ಕಲಬುರಗಿ | ನುಡಿದಂತೆ ಸಿಬ್ಬಂದಿಗಳ ವೇತನ ಪರಿಷ್ಕರಣೆ : ಶಶೀಲ್ ನಮೋಶಿ

ಕಲಬುರಗಿ: ನುಡಿದಂತೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಮಸ್ತ ಬೋಧಕೇತರ ಸಿಬ್ಬಂದಿಗಳಿಗೆ 6 ನೇ ವೇತನ ಆಯೋಗ ಪರಿಷ್ಕರಣೆ ಮಾಡಿದ್ದೇವೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಮಸ್ತ ಬೋಧಕೇತರ ಸಿಬ್ಬಂದಿಗೆ 6ನೇ ವೇತನ ಆಯೋಗ ಪರಿಷ್ಕರಣೆ ಮಾಡಿರುವ ಸಲುವಾಗಿ ಬೋಧಕೇತರ ಸಿಬ್ಬಂದಿ ಪ್ರಸ್ತುತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಏರ್ಪಡಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಈ ಪರಿಷ್ಕೃತ 6 ನೇ ವೇತನದಿಂದ ರತಿಯೊಬ್ಬ ಬೋಧಕ ಸಿಬ್ಬಂದಿಗಳಿಗೆ 4 ರಿಂದ 14 ಸಾವಿರ ರೂ. ಗಳ ವರೆಗೆ ವೇತನ ಹೆಚ್ಚಳ ಆಗಲಿದೆ ಎಂದರು.
ಶೈಕ್ಷಣಿಕ ಕ್ಷೇತ್ರದಿಂದಲೇ ನಾನು ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ಸಿಬ್ಬಂದಿಗಳೇ ನನ್ನ ಜೀವಾಳ ಅವರ ಋಣ ನನ್ನ ಮೇಲೆ ಬಹಳಷ್ಟಿದೆ ಎಂದು ಹೇಳಿದರು.
ನಾನು ಸಂಸ್ಥೆಯ ಅಧ್ಯಕ್ಷನಾಗಿ ಮಾತನಾಡುತ್ತಿದ್ದೆನೆ, ಇಲ್ಲಿ ರಾಜಕಾರಣಿಯಾಗಿ ಮಾತನಾಡುತ್ತಿಲ್ಲ, ನಾನು ಹಿಂದೆ ಅಧ್ಯಕ್ಷನಾಗಿದ್ದಾಗಲೆ 5ನೇ ವೇತನ ಆಯೋಗ ಶಿಫಾರಸು ಘೋಷಣೆ ಮಾಡಿ ವೇತನ ದ್ವಿಗುಣ ಮಾಡಿದ್ದೆ. ಆದರೆ ಹಿಂದಿನ ಆಡಳಿತ ಮಂಡಳಿಯು ವೇತನ ಪರಿಷ್ಕರಣೆ ಮಾಡಲೇ ಇಲ್ಲ, ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಇರಬೇಕಾದ ಸಂಬಳ ಇಲ್ಲವೆ ಇಲ್ಲ. ಇದರಿಂದಾಗಿ ನನಗೆ ಬಹಳ ನೋವಿತ್ತು. ಅದಕ್ಕಾಗಿಯೇ ನಮ್ಮ ತಂಡ ಚುನಾವಣೆ ಪ್ರಣಾಳಿಕೆಯಲ್ಲಿ ವೇತನ ಪರಿಷ್ಕರಣೆ ಮಾಡುವುದಾಗಿ ಹೇಳಿತ್ತು. ಈಗ ಅದರಂತೆಯೇ ಸಂಬಳ ಹೆಚ್ಚಳ ಮಾಡಿದ್ದೇವೆ ಎಂದರು.
ನಮ್ಮ ಆಡಳಿತ ಮಂಡಳಿಯ ಸದಸ್ಯರು ಬಸವೇಶ್ವರ ಆಸ್ಪತ್ರೆಯನ್ನು ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪಣ ತೊಟ್ಟಿದೆ. ಸಸ್ಥೆಯಿಂದ ಅನೇಕ ಸುಪರ್ ಸ್ಪೇಷಲಿಟಿ ಆಸ್ಪತ್ರೆಗಳನ್ನು ತೆಗೆಯುವ ಕನಸಿದೆ ಎಂದು ಹೇಳಿದರು.
ಇನ್ನು ನಮ್ಮ ಸಂಸ್ಥೆಯ ಹೃದಯವಾಗಿರುವ ಪಿಡಿಎ ಇಂಜಿನಿಯರಿಂಗ್ ಕಾಲೇಜು ಈಗ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಐಟಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೇಳಿದರು.
ನಮ್ಮ ಆಡಳಿತ ಮಂಡಳಿ ಬಂದ ನಂತರ ದೇಶ ವಿದೇಶಗಳ ಸುಮಾರು 33 ಕಂಪನಿಗಳು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದೆ, ಸುಮಾರು 292 ವಿಧ್ಯಾರ್ಥಿಗಳು ನಮ್ಮ ಕಾಲೇಜಿನಿಂದ ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್, ಸಾವಿತ್ರಿ ಪಟ್ಟಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ.ನಾಗೇಂದ್ರ ಮಂಠಾಳೆ, ಡಾ.ರಜನೀಶ್ ವಾಲಿ, ಡಾ.ಮಹಾದೇವಪ್ಪ ರಾಂಪೂರೆ, ಡಾ.ಶರಣಬಸಪ್ಪ ಹರವಾಳ, ಡಾ.ಅನಿಲಕುಮಾರ ಪಟ್ಟಣ, ಡಾ.ಕಿರಣ್ ದೇಶಮುಖ್ , ನಾಗಣ್ಣ ಘಂಟಿ , ನಿಶಾಂತ್ ಎಲಿ ಬೋಧಕೇತರ ಒಕ್ಕೂಟದ ಶಿವಲಿಂಗಪ್ಪ ಭಂಡಕ್, ಲಿಂಗರಾಜ ಪಾಟೀಲ, ಸುರೇಶ್ ಮಾಂಡ್ರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು, ಶರಣಬಸವ ಸ್ವಾಮಿ ಇನಾಂದಾರ್ ವಂದಿಸಿದರು.