ಆಯುವ ಕೆಲಸ ಬಿಟ್ಟು ಬೇರೆ ಕೆಲಸ ಯಾಕೆ ಮಾಡುವುದಿಲ್ಲ ಎಂದು ಕೇಳಿದರೆ, ‘‘ಉಳಿದ ಕೆಲಸಗಳು ದಿನಪೂರ್ತಿ ಮಾಡಬೇಕು. ಚಿಕ್ಕ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ. ಜೋಪಡಿಗಳು ಹತ್ತಿರತ್ತಿರ ಇರುವ ಕಾರಣ ಮಕ್ಕಳು ಜಗಳಾಡಿಕೊಂಡು ರಂಪ ಮಾಡಿಕೊಳ್ಳುತ್ತಾರೆ. ಸರಕಾರಿ ಶಾಲೆಗೆ ಹೋದ ಮಕ್ಕಳು ನಾವು ಮನೇಲಿ ಇರದಿದ್ದರೆ ಜೋಪಡಿಗೆ ವಾಪಾಸ್ ಬಂದು ಶಾಲೆ ಬಿಡ್ತಾರೆ. ನಾವು ಮನೇಲಿದ್ದರೆ ಬೈದು ಮತ್ತೆ ಶಾಲೆಗೆ ಕಳಿಸ್ತೀವಿ. ಕಸ ಆಯೋದು ನಮ್ಮ ಕೈ ಕೆಲಸ. ನಮಗೆ ಎಷ್ಟೊತ್ತು ಮಾಡಬೇಕು ಅನ್ಸುತ್ತೋ ಅಷ್ಟೊತ್ತು ಮಾಡ್ತೀವಿ ಇದಕ್ಕೆ ಯಾರ ಮೇಲುಸ್ತುವಾರಿಯೂ ಇರಲ್ಲ. ಹೀಗೆ ಓಣಿಗಳಲ್ಲಿ ಚಿಂದಿ ಆಯುವಾಗ ಕೆಲವು ಮನೆಗಳಲ್ಲಿ ಊಟವೂ ಸಿಗುತ್ತದೆ. ಉಟ್ಟುಬಿಟ್ಟ ಬಟ್ಟೆಗಳು ಸಿಗುತ್ತವೆ’’ ಎನ್ನುತ್ತಾರೆ. ಇವರು ಮೂಲತಃ ಬುಡಗ ಜಂಗಾಲು(ಜಂಗಮ) ಸಮುದಾಯದ ವೇಷಗಾರರಾದರೂ ಈಗ ಬಹುತೇಕ ವೇಷ ಹಾಕುವುದನ್ನು ಬಿಟ್ಟಿದ್ದಾರೆ. ಒಂದೆರಡು ಮನೆಯ ಹಿರಿಯರು ಭಿಕ್ಷೆಗೆ ಹೋಗುತ್ತಾರೆ. ‘‘ಬುಡಗ ಜಂಗಾಲು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದರೂ ನಮ್ಮ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಇದರಿಂದ ನಮ್ಮ ಮಕ್ಕಳಿಗೆ ಸಮಸ್ಯೆಯಾಗಿದೆ. ನಮ್ ಜನ ಯಾರನ್ನ ಕೇಳಬೇಕು? ನಮಿಗೆ ಇಲ್ಯಾರು ಗೊತ್ತಿಲ್ಲ, ಬಕ್ಕುಳ (ಬಹಳ) ಜನ ಚಿಂದಿ ಆಯ್ತೀವಿ. ನಮಿಗೆ ಈ ಕಸುಬು ಬಿಟ್ಟು ಬೇರೆ ಗೊತ್ತಿಲ್ಲ’’ ಎಂದು ಯಲ್ಲಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರು. ನಾನು ಇವರೊಂದಿಗೆ ಮಾತನಾಡುತ್ತಾ, ‘‘ಈಚೆಗೆ ಗುರುಮಿಠಕಲ್ನಲ್ಲಿ ಚಿಂದಿ ಆಯುವ ಇಬ್ಬರು ಮಹಿಳೆಯರು ಕೊಲೆಯಾಗಿದ್ದಾರೆ ವಿಷಯ ಗೊತ್ತಿದೆಯಾ?’’ ಎಂದು ಕೇಳಿದೆ. ಅದರಲ್ಲಿ ಒಬ್ಬ ಹೆಣ್ಣುಮಗಳು ‘‘ಹೌದು ಸರ್ ಅದರಲ್ಲಿ ಒಬ್ಬ ಹುಡುಗಿ ನಮ್ಮ ಚಿಕ್ಕಪ್ಪನ ಮಗಳು’’ ಎಂದು ಆತಂಕದಿಂದ ಹೇಳಿಕೊಂಡರು. ಈ ಮಾತುಕತೆಯ ಸಂಗತಿಗಳೇ ಹೆಚ್ಚು ಕಡಿಮೆ ಕರ್ನಾಟಕದಾದ್ಯಂತ ಚಿಂದಿ ಆಯುವ ಅಲೆಮಾರಿ ಬುಡಕಟ್ಟು ಸಮುದಾಯಗಳ ಮಹಿಳೆಯರ ದಿನಚರಿಯಾಗಿದೆ.
