ಕಲಬುರಗಿ | ಎ.30 ರಂದು ಬಸವ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ: ಬಿ.ಫೌಝಿಯಾ ತರನ್ನುಮ್

ಕಲಬುರಗಿ: ಕಲಬುರಗಿ ಜಿಲ್ಲಾದ್ಯಂತ ಎ.30ರಂದು ಸಂಭ್ರಮ-ಸಡಗರದಿಂದ ಬಸವ ಜಯಂತಿ ಆಚರಿಸಲಾಗುವುದು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜಗತ್ ವೃತ್ತದಲ್ಲಿರುವ ಸಾಂಸ್ಕೃತಿಕ ನಾಯಕ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಮತ್ತು ವೇದಿಕೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡಂತೆ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು, ಆಮಂತ್ರಣ ಪತ್ರಿಕೆ ಸಿದ್ದಪಡಿಸಿ ಗಣ್ಯರಿಗೆ ಮುಂಚಿತವಾಗಿ ವಿತರಿಸಲು ಮತ್ತು ಉಪನ್ಯಾಸಕರನ್ನು ನಿಯೋಜಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಎ.30ರಂದು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರು ಪೂರ್ವಭಾವಿ ಸಭೆ ನಡೆಸಿ ಅಗತ್ಯ ಕ್ರಮ ವಹಿಸಬೇಕು. ಕಲಬುರಗಿ ನಗರದಲ್ಲಿ ಜಿಲ್ಲಾಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ನಿರಂತರ ಕುಡಿಯುವ ನೀರು ಪೂರೈಕೆ, ವಿದ್ಯುತ್ ವ್ಯತ್ಯಯ ಆಗದಂತೆ ಎಚ್ಚರ ವಹಿಸಬೇಕು. ಜಗತ್ ವೃತ್ತ ಮತ್ತು ಬಸವೇಶ್ವರ ಪ್ರತಿಮೆ ಸುತ್ತ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು ಮತ್ತು ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕು ಎಂದರು.
ಅಫ್ಝಲಪುರ ಶಾಸಕರು ಮತ್ತು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿರುವ ಎಂ.ವೈ.ಪಾಟೀಲ ಮಾತನಾಡಿ, ಈ ಬಾರಿ ಯಾರ ಬಳಿಯು ಜಯಂತಿ ಆಚರಣೆಗೆ ಚಂದಾ ಹಣ ಎತ್ತದೆ ಕಲಬುರಗಿಯಲ್ಲಿ ಎಲ್ಲಾ ಸಮಾಜದವರನ್ನು ಸೇರಿಸಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲು ನಿರ್ಧರಿಸಿದ್ದು, ಸಮ-ಸಮಾಜಕ್ಕೆ ದುಡಿದ ಬಸವಣ್ಣನವರ ಆಚಾರ-ವಿಚಾರಗಳು ರಾಜ್ಯದುದ್ದಕ್ಕೂ ತಲುಪುವಂತೆ ಮಾದರಿ ಜಯಂತಿ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಶರಣರ 100 ವಚನಗಳನ್ನು ಒಳಗೊಂಡ ಕಿರುಪಸ್ತಕ ಹಂಚಲಾಗುವುದು ಎಂದರು.
ಕರ್ನಾಟಕ ಪರಿಸರ ಮಾಲಿನ ನಿಯಂತ್ರಣ ಮಂಡಳಿ ಸದಸ್ಯರು ಮತ್ತು ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ ಮಾತನಾಡಿ, ಬಸವ ಜಯಂತಿ ಅಂಗವಾಗಿ ಎ.29ರಂದು ಅಪ್ಪ ಜಾತ್ರೆ ಮೈದಾನದಲ್ಲಿ ಸಮಾಜದ ಸಮಾವೇಶ ಮಾಡಲಾಗುತ್ತಿದ್ದು, ಸುಮಾರು 25 ಸಾವಿರ ಜನಸಂಖ್ಯೆ ಬರುವ ನಿರೀಕ್ಷೆ ಇರುವುದರಿಂದ ಕುಡಿಯುವ ನೀರು, ವಿದ್ಯುತ್, ಪೊಲೀಸ್ ಬ್ಯಾರಿಕೇಡ್, ಪಾರ್ಕಿಂಗ್, ಸ್ವಚ್ಚತೆ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ವಿಶೇಷವಾಗಿ ಜಗತ್ ವೃತ್ತ ಮತ್ತು ಬಸವಣ್ಣನವರ ಪ್ರತಿಮೆ ಸುತ್ತ ಸೌಂದರ್ಯೀಕರಣ ಕೆಲಸಗಳು ಆಗಬೇಕು. ಎ.30 ರಂದು ಸಂಜೆ 4 ಗಂಟೆಗೆ ನಗರೇಶ್ವರ ಶಾಲೆಯಿಂದ ಬಸವಣ್ಣನವರ ಮತ್ತು ಬಸವಾದಿ ಶರಣರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯುದ್ದಕ್ಕೂ ಅಗತ್ಯ ಕ್ರಮ ವಹಿಸಬೇಕು ಎಂದರು.
ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಎ.29 ಮತ್ತು 30 ರಂದು ಎರಡು ದಿನಗಳ ಕಾಲ "ಅನುಭವ ಮಂಟಪ-ಬಸವಾದಿ ಶರಣರ ವೈಭವ" ಕಾರ್ಯಕ್ರಮ ಆಯೋಜಿಸಿದ ಪ್ರಯುಕ್ತ ಈ ಬಗ್ಗೆ ನಾಡಿನಾದ್ಯಂತ ವ್ಯಾಪಕ ಪ್ರಚೂರಪಡಿಸಲು ಹೊರಟಿರುವ ರಥಯಾತ್ರೆಯು ಎ.24ರಂದು ಬೆಳಿಗ್ಗೆ ಕಲಬುರಗಿ ನಗರಕ್ಕೆ ಆಗಮಿಸಲಿದ್ದು, ಅಂದು ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ರಥಕ್ಕೆ ಸ್ವಾಗತ ಕೋರಬೇಕು ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ ಮಾತನಾಡಿ, ರಾಜ್ಯದಲ್ಲಿಯೆ ಕಲಬುರಗಿ ಬಸವ ಜಯಂತಿ ಮಾದರಿಯಾಗಿ ಆಚರಿಸಲಾಗುವುದು, ಎಲ್ಲರು ಇದಕ್ಕೆ ತನು ಮನ ಧನದಿಂದ ಸಹಕರಿಸಬೇಕು ಎಂದರು.
ಸಭೆಯಲ್ಲಿ ಎ.ಕೆ.ರಾಮೇಶ್ವರ, ಭೀಮಪ್ಪ ಬೋನಾಳ, ಡಾ.ವಿಶಾಲಾಕ್ಷ ಕರಡಿ, ಡಾ.ಸುಧಾ ಹಾಲಕಾಯಿ, ಸುನೀಲ ಮಾನ್ಪಡೆ, ಮಹೇಶ ಹುಬ್ಳಿ, ರವಿಂದ್ರ ಶಾಬಾದಿ ಸೇರಿದಂತೆ ಅನೇಕರು ಮಾತನಾಡಿ ಬಸವ ಜಯಂತಿ ಅಂಗವಾಗಿ ಶರಣರ ವಚನಗಳ ಒಳಗೊಂಡ ಪುಸ್ತಕಗಳನ್ನು ವಿತರಿಸಬೇಕು, ಸಮ-ಸಮಾಜಕ್ಕೆ ದುಡಿದ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಸಾಧಕರನ್ನು ಗುರುತಿಸಿ ಸತ್ಕರಿಸಬೇಕು, ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ವಚನ ಸ್ಪರ್ಧೇ ಆಯೋಜಿಸಬೇಕು, ಜಯಂತಿ ಅಂಗವಾಗಿ ಮೂರು ದಿನಗಳ ಕಾಲ ನಗರದ ಪ್ರಮುಖ ವೃತ್ತ, ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಬೇಕು, ರಕ್ತದಾನ ಶಿಬಿರ ಆಯೋಜಿಸಬೇಕು, ಅಂಗಾಂಗ ದಾನದ ಕುರಿತು ಅರಿವು ಮೂಡಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು.
ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಅಪರ ಜಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರ ಪೊಲೀಸ್ ಉಪ ಅಯುಕ್ತ ಪ್ರವೀಣ ಹೆಚ್. ನಾಯಕ್, ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ, ಜೆಸ್ಕಾಂ ಇ.ಇ. ವೀರಭದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.