ಕಲಬುರಗಿ | ಜಾತಿ ಜನಗಣತಿ ವೀರಶೈವ ಲಿಂಗಾಯತರನ್ನು ಒಡೆಯುವ ಷಡ್ಯಂತ್ರ : ಬಿರಾದಾರ ಆರೋಪ

ಕಲಬುರಗಿ : ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯು ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಷಡ್ಯಂತ್ರ ರೂಪಿಸಲಾಗಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ, ಬಸವ ಜಯಂತ್ಯೋತ್ಸವ ಸಮಿತಿ ಮಾಜಿ ಅಧ್ಯಕ್ಷ ರವಿ ಬಿರಾದಾರ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿಯೇ ಕಡಿಮೆ ತೋರಿಸಲಾಗಿದೆ. ಕಳೆದ 1972ರಿಂದ ನಮ್ಮ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದು 108 ಉಪ ಜಾತಿಗಳನ್ನು ಮಾಡಿ ಸಮಾಜಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹೊಡೆತ ಕೊಡುವ ಸಲುವಾಗಿ ರಾಜ್ಯ ಸರಕಾರ ತಂತ್ರ ಹಣೆಯುತ್ತಿದೆ. ಹಾಗಾಗಿ ಚಾಲ್ತಿಯಲ್ಲಿರುವ ಅವೈಜ್ಞಾನಿಕ ಜಾತಿ ಜನಗಣತಿಯನ್ನು ಕೈಬಿಡಬೇಕು, ಇದನ್ನು ಮತ್ತೊಮ್ಮೆ ಮಾಡಬೇಕು ಎಂದು ಆಗ್ರಹಿಸಿದರು.
ಆಡಳಿತ ಪಕ್ಷದಲ್ಲಿರುವ ಲಿಂಗಾಯತ ಸಚಿವರು, ಶಾಸಕರು ಈಗಲಾದರೂ ಒಣ ಪ್ರತಿಷ್ಟೆ ಬಿಟ್ಟು ಒಟ್ಟಾಗಬೇಕು. ಮರು ಜಾತಿ ಜನಗಣತಿಗೆ ಸಿಎಂ ಬಳಿ ಒತ್ತಾಯಿಸಬೇಕು. ನಾವು ಒಂದು ವೇಳೆ ಧರಣಿಗೆ ನಿರತರಾದರೆ ಸಮುದಾಯದ ಶಾಸಕರೆಲ್ಲರೂ ನಮಗೆ ಬೆಂಬಲ ನೀಡಿ, ಪ್ರತಿಭಟನೆಗಳಲ್ಲಿ ಕೈ ಜೋಡಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಣ್ಣಾರಾವ್ ಧುತ್ತರಗಾವ್, ಸಿದ್ಧಲಿಂಗ ಸ್ವಾಮೀಜಿ, ದೊಡ್ಡಪ್ಪ ಗೌಡ ಪಾಟೀಲ್, ಮಂಜುನಾಥ್ ರೆಡ್ಡಿ, ದಿವ್ಯ ಹಾಗರಗಿ, ಮಹಾಂತಗೌಡ ಪಾಟೀಲ್, ಸುನೀಲ್ ಓಗಿ, ಸಿದ್ದರಾಜ್ ಇಟಗಿ, ಚಂದ್ರಕಾಂತ್ ಬಿರಾದರ್, ಶಾಂತಲಿಂಗ ಮಂಥಾ, ವೀರುಸ್ವಾಮಿ ನರೋಣ, ಗುರುಭೀಮ್ ಸೇರಿದಂತೆ ಹಲವು ಮುಖಂಡರು ಇದ್ದರು.