ಗುರುಮಠಕಲ್ ತಾಲೂಕಿನ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇದೇ ಫೆಬ್ರವರಿ 12ರಂದು ಇಬ್ಬರು ಯುವತಿಯರ ಶವಗಳು ಪತ್ತೆಯಾಗಿವೆ. ಗುರುತಿಸಲಾಗಿ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಇಂದಿರಾ ನಗರದ ಅಲೆಮಾರಿ ಬುಡಗ ಜಂಗಮ ಸಮುದಾಯದ ಇಬ್ಬರು ಹೆಣ್ಣುಮಕ್ಕಳ ಶವಗಳವು. ಶಾವಮ್ಮ ಗಂಡ-ಹುಸೇನಪ್ಪ 19 ವರ್ಷ, ಸಾಯಮ್ಮ-ತಂದೆ ಭೀಮಪ್ಪ 15 ವರ್ಷ ಎಂದು ಗುರುತಿಸಲಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿರುವ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಹೊಟ್ಟೆಪಾಡಿಗಾಗಿ ಚಿಂದಿ ಆಯುವ ಒಬ್ಬ ಬಾಲಕಿ ಮತ್ತು ಒಬ್ಬ ವಿವಾಹಿತ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಕೊಲೆಗೈದಿರಬಹುದಾದ ಸಂಶಯದ ಈ ಘಟನೆ ಅಮಾನವೀಯ ಕ್ರೌರ್ಯವಾಗಿದೆ. ಇದು ಕರ್ನಾಟಕದ ಎಲ್ಲಾ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಚಿಂದಿ ಆಯುವ ಮಹಿಳೆಯರಲ್ಲಿ ಆತಂಕ ಮತ್ತು ಭಯವನ್ನು ಹುಟ್ಟಿಸಿದೆ.
ನಗರ ಮಹಾನಗರಗಳಲ್ಲಿ ಹೀಗೆ ಚಿಂದಿ ಆಯುವ ಬಾಲಕಿಯರು/ಮಹಿಳೆಯರನ್ನು ನೋಡಿರುತ್ತೀರಿ. ಅವರಲ್ಲಿ ಬಹುಪಾಲು ಅಲೆಮಾರಿ/ಅರೆಅಲೆಮಾರಿ ಸಮುದಾಯದ ಮಹಿಳೆಯರು. ಮೇಲಿನ ಅತ್ಯಾಚಾರದ ಪ್ರಕರಣ ಅಂತಹ ಚಿಂದಿ ಆಯುವ ಎಲ್ಲಾ ಮಹಿಳೆಯರ ರಕ್ಷಣೆಯ ಬಗ್ಗೆ ಗಮನಸೆಳೆಯುತ್ತದೆ. ಈ ಬಗೆಗೆ ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕಾಗಿದೆ. ಈಗಾಗಲೇ ಈ ಪ್ರಕರಣವನ್ನು ವಿರೋಧಿಸಿ ಅಲೆಮಾರಿ ಸಮುದಾಯಗಳ ಸಂಘಟನೆಗಳು ಧ್ವನಿ ಎತ್ತುತ್ತಿವೆ. ಕೇಂದ್ರದ ಅಧಿಸೂಚಿತ ಅಲೆಮಾರಿ-ಅರೆಅಲೆಮಾರಿ ಬುಡಕಟ್ಟುಗಳ ಆಯೋಗದ 2008ರ ವರದಿಯಂತೆ ದೇಶದ ಅಲೆಮಾರಿ ಜನಸಂಖ್ಯೆಯಲ್ಲಿ ಕರ್ನಾಟಕದ ಶೇ. 14ರಷ್ಟು ಅಲೆಮಾರಿಗಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಕೆ.ಎಂ.