ಕಲಬುರಗಿ | ರಟಕಲ್ ಗ್ರಾಮ ಪಂಚಾಯತ್ನಲ್ಲಿ ಅವ್ಯವಹಾರದ ಆರೋಪ ಸುಳ್ಳು : ಗ್ರಾ.ಪಂ ಅಧ್ಯಕ್ಷ ಜಗದೀಪ ಮಾಳಗಿ

ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾ.ಪಂ ಸದಸ್ಯರಾದ ಸುಭಾಷ್ ಮುಕರಂಬಾ ಹಾಗೂ ಬಂಡಪ್ಪ ಮುಕರಂಬಾ ಅವರು ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳಲು ರಾಜಕೀಯ ದುರುದ್ದೇಶದಿಂದ ಗ್ರಾ.ಪಂ ಪಿಡಿಓ ಅವ್ಯವಹಾರ ಎಸಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ರಟಕಲ್ ಗ್ರಾ.ಪಂ ಅಧ್ಯಕ್ಷ ಜಗದೀಪ ಮಾಳಗಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಗ್ರಾ.ಪಂ ಸದಸ್ಯರು ಮಾಡಿರುವ ಎಲ್ಲಾ ಆರೋಪಗಳು ಸುಳ್ಳಾಗಿದ್ದು, ನಮ್ಮ ಅಧ್ಯಕ್ಷತೆ ಅವಧಿಯಲ್ಲಿ ಸುಮಾರು 8 ಸಾಮಾನ್ಯ ಸಭೆಗಳು ನಡೆದಿವೆ. ಅದರಲ್ಲಿ ಕೆಲವು ಸಭೆಗಳಿಗೆ ಹಾಜರಾಗಿ ಕೆಲವು ಸಭೆಗಳ ಹಾಜರಾತಿ ಹಾಕಿದ್ದಾರೆ, ಈ ಕುರಿತಾದ ಆಡಿಟ್ ಗೂ ಸಹ ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.
ಅಲ್ಲದೆ ಕಾನೂನು ಬಾಹಿರವಾಗಿ ಚೆಕ್ ಪಡೆದುಕೊಂಡು ನರೇಗಾ ಅಡಿಯಲ್ಲಿ ಪಂಚಾಯತ್ ಕಾರ್ಯಾಲಯವನ್ನು ಮಳಿಗೆ ಎಂದು ಅಧಿಕಾರ ದುರುಪಯೋಗ ಪಡಿಸಿಕೊಂಡು ಕರಾರು ಒಪ್ಪಂದಕ್ಕೆ ಸಹಿ ಮಾಡಿರುವವರ ಸದಸ್ಯತ್ವ ರದ್ದುಗೊಳಿಸುವಂತೆ ದೂರು ಕೊಟ್ಟಿದ್ದಾರೆ. ಹೀಗೆ ತನ್ನ ಸದಸ್ಯತ್ವವನ್ನು ಉಳಿಸಿಕೊಳ್ಳಲು ಪಿಡಿಓ ಅವ್ಯವಹಾರ ಮಾಡಿರುತ್ತಾರೆ ಎಂದು ಕೆಲವು ಸಂಘಟನೆಗಳ ಜೊತೆಗೂಡಿ ಹೆದರಿಸಿ ಹೈಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಿಡಿಓ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳಾಗಿವೆ. ಇದಕ್ಕೆಲ್ಲ ತನಿಖೆಗೆ ನಾವು ಬದ್ಧರಾಗಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಪಾಟೀಲ್, ಸಿದ್ಧಲಿಂಗ ಗಂಗಶ್ರೀ, ವಿಷ್ಣುಕಾಂತ್ ಸ್ವಾಮಿ, ಶರಣಬಸಪ್ಪ ರಾಂಪೂರೆ ಸೇರಿದಂತೆ ಮತ್ತಿತರರು ಇದ್ದರು.