ಕಲಬುರಗಿ | ಫೆ.24 ರಿಂದ ರಾಷ್ಟ್ರಮಟ್ಟದ ಬೃಹತ್ ಸರಸ್ ಮೇಳ : ಸಚಿವ ಶರಣಪ್ರಕಾಶ್ ಪಾಟೀಲ್

ಕಲಬುರಗಿ : ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಫೆ.24 ರಿಂದ ಮಾ.5 ರವರೆಗೆ ನಗರದ ಶ್ರೀ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ರಾಷ್ಟ್ರಮಟ್ಟದ ನಮ್ಮ ಸರಸ್ ಮೇಳ-2025 ಆಯೋಜನೆಗೊಂಡಿದ್ದು, ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 10ದಿನಗಳ ಕಾಲ ನಡೆಯಲಿರುವ ಸರಸ್ ಮೇಳ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಫೆ.24 ರಂದು ರಾಷ್ಟ್ರ ಮಟ್ಟದ ಸರಸ್ ಮೇಳವನ್ನು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ & ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ್ ಆರ್.ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಗಣ್ಯ ಮಾನ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾವಾರು ಅಧಿಕಾರಿಗಳು ಹಾಗೂ ಜಿಲ್ಲೆಯ ಹಾಗೂ ಸುತ್ತಮುತ್ತಲಿನ 2000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ಮಹಿಳೆಯರು, ಯುವ ಜನತೆ ಹಾಗೂ ಇನ್ನಿತರರು ಆಗಮಿಸಲಿದ್ದಾರೆ.
ಮೇಳದಿಂದ ಕಲಬುರಗಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಿದ್ದು, ಪ್ರತಿದಿನ ಬೆಳಗ್ಗೆ 10:30 ರಿಂದ ರಾತ್ರಿ 09:30 ರ ವರೆಗೆ ರಾಷ್ಟ್ರಮಟ್ಟದ ಸರಸ್ ಮೇಳ ನಡೆಯಲಿದ್ದು, ಮೇಳದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸ್ವ- ಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಲಿದ್ದು, ಆಯಾ ರಾಜ್ಯಗಳ ಪ್ರಮುಖ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಬೃಹತ್ ಮಟ್ಟದಲ್ಲಿ 230 ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ, 20 ಲೈವ್ ಫುಡ್ ಸ್ಟಾಲ್ :
ರಾಷ್ಟ್ರ ಮಟ್ಟದ ನಮ್ಮ ಸರಸ್ ಮೇಳದಲ್ಲಿ ಸ್ವ-ಸಹಾಯ ಗುಂಪುಗಳ ಮಹಿಳೆಯರು ಉತ್ಪಾದಿಸಿರುವ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಒಟ್ಟು 230 ಮಳಿಗೆಗಳನ್ನು ಹಾಗೂ 20 ಲೈವ್ ಫುಡ್ ಸ್ಟಾಲ್ ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಲೈವ್ ಫುಡ್ ಕೋರ್ಟ್ ನಲ್ಲಿ ರಾಜ್ಯದ 10 ಮಳಿಗೆಗಳು ಹಾಗೂ ಬೇರೆ ರಾಜ್ಯಗಳ 10 ಲೈವ್ ಫುಡ್ ಸ್ಟಾಲ್ ಗಳಲ್ಲಿ ಸ್ಥಳದಲ್ಲೇ ವಿವಿಧ ತಿಂಡಿ ಹಾಗೂ ಭಕ್ಷ್ಯಗಳನ್ನು ತಯಾರಿಸಿ ಕೊಡಲಾಗುವುದು. ಅಕ್ಕ ಕಥೆ ಶೀರ್ಷಿಕೆ ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಲೈವ್ ಫುಡ್ ಕೋರ್ಟ್ ನಲ್ಲಿ ರುಚಿ ಹಾಗೂ ಶುಚಿಯಾದ ಆಹಾರ ಪದಾರ್ಥಗಳು ಕೈಗೆಟುಕುವ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಪ್ರಮುಖವಾಗಿ ದಾವಣಗೆರೆ ಬೆಣ್ಣೆ ದೋಸೆ. ಮೈಸೂರು ಮಸಾಲ ದೊಸೆ, ಗಿರಮಿಟ್, ಬಜ್ಜಿ ಸೇರಿದಂತೆ ವಿವಿಧ ವೈವಿಧ್ಯಮಯ ಖಾದ್ಯಗಳು ದೊರೆಯಲಿವೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ :
ನಮ್ಮ ಸರಸ್ ಮೇಳದಲ್ಲಿ 10 ದಿನಗಳ ಕಾಲ ರಾಜ್ಯದ ಖ್ಯಾತ ಸಂಗೀತಗಾರರು ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6:30 ರಿಂದ ರಾತ್ರಿ 9:30 ರ ವರೆಗೆ ಆಯೋಜಿಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದರು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.
ನಮ್ಮ ಸರಸ್ ಮೇಳದ ವೈವಿಧ್ಯಮಯ ಉತ್ಪನ್ನಗಳು :
ಕರ್ನಾಟಕದ ಇಳಕಲ್ ಸೀರೆ, ಕಸೂತಿ ವಸ್ತುಗಳು, ಚನ್ನಪಟ್ಟಣ ಗೊಂಬೆ, ಬೀದರ್ ಜಿಲ್ಲೆಯ ಬಿದರಿ ಅಲಂಕಾರಿಕ ಉತ್ಪನ್ನಗಳು, ಕೊಪ್ಪಳ ಜಿಲ್ಲೆಯ ಕಿನ್ನಾಳ ಮಕ್ಕಳ ಆಟದ ಗೊಂಬೆಗಳು, ಉತ್ತರ ಭಾರತದಿಂದ ಜಮ್ಮು ಕಾಶ್ಮೀರದ ಕಸೂತಿ ಉಡುಪುಗಳು, ಪಂಜಾಬ್ ಬಳೆಗಳು, ಸಿಕ್ಕಿಂ ಮತ್ತು ಬಿಹಾರದ ಕೈಮಗ್ರ, ದಕ್ಷಿಣ ಭಾರತದ ತಮಿಳುನಾಡಿನ ಕೃತಕ ಆಭರಣಗಳು, ಕೇರಳದ ಮಣಿಗಳು, ಆಂದ್ರ ಪ್ರದೇಶದ ಆಟಿಕೆಗಳು ಸೇರಿದಂತೆ ಮುಂತಾದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಪ್ರಮುಖ ಆಕರ್ಷಣೆಯಾಗಿದೆ.
ತರಬೇತಿ ಕಾರ್ಯಾಗಾರ :
ನಮ್ಮ ಸರಸ್ ಮೇಳದ ಮುಖ್ಯ ವೇದಿಕೆಯ ಪ್ರಾಂಗಣದದಲ್ಲಿ ಪ್ರತಿದಿನ ವಿವಿಧ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪುಮುಖವಾಗಿ ಮಹಿಳೆಯರ ಉತ್ಪನ್ನಗಳಿಗೆ ಪ್ಯಾಕಿಂಗ್ ಹಾಗೂ ಬ್ಯಾಂಡಿಂಗ್, ಮಾರುಕಟ್ಟೆ ಕೌಶಲ್ಯ, ಉತ್ಪನ್ನಗಳ ಮೌಲ್ಯವರ್ಧನೆ, ಸರ್ಕಾರದ ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯಗಳು, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಾಮಾಜಿಕ ವಿಮಾ ಭದ್ರತಾ ಸೌಲಭ್ಯ ಸೇರಿದಂತೆ ಅವರ ಉದ್ಯಮವನ್ನು ಮೇಲ್ದರ್ಜೆಗೆ ಏರಿಸಲು ಬ್ಯಾಂಕ್ ಲಿಂಕೇಜ್ ಸೇವೆಗಳ ಕುರಿತು ಉಪನ್ಯಾಸ ಹಾಗೂ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ.
ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ರಾಷ್ಟ್ರ ಮಟ್ಟದ ಈ ಸರಸ್ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯಮಯ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಮ್ಮ ಸರಸ್ ಮೇಳವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.