ಫೆ.20 ರಿಂದ ಎರಡು ದಿನಗಳ ಕಲಬುರಗಿ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಕನ್ನಡ ಅಸ್ಮಿತೆ ಹೆಚ್ಚಿಸುವ ಕಾರ್ಯ ನಿರಂತರವಾಗಿರಲಿ: ಡಾ.ದಾಕ್ಷಾಯಣಿ ಎಸ್.ಅಪ್ಪ

ಕಲಬುರಗಿ : ಫೆ.20 ಮತ್ತು 21 ರಂದು ನಗರದ ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪುರ ರಂಗಂದಿರದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಜಿಲ್ಲಾ 21 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರನ್ನು ನಗರದ ಶರಣಬಸವೇಶ್ವರ ಸಂಸ್ಥಾನದಲ್ಲಿ ಶನಿವಾರ ಅವರಿಗೆ ಅಧಿಕೃತ ಆಹ್ವಾನ ನೀಡಿ ಸತ್ಕರಿಸಲಾಯಿತು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರು, ನಾಡು-ನುಡಿಗಳ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡ ಕೈಂಕರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅನನ್ಯವಾಗಿದೆ. ಕಲೆ, ಸಾಹಿತ್ಯ ವೃದ್ಧಿಯಾದರೆ ಭಾಷೆಯ ಸೊಗಡು ಹೆಚ್ಚುತ್ತದೆ. ನಮ್ಮ ನೆಲ-ಜಲ ಹಾಗೂ ಮಾತೃ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಆ ಮೂಲಕ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ಮುನ್ನಡೆಯಬೇಕು. ಮಾತೃ ಭಾಷೆಗೆ ಆದ್ಯತೆ ನೀಡಿದಾಗ ನಾವು ಕನ್ನಡತನ ಉಳಿಸಿ ಬೆಳೆಸಬಹುದಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡದ ಅಸ್ಮಿತೆ ಹೆಚ್ಚಿಸುವಂಥ ಸಮ್ಮೇಳನವಾಗಬೇಕು. ಹೆಣ್ಣು ಮಕ್ಕಳಿಗೆ ಕನ್ನಡ ಶಾಲೆ ಆರಂಭಿಸುವ ಮೂಲಕ ಕನ್ನಡದ ಝೇಂಕಾರ ಮೊಳಗಿಸಿದ ಶ್ರೀ ಶರಣಬಸವೇಶ್ವರ ಸಂಸ್ಥಾನವು ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಮುಂದುವರಿಸಿಕೊಂಡು ಬಂದಿದೆ. ಇಂಥ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್. ಅಪ್ಪ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ ಎಂದು ಆಬಿಮಾನ ವ್ಯಕ್ತಪಡಿಸಿದರು.
ಶ್ರೀ ಶರಣಬಸವೇಶ್ವರ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ಶ್ರೀ ಚಿರಂಜೀವಿ ದೊಡ್ಡಪ್ಪ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ, ಡಾ.ಸುಮಂಗಲಾ ರೆಡ್ಡಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ರಮೇಶ ಡಿ ಬಡಿಗೇರ, ವಿನೋದಕುಮಾರ ಜೆ.ಎಸ್., ಉದಯಕುಮಾರ ಜೇವರ್ಗಿ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ್, ಹಣಮಂತಪ್ರಭು, ಡಾ. ಆನಂದ ಸಿದ್ಧಮಣಿ, ಬಾಬುರಾವ ಪಾಟೀಲ,ಜಗದೀಶ ಮರಪಳ್ಳಿ, ಸುರೇಶ ದೇಶಪಾಂಡೆ, ಎಸ್.ಕೆ.ಬಿರಾದಾರ, ಸೈಯದ್ ನಜಿರುದ್ದೀನ್ ಮುತ್ತವಲಿ, ನವಾಬ್ ಖಾನ್, ರಾಜೇಂದ್ರ ಮಾಡಬೂಳ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ ವಿದ್ಯಾಸಾಗರ ದೇಶಮುಖ, ಡಾ.ಸಾರಿಕಾದೇವಿ ಕಾಳಗಿ, ವಿಜಯಲಕ್ಷ್ಮೀ ಗಟಾಟೆ, ಡಾ.ರೆಹಮಾನ್ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.