ಮೇತ್ರಿ ಅವರ ಸಂಪಾದಕತ್ವದಲ್ಲಿ 2007-08ರಲ್ಲಿ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನ ಕೃತಿಗಳು ಪ್ರಕಟವಾಗಿವೆ. ಈ ಕೃತಿಗಳನ್ನು ಗಮನಿಸಿದರೆ ಚಿಂದಿ ಆಯುವ ಅಲೆಮಾರಿ ಸಮುದಾಯದ ಮಕ್ಕಳು ಹೇಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಇದಕ್ಕೆ ಕಾರಣಗಳೇನು ಎನ್ನುವುದು ಅರಿವಿಗೆ ಬರುತ್ತದೆ. ಅಲೆಮಾರಿತನಕ್ಕೂ, ಅವರ ವೃತ್ತಿಗೂ, ಶಿಕ್ಷಣಕ್ಕೂ ವಿರುದ್ಧ ಸಂಬಂಧವಿದೆ. ವಸ್ತುಸ್ಥಿತಿ ಹೀಗಿರುವಾಗ ಚಿಂದಿ ಆಯುವ ಕೆಲಸದಲ್ಲೂ ಅಲೆಮಾರಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿರುವುದು ಆತಂಕದ ಸಂಗತಿಯಾಗಿದೆ.
ಇಂದು ಬಹುಪಾಲು ಅಲೆಮಾರಿ/ಅರೆಅಲೆಮಾರಿ ಬುಡಕಟ್ಟುಗಳ ವಾಸದ ನೆಲೆಗಳು ಪಲ್ಲಟಗೊಂಡಿವೆ. ಅದೀಗ ಗ್ರಾಮೀಣ ಭಾಗಕ್ಕಿಂತ ನಗರದ ಅಂಚಿಗೆ ಸುತ್ತುವರಿದಿದೆ. ಅಲೆಮಾರಿ ಸಮುದಾಯಗಳು ಗ್ರಾಮೀಣ ವಲಸೆಯನ್ನು ಕೈಬಿಡುತ್ತಿದ್ದಾರೆ. ಕಾರಣ ನಗರ/ಮಹಾನಗರಗಳ ಮಧ್ಯಮವರ್ಗ/ಶ್ರೀಮಂತ ವರ್ಗಗಳು/ ಮಾರುಕಟ್ಟೆಗಳು ಸೃಷ್ಟಿಸಿದ ಚಿಂದಿ ಆಯುವುದು ಅಲೆಮಾರಿಗಳಿಗೆ ದುಡಿಮೆಯಾಗಿದೆ. ಗೋಸಂಗಿ ಸಮುದಾಯದಲ್ಲಿ ನಗರ ಪ್ರದೇಶದ ವಾಸದ ನೆಲೆ ಶೇ. 70ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ವಾಸದ ನೆಲೆ ಶೇ. 30ರಷ್ಟಿದೆ. ಘಿಸಾಡಿ ಸಮುದಾಯ ಗ್ರಾಮೀಣ ಭಾಗದಲ್ಲಿ ಶೇ. 22ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ. 78ರಷ್ಟಿದೆ. ಗೋಂಧಳಿ ಸಮುದಾಯ ಗ್ರಾಮೀಣ ಶೇ. 19.47ರಷ್ಟಿದ್ದರೆ, ನಗರ ಪ್ರದೇಶ ಶೇ.80.53ರಷ್ಟಿದೆ. ಬೈಲ ಪತ್ತಾರ ಸಮುದಾಯ ನಗರದಲ್ಲಿ ಶೇ. 51.36 ಇದ್ದರೆ ಗ್ರಾಮೀಣದಲ್ಲಿ ಶೇ. 49.31ರಷ್ಟಿದೆ. ದೊಂಬಿದಾಸರು ನಗರದಲ್ಲಿ ಶೇ. 51.36 ಇದ್ದರೆ ಗ್ರಾಮೀಣದಲ್ಲಿ ಶೇ. 49.31ರಷ್ಟಿದೆ. ಕಂಜರ ಭಾಟರು ಗ್ರಾಮೀಣದಲ್ಲಿ 163 ಜನರು ನೆಲೆಸಿದ್ದರೆ, ನಗರದಲ್ಲಿ ಒಟ್ಟು 1,834ರಷ್ಟಿದ್ದಾರೆ. ಈ ಅಂಕಿಅಂಶಗಳು ಬಹುಪಾಲು ಅಲೆಮಾರಿ ಸಮುದಾಯಗಳಿಗೆ ಅನ್ವಯವಾಗುತ್ತವೆ. ಹಾಗಾಗಿ ನಗರ ಪಾಲಿಕೆ/ಮಹಾನಗರ ಪಾಲಿಕೆ ಪೊಲೀಸ್ ವ್ಯವಸ್ಥೆ ಹೀಗೆ ಚಿಂದಿ ಆಯುವ ಅಲೆಮಾರಿಗಳಿಗೆ ರಕ್ಷಣೆ ಕೊಡಬಹುದಾದ ಯೋಜನೆಗಳನ್ನು ಜಾರಿಗೊಳಿಸಬೇಕಿದೆ.
ಮೇಲಿನ ಪ್ರಕರಣದಲ್ಲಿ ಕೊಲೆಗೀಡಾದ ಸಾಯಮ್ಮನಿಗೆ 15 ವರ್ಷ. ಶಾಲೆಯಲ್ಲಿ ಕಲಿಯಬೇಕಾದ ಸಾಯಮ್ಮ ಚಿಂದಿ ಆಯಲು ಹೋಗಿದ್ದಾಳೆ. 2011ರ ಜನಗಣತಿ ಪ್ರಕಾರ ಬೇಡ ಬುಡಗ ಜಂಗಮರು ಭಾರತದಲ್ಲಿ 2,56,042ರಷ್ಟಿದ್ದರೆ, ಕರ್ನಾಟಕದಲ್ಲಿ 1,17,164 ರಷ್ಟಿದ್ದಾರೆ. ಸಾಯಮ್ಮ ಪ್ರತಿನಿಧಿಸುವ ಯಾದಗಿರಿ ಜಿಲ್ಲೆಯಲ್ಲಿ 2,047ರಷ್ಟಿದ್ದಾರೆ. ಇದರಲ್ಲಿ ಸಾಯಮ್ಮನಂತಹ ಎಷ್ಟು ಹುಡುಗಿಯರು ಚಿಂದಿ ಆಯುತ್ತಿದ್ದಾರೋ ತಿಳಿಯದು. ಇದರಿಂದಾಗಿ ಕರ್ನಾಟಕದ ಬಹುಪಾಲು ಅಲೆಮಾರಿ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಮಾಣ ಕಡಿಮೆ ಇದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಶೈಕ್ಷಣಿಕವಾಗಿ ಗಂಡು 19.23ರಷ್ಟಿದ್ದರೆ, ಹೆಣ್ಣು 10.31ರಷ್ಟಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಗಂಡು ಶೇ. 39.59ರಷ್ಟಿದ್ದರೆ, ಶೇ. 36.08ರಷ್ಟು ಮಹಿಳೆಯರಿದ್ದಾರೆ. ಬಹುಪಾಲು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಅಂಕಿಸಂಖ್ಯೆಗಳು ಮೇಲಿನಂತೆಯೇ ಇರುತ್ತದೆ. ಇಲ್ಲಿ ಒಟ್ಟಾರೆ ಅಲೆಮಾರಿ ಸಮುದಾಯದ ಶೈಕ್ಷಣಿಕ ಮಟ್ಟ ತುಂಬಾ ಕೆಳಮಟ್ಟದ್ದಾಗಿದೆ. ಹಾಗಾಗಿ ಅಲೆಮಾರಿ ಸಮುದಾಯದ ಹುಡುಗಿಯರನ್ನು ಸರಕಾರಿ ಮಹಿಳಾ ವಸತಿಶಾಲೆಗಳಿಗೆ ಸೇರಿಸುವ ಅಭಿಯಾನ ಆರಂಭಿಸಬೇಕಾಗಿದೆ. ಹೀಗೆ ಅಲೆಮಾರಿ ಮಹಿಳೆಯರ ರಕ್ಷಣೆಗಾಗಿ ಸರಕಾರ ಯೋಚಿಸಬೇಕಿದೆ.