ಕೆಕೆಆರ್ಟಿಸಿ-ಎಸ್ಬಿಐ ಬ್ಯಾಂಕ್ ನಡುವೆ ಒಪ್ಪಂದ : ಸಂಸ್ಥೆ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಜಾರಿ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ)ದ ನೌಕರರು ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಲ್ಲಿ ಅವರಿಗೆ ಪ್ರಿಮಿಯಂ ರಹಿತ 1 ಕೋಟಿ ರೂ. ವರೆಗಿನ ಅಪಘಾತ ವಿಮೆ ಹಾಗೂ ಸಹಜ ಸಾವಿಗೆ 6 ಲಕ್ಷ ರೂ. ಪರಿಹಾರ ಒದಗಿಸುವ ಒಪ್ಪಂದಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೆಕೆಆರ್ಟಿಸಿ ಹಾಗೂ ಎಸ್ಬಿಐ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಬಿಐ ವಿಭಾಗೀಯ ಜನರಲ್ ಮ್ಯಾನೇಜರ್ ಮನೋಜಕುಮಾರ್ ಟೋಪೊ ಹಾಗೂ ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಕೆ.ಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸಮ್ಮುಖದಲ್ಲಿ ಒಪ್ಪಂದ ನಡೆಯಿತು.
ನಿಗಮದ ನೌಕರರು ಎಸ್ಬಿಐನಲ್ಲಿ ವೇತನ ಖಾತೆ ಹೊಂದಿದ್ದರೆ ಅವರನ್ನು ಕಾರ್ಪೊರೇಟ್ ಸ್ಯಾಲರಿ ಪ್ಯಾಕೇಜ್ ಅಡಿಯಲ್ಲಿ ಈ ಸೌಲಭ್ಯಗಳನ್ನು ಒದಗಿಸಲಾಗುವುದು. ಅಪಘಾತ ವಿಮೆ ಸೌಲಭ್ಯಕ್ಕೆ ಯಾವುದೇ ಪ್ರಿಮಿಯಂ ಪಾವತಿಸಬೇಕಾಗಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಕೆಆರ್ಟಿಸಿ ಎಂ.ಡಿ.ಎಂ.ರಾಚಪ್ಪ ಅವರು, ನಿಗಮದ 13,150 ನೌಕರರ ಖಾತೆಗಳು ಎಸ್ಬಿಐನಲ್ಲಿಯೇ ಇದ್ದು, ಅವರು ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಸಂಸ್ಥೆಯು ಈ ಹಿಂದೆ ಎಸ್ಬಿಐ ಬ್ಯಾಂಕ್ ಜೊತೆಗೆ 650 ಲಕ್ಷ ರೂ. ವರೆಗಿನ ಅಪಘಾತ ವಿಮೆಗೆ ಒಪ್ಪಂದ ಮಾಡಿಕೊಂಡಿದ್ದು, ಅದರಡಿ ಕಳೆದ ಒಂದು ವರ್ಷದಲ್ಲಿ ಅವಧಿಯಲ್ಲಿ 12 ಕಂಡಕ್ಟರ್, ಡ್ರೈವರ್ ಗಳಿಗೆ 6 ಕೋಟಿ ರೂ. ಬ್ಯಾಂಕ್ ಪರಿಹಾರ ನೀಡಿದೆ ಎಂದರು.
ಕೆಎಸ್ಆರ್ಟಿಸಿ ಎಂ.ಡಿ.ಅನ್ಬುಕುಮಾರ್ ಮಾತನಾಡಿ, ನಾಲ್ಕೂ ನಿಗಮದ ನೌಕರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳ ಮೂಲಕ ವೇತನ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ನಿಧನರಾದ ನೌಕರರ ಕುಟುಂಬದವರಿಗೆ ಆದ್ಯತೆಯ ಮೇರೆಗೆ ಪರಿಹಾರ ಮೊತ್ತವನ್ನು ಸಹ ಬ್ಯಾಂಕ್ ಒದಗಿಸುತ್ತಿದೆ ಎಂದರು.
ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ್, ಮುಖ್ಯ ಭದ್ರತಾ ಮತ್ತು ಜಾಗೃತಿ ಅಧಿಕಾರಿ ಆನಂದ ಬಂದ್ರಕಳ್ಳಿ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.