ಕಲಬುರಗಿ | ಫೆ.17 ರಿಂದ ಗುಲ್ಬರ್ಗಾ ವಿವಿಯಲ್ಲಿ ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಸಾಹಿತ್ಯೋತ್ಸವ
ಕಲ್ಯಾಣ ಕರ್ನಾಟಕದ 150 ವಿದ್ವಾಂಸರು ಭಾಗಿ : ಪ್ರೊ.ಜಿ.ಶ್ರೀರಾಮುಲು

ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಫೆ.17 ಮತ್ತು 18 ರಂದು ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಸಾಹಿತ್ಯೋತ್ಸವ ಹಮ್ಮಿಕೊಂಡಿದ್ದು, ರಾಜ್ಯ ಮತ್ತು ಹೊರ ರಾಜ್ಯದ ಸುಮಾರು 150 ವಿದ್ವಾಂಸರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಗುಲ್ಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಜಿ.ಶ್ರೀರಾಮುಲು ಹೇಳಿದರು.
ಗುರುವಾರ ವಿಶ್ವವಿದ್ಯಾಲಯದ ಕೈಲಾಶ ಭವನ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿ ಸಮಕಾಲೀನ ಕನ್ನಡ ಸಾಹಿತ್ಯದ ನೆಲೆ-ನಿಲುವು ಎಂಬ ಶೀರ್ಷಕೆಯೊಂದಿಗೆ ಆಯೋಜಿಸುತ್ತಿರುವ ಈ ಸಾಹಿತ್ಯೋತ್ಸವಕ್ಕೆ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಫೆ.17 ರಂದು ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಸಾಹಿತ್ಯೋತ್ಸವನ್ನು ಉದ್ಘಾಟಿಸುವರು ಎಂದರು.
ಗುಲ್ಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ವಿಶ್ವವಿದ್ಯಾಲಯಗಳು ಪ್ರವಚನ ಮಾಡುವ ಪಾಠ ಶಾಲೆಯಾಗಬಾರದು. ವೈಚಾರಿಕತೆ, ವೈಜ್ಞಾನಿಕತೆ ಮನೋಭಾವ ಬೆಳೆಸುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಸಮಕಾಲೀನ ಕನ್ನಡ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುವ ಎರಡು ದಿನಗಳ ಕಾಲ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಸಾಹಿತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಎರಡು ದಿನಗಳ ಈ ಸಾಹಿತ್ಯೋತ್ಸವದಲ್ಲಿ ಹರಿಹರ ಸಭಾಂಗಣ, ಅನುಭವ ಮಂಟಪ, ಕನಕ ಸಭಾಂಗಣ, ಕವಿರಾಜ ಮಾರ್ಗ ಸಭಾಂಗಣ, ಬಸವ ಸಭಾಂಗಣಗಳಲ್ಲಿ ಏಕಕಾಲದಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್, ಉರ್ದು-ಪರ್ಶಿಯನ್, ಮರಾಠಿ, ಪಾಲಿ ಸೇರಿದಂತೆ ವಿವಿಧ ವಿಷಯಗಳ ಒಟ್ಟಾರೆ 37 ಗೋಷ್ಠಿಗಳು ನಡೆಯಲಿದ್ದು, ಕಲ್ಯಾಣ ಕರ್ನಾಟಕದ 92 ಸೇರಿದಂತೆ 150 ವಿದ್ವಾಂಸರು ಭಾಗವಹಿಸಲಿದ್ದಾರೆ. ಜೊತೆಗೆ 100ಕ್ಕೂ ಹೆಚ್ಚು ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ನೆರೆಯ ಮಹಾರಾಷ್ಟ್ರ, ತೆಲಂಗಾಣಾ, ಆಂಧ್ರಪ್ರದೇಶದ ವಿದ್ವಾಂಸರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದರು.
50 ವರ್ಷದ ಇತಿಹಾಸ ಹೊಂದಿರುವ ಕನ್ನಡ ಅಧ್ಯಯನ ಸಂಸ್ಥೆಯು ಸಾಹಿತ್ಯ ಭೋಧನೆ, ಸಂಶೋಧನೆ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. 2017ರಲ್ಲಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು, ದಲಿತ ಸಾಹಿತ್ಯ ಸಮ್ಮೇಳನ ಮತ್ತು 2019ರಲ್ಲಿ ಸಾಮಾಜಿಕ ಸೌಹಾರ್ದತೆಗೆ ಸಾಹಿತ್ಯ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ ಎಂದ ಅವರು, ಎರಡು ದಿನಗಳ ಸಾಹಿತ್ಯೋತ್ಸವದಲ್ಲಿ ಕವಿರಾಜ ಮಾರ್ಗ ಸಭಾಂಗಣದಲ್ಲಿ ಪ್ರತಿ ಗಂಟೆಗೊಮ್ಮೆ ಹೊಸ ಪುಸ್ತಕ ಬಿಡುಗಡೆಯಾಗಲಿದೆ. ಸಾಹಿತ್ಯೋತ್ಸವವು ವೇದಿಕೆ ಕಾರ್ಯಕ್ರಮ ಅಲ್ಲ, ಅದು ಚರ್ಚಾಕೂಟವಾಗಿರಲಿದೆ ಎಂದು ಪ್ರೊ.ಎಚ್.ಟಿ.ಪೋತೆ ತಿಳಿಸಿದರು.
ರಾಜೇಂದ್ರ ಚೆನ್ನಿ, ಅಮರೇಶ ನುಗಡೋಣಿ, ಹೊನ್ನುಸಿದ್ಧಾರ್ಥ, ಎಚ್.ಎಸ್. ಅನುಪಮಾ, ಡಿ.ಎಸ್. ಚೌಗಲೆ, ಚೆನ್ನಬಸಯ್ಯ ಹಿರೇಮಠ, ಚಲುವರಾಜು, ಸಿದ್ದನಗೌಡ ಪಾಟೀಲ, ಕೆ. ಶಾರದಾ, ತಾರಿಣಿ ಶುಭದಾಯಿನಿ, ವಿಕ್ರಮ ವಿಸಾಜಿ, ಬಾಳಾಸಾಹೇಬ ಲೋಕಾಪುರ, ಮೀನಾಕ್ಷಿ ಬಾಳಿ, ಐ.ಎಸ್. ವಿದ್ಯಾಸಾಗರ, ಜಿ.ಎನ್. ಮೋಹನ್, ಮೊಗಳ್ಳಿ ಗಣೇಶ, ಎಸ್.ರಶ್ಮಿ, ದೇವು ಪತ್ತಾರ, ದಸ್ತಗೀರಸಾಬ ದಿನ್ನಿ, ವೈ.ಬಿ. ಹಿಮ್ಮಡಿ, ವಸುಧೇಂದ್ರ, ಕೆ. ರವೀಂದ್ರನಾಥ ಮುಂತಾದವರು ಇದರಲ್ಲಿ ಭಾಗವಹಿಸಲಿದ್ದು, ಫೆ.17 ರಂದು ವಿ.ವಿ.ಯ ಥೀಮ್ ಪಾರ್ಕ್ ನಲ್ಲಿ ಸಂಗೀತ ಗೋಷ್ಠಿ ಸಹ ಆಯೋಜಿಸಿದೆ ಎಂದು ಪ್ರೊ.ಎಚ್.ಟಿ.ಪೋತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೀಷ್ ಅಧ್ಯಯನ ಸಂಸ್ಥೆಯ ಡಾ.ರಮೇಶ ರಾಠೋಡ, ಮತ್ತು ಉರ್ದು ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ ರಬ್ ಉಸ್ತಾದ್ ಇದ್ದರು.