ಕಲಬುರಗಿ | ಅಕ್ರಮ ಮರಳು ದಂಧೆ ತಡೆಗಟ್ಟದಿದ್ದರೆ ಕಾಗಿಣಾ ನದಿಯಿಂದ ಪಾದಯಾತ್ರೆ: ಬಾಲರಾಜ ಗುತ್ತೇದಾರ್

ಕಲಬುರಗಿ : ಸಚಿವರ ಕ್ಷೇತ್ರದಲ್ಲಿ ಬಳ್ಳಾರಿ ಮಾದರಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ತಕ್ಷಣವೇ ಅಕ್ರಮ ಮರಳುಗಾರಿಕೆ ದಂಧೆ ತಡೆಗಟ್ಟಬೇಕು, ಇಲ್ಲದಿದ್ದರೆ ಮುಂಬರುವ ತಿಂಗಳಲ್ಲಿ ಕಾಗಿಣಾ ನದಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಅಶೋಕ ಗುತ್ತೇದಾರ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಪ್ರತಿನಿಧಿಸುವ ಸೇಡಂ, ಚಿತ್ತಾಪುರದಲ್ಲಿಯೇ ಅತಿ ಹೆಚ್ಚು ಮರಳು ಅಕ್ರಮ ದಂಧೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಹಿಂಬಾಲಕರು ದಿನದ 24 ಗಂಟೆ ಮರಳನ್ನು ಲೂಟಿ ಮಾಡುತ್ತಿದ್ದಾರೆ. ಪ್ರತಿ ಪಕ್ಷದಲ್ಲಿದ್ದಾಗ ನಮ್ಮ ಸರಕಾರದ ಅವಧಿಯಲ್ಲಿ ಯಾವುದೇ ಆಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಸಚಿವದ್ವಯರು, ಈಗ ತಮ್ಮ ಮತ ಕ್ಷೇತ್ರದಲ್ಲಿಯೇ, ತಮ್ಮ ಹಿಂಬಾಲಕರೆ ಓವರ್ ಲೋಡ್ ಮೂಲಕ ಮರಳು ಲೂಟಿ ಮಾಡುತ್ತಿದ್ದರೂ ಸಚಿವರು ಮತ್ತು ಜಿಲ್ಲಾ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಮಾತನಾಡಿ, ಬೇಸಿಗೆ ಇರುವ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ ಪೈಪ್ ಲೈನ್ ಮಾಡುವ ಮೂಲಕ ಶಾಶ್ವತ ಕುಡಿಯವ ಯೋಜನೆ ರೂಪಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಶ್ಯಾಮರಾವ್ ಸೂರನ್, ಬಸವರಾಜ ಬೀರಬಿಟ್ಟಿ, ಮಹೇಶ್ವರಿ ವಾಲಿ, ಮಲ್ಲಿಕಾರ್ಜುನ ನಾಟೀಕಾರ, ಪ್ರವೀಣ್ ಜಾಧವ್, ಮಾರುತಿ ಚವ್ಹಾಣ್ ಸೇರಿದಂತೆ ಇತರರು ಇದ್ದರು.