ಕಲಬುರಗಿ | ಕೆಕೆಆರ್ಡಿಬಿ ಅಭಿವೃದ್ಧಿ ಕಾರ್ಯಗಳ ಕುರಿತು ಶ್ವೇತಪತ್ರ ಹೊರಡಿಸಲು ಆಗ್ರಹ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಆಗಿರುವಂತಹ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಸರಕಾರ ಶ್ವೇತ ಪತ್ರ ಹೊರಡಿಸಬೇಕೆಂದು ಹೈದರಾಬಾದ್ ಕರ್ನಾಟಕ ಯುವ ಹೋರಾಟ ಸಮಿತಿಯ ಮುಖಂಡ ರಾಜು ಕುಳಗೇರಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಜಾರಿಗೆ ಬಂದು ಹತ್ತು ವರ್ಷಗಳ ಸಂಭ್ರಮದಲ್ಲಿ ರಾಜ್ಯ ಸರಕಾರ ಕಳೆದ ಸೆ.17ರಂದು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ, 56 ನಿರ್ಣಯಗಳಲ್ಲಿ 46 ನಿರ್ಣಯಗಳನ್ನು ಅಂಗೀಕರಿಸಿತು. ಆದರೆ ಇದುವರೆಗೂ ಯಾವುದೇ ನಿರ್ಣಯಗಳು ಅನುಷ್ಠಾನಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ, ಈ ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಗೆ ಸುಮಾರು 11,700 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಲ್ಲದೆ, ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವುದು ಕೂಡ ನಿರ್ಣಯಿಸಲಾಯಿತು. ಆದರೆ ಈವರೆಗೆ ಇದರ ಬಗ್ಗೆ ಸರಕಾರ ಮತ್ತು ಸಚಿವರು ಯಾವುದೇ ಚಕಾರ ಎತ್ತುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಆದರೂ ಪ್ರತಿ ವರ್ಷ ಆ ಖಾಲಿ ಹುದ್ದೆಗಳನ್ನು ತುಂಬುತ್ತಿಲ್ಲ. ಇಲ್ಲಿ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಇವೆ ಎಂದು ಸ್ಪಷ್ಟನೆಯು ಕೊಡುತ್ತಿಲ್ಲ, ನೌಕರರ ಬರ್ತೀಯ ವಿಷಯದಲ್ಲಿ ಕೂಡ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಹಾಗಾಗಿ ಈ ಭಾಗದ ನೌಕರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
371 (ಜೆ) ಜಾರಿಯಾಗಿ 10 ವರ್ಷಗಳ ಕಳೆದರೂ ಈ ಭಾಗಕ್ಕೆ ಆಗಬೇಕಾಗಿದ್ದಷ್ಟು ಅಭಿವೃದ್ಧಿ ಆಗಿಲ್ಲ, ಸಾವಿರಾರು ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರೂ ಕೇವಲ ಪತ್ರ ರೂಪದಲ್ಲಿವೆ. ಆದರೆ ಕೊಟ್ಟಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಹಾಗಾಗಿ ಇಲ್ಲಿಯವರೆಗೆ ಬಂದಿರುವ ಅನುದಾನದ ಖರ್ಚು ವೆಚ್ಚದ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಉಪಸಮಿತಿಯ ಉಪಾಧ್ಯಕ್ಷರನ್ನು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು. ಒಂದು ವೇಳೆ ಶ್ವೇತ ಪತ್ರ ಹೊರಡಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ಹನುಮಂತ್ ಸೇರಿ ಹಾಜರಿದ್ದರು.