ಕಲಬುರಗಿ | ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕಲಬುರಗಿ : ನಾವೀಗ ಏನೆಲ್ಲ ಸಾಧಿಸಿದ್ದೇವೆ. ಇಡೀ ಜಗತ್ತೇ ನಮ್ಮ ಅಂಗೈಯಲ್ಲಿದೆ. ಅಸಾಧ್ಯ ಕೆಲಸವನ್ನು ಸಹ ಇಂದು ಅತ್ಯಂತ ಸಲೀಸಾಗಿ ಮಾಡಿ ಮುಗಿಸುವ ಡಿಜಿಟಲ್ ಯುಗದಲ್ಲಿದ್ದೇವೆ. ಆದರೆ ಒಂದನ್ನು ಮಾತ್ರ ಕಳೆದುಕೊಂಡಿದ್ದೇವೆ. ಅದುವೇ ಮೌಲ್ಯ ಎಂದು ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ ಕಳವಳ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ 2024ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ (ಎ,ಬಿ ಮತ್ತು ಎಸ್ ಎಫ್ ಯು) ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಮಾಲೆ-1 ರಲ್ಲಿ 'ಯುವಜನತೆ ಮತ್ತು ಮಾಧ್ಯಮಗಳು' ವಿಷಯ ಕುರಿತು ಮಾತನಾಡಿದ ಅವರು, ಯುವಕರು ಮಾಧ್ಯಮಗಳ ಸದುಪಯೋಗಪಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಮೌಲ್ಯಗಳ ಕುಸಿತದಿಂದಾಗಿ ಪ್ರಜಾಪ್ರಭುತ್ವದ ನಾಲ್ಕನೇ ಕಂಬ ಕೂಡ ