ಕಲಬುರಗಿ | ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಕಲಬುರಗಿ : ಸೇಡಂ ಪಟ್ಟಣದ ವಿವಿಧೆಡೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಕಳುವಾಗಿದ್ದ 10 ಬೈಕ್ಗಳನ್ನು ಪತ್ತೆಹಚ್ಚುವಲ್ಲಿ ಸೇಡಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೇಡಂ ಪಟ್ಟಣದ ವೆಂಕಟೇಶ ನಗರ ನಿವಾಸಿ ಉಮರ್ ಮಹಿಬೂಬಖಾನ್, ಗಣೇಶ ನಗರ ನಿವಾಸಿ ಅಲ್ತಾಫ್ ಅಬ್ದುಲ್ ಸಲೀಂ ಎಂಬುವವರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 73 ಲಕ್ಷ ರೂ. ಮೌಲ್ಯದ 10 ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಸೇಡಂ ಪಟ್ಟಣದ ರಹಮತ್ ನಗರ ನಿವಾಸಿ ಇಮ್ಮಿಯಾಝ್ ರಿಯಾಝುದ್ದೀನ್ ಎಂಬವರು ತಮ್ಮ ಬೈಕ್ ಕಳುವಾದ ಕುರಿತು ಅ.10ರಂದು ಸೇಡಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೇ, ತಾಲ್ಲೂಕಿನ ಗೌಡನಹಳ್ಳಿ ಗ್ರಾಮದ ನಿವಾಸಿ ಗುರಪ್ಪ ಕಂಬಾರ ಎಂಬವರು ಕೂಡ ಬೈಕ್ ಕಳುವಾದ ಕುರಿತು ಅ.22ರಂದು ದೂರು ದಾಖಲು ಮಾಡಿದ್ದರು.
ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಕಳ್ಳರ ಪತ್ತೆಗೆ ತನಿಖೆ ಕೈಗೊಂಡ ಪೊಲೀಸರು, ಅ.22ರಂದು ರಾತ್ರಿ ಬಸ್ ನಿಲ್ದಾಣದ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ವಿಚಾರಿಸಿದ್ದಾರೆ. ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ ಹತ್ತಾರು ಬೈಕ್ ಕೀಗಳಿರುವುದು ಗೊತ್ತಾಗಿದೆ. ಸುಮಾರು 10 ಬೈಕ್ ಕಳ್ಳತನ ಮಾಡಿರುವುದಾಗಿ ಖುದ್ದಾಗಿ ಆರೋಪಿಗಳೇ ಒಪ್ಪಿಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.