ಕಲಬುರಗಿ | ಆವಾಸ್ ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ ನಡೆಸಿದ ಅಧಿಕಾರಿಗಳ ಅಮಾನತಿಗೆ ಸಿಎಂಗೆ ಮನವಿ

ಕಲಬುರಗಿ : 2018-19ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿ ವತಿಯಿಂದ ತಾರ್ಫೈಲ್, ಕೃಷ್ಣಾ ನಗರ, ಬ್ರಹ್ಮಪೂರ ಹಾಗೂ ಜಿಲ್ಲೆಯ ವಿವಿಧ ಬಡಾವಣೆಯಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ನಗರದ ವಿವಿಧ ಕಡೆ ಜಿಲ್ಲೆಯಾದ್ಯಂತ ಕಳಪೆ ಮಟ್ಟದಮನೆ ನಿರ್ಮಾಣವು ನಗರದ ಸ್ಥಳೀಯರಿಗೆ ಸಂಶಯವನ್ನುಂಟು ಮಾಡಿದೆ. ಕೆಲವು ವರ್ಷಗಳ ಹಿಂದೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬ್ರಹ್ಮಪೂರ ವಡ್ಡರಗಲ್ಲಿ ಹಿಂದುಗಡೆ ಕೃಷ್ಣಾ ನಗರ ಬಡಾವಣೆಗೆ ಅಂದಾಜಿನ ಪ್ರಕಾರ ಸುಮಾರು 105 ಮನೆಗಳು ಮಂಜೂರಾಗಿರುತ್ತವೆ, ಈ ಮನೆಗಳ ಪೈಕಿ ಅಂದಾಜಿನ ಪ್ರಕಾರ 73 ಮನೆಗಳು ನಿರ್ಮಾಣವಾಗಿರುತ್ತವೆ. ನಿರ್ಮಾಣ ಮಾಡಿರುವ 73 ಮನೆಗಳು ಕಿಡಕಿ ಬಾಗಿಲು ಇಲ್ಲದೆ, ಮೇಲ್ಚಾವಣಿ ಇಲ್ಲದೆ ಕಳಪೆ ಗುಣಮಟ್ಟದ್ದಾಗಿರುತ್ತವೆ. ಇದರಲ್ಲಿಅಲ್ಲಿನ ನಿವಾಸಿಗಳು ದಿಕ್ಕು ಕಾಣದೇ ವಾಸಿಸುವಂತ ಸ್ಥಿತಿ ಬಂದೊದಗಿದೆ. ಉಳಿದ ಮನೆಗಳು ಬರೀ ಲೆಕ್ಕಪತ್ರದಲ್ಲಿ ತೋರಿ ನಿರ್ಮಾಣವಾಗಿರುವದಿಲ್ಲ. ಇದರಲ್ಲಿ ಸುಮಾರು 40,000 ರೂ. ನಿಂದ 50,000 ರೂ. ವರಗೆ ಖರ್ಚು ಮಾಡಿ 15-20 ಮನೆಗಳು ಫಲಾನುಭವಿಗಳು ಸಾಲ-ಸೂಲ ಮಾಡಿ ಅಲ್ಲಿನ ಸ್ಥಳಿಯರು ಖುದ್ದಾಗಿ ತಾವೇ ನಿರ್ಮಿಸಿಕೊಂಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಗೋರಂಪಳ್ಳಿ, ಜಿಲ್ಲಾ ಉಪಾಧ್ಯಕ್ಷೆ ಶ್ರೀದೇವಿ ಮುತ್ತಂಗಿ, ಸದಸ್ಯ ಬಾಲರಾಜ ತಾರ್ಫೈಲ್, ಬಸವರಾಜ ಹಯ್ಯಾಳಕರ್, ಮಲ್ಲು ತಾರ್ಫೈಲ್, ಗುರುಬಾಯಿ ಎನ್.ಕಟ್ಟಿಮನಿ ಇದ್ದರು.