ಕಲಬುರಗಿ | ಗುರುವಂದನಾ, ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

ಕಲಬುರಗಿ : "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಗುರುವಿನ ಬಲ ಶಿಷ್ಯಂದಿರ ಛಲ ಎಂದಿಗೂ ಮುಗಿಯುವುದಿಲ್ಲ" ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಪ್ರಾಥಮಿಕ ಶಾಲೆ ಶಹಾಬಾದ್ ಹಾಗೂ 1998-99ರ ಬ್ಯಾಚಿನ ಗೆಳೆಯರ ಬಳಗದ ವತಿಯಿಂದ "ಗುರು ವಂದನೆ ಹಾಗೂ ಸವಿ ನೆನಪುಗಳ" ಕಾರ್ಯಕ್ರಮವನ್ನು ಕಲಬುರಗಿಯ ಶ್ರೀನಿವಾಸ್ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಗುರು ವೃಂದದವರು ಸಸಿಗೆ ನೀರು ಹಾಕುವ ಮೂಲಕ ನೆರವೇರಿಸಿದರು. "ಅಂದು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ" ಎಂಬ ಮಾತುಗಳು ಗುರುಗಳ ತ್ಯಾಗ, ಶ್ರಮ ಮತ್ತು ಶಿಕ್ಷಣದ ಮಹತ್ವವನ್ನು ಪ್ರತಿಬಿಂಬಿಸಿತು. ವಿದ್ಯಾರ್ಥಿಗಳ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಅಪಾರ ಎಂಬುದನ್ನು ಗುರು ವೃಂದ ತಮ್ಮ ಅನುಭವಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿದ್ದ ಶಿಕ್ಷಕ ಬಸವರಾಜ್ ಹೊಸಕೇರಿ ಅವರು, “ಗುರುವಿನ ಸಂಬಂಧ ಎಂದಿಗೂ ಮುಗಿಯದ ಬಾಂಧವ್ಯ, ಈ ರೀತಿಯ ಕಾರ್ಯಕ್ರಮಗಳು ನಮ್ಮೆಲ್ಲರಲ್ಲೂ ಪುನಃಚೇತನತೆ ನೀಡುತ್ತವೆ” ಎಂದು ತಿಳಿಸಿದರು.
ಸಮಾರಂಭದಲ್ಲಿ ಬಸವರಾಜ ಹೋಸಕೆರಿ, ದಾನಯ್ಯ, ಕಾವೇರಿ, ವತ್ಸಲಾ ಕುಲಕರ್ಣಿ, ರೇಣುಕಾ ಕಂದಕೂರ, ಶಾರದಾ ಮಠ, ಪಾರ್ವತಿ, ಸುಮಿತ್ರಾ ತುಪ್ಪದಮಠ, ವಿಜಯಲಕ್ಷ್ಮಿ ಹೊಸಕೇರಿ, ಶಿವಲಿಂಗಮ್ಮಾ , ಜಗದೇವಿ, ರಾಜೇಶ್ವರಿ, ತಾರಬಾಯಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಶ್ವಿನಿ, ದೀಪ್ತಿ, ಶಿವಶರಣಮ್ಮ, ಸಿದ್ದಮ್ಮಾ, ಗಿರೀಶ, ಅಮರೇಶ, ಕು. ವಿಜಯಕುಮಾರ, ಮಹೇಶ್, ಆನಂದ, ಶಿವಕುಮಾರ, ರವಿಕುಮಾರ, ಪ್ರವೀಣ, ಕರಬಸಯ್ಯ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಅಮರೇಶ ಇಟಗಿ ಅವರು ಸ್ವಾಗತಿಸಿದರು. ರೇಣುಕಾ ಕೋಬಾಳ ನಿರೂಪಿಸಿದರು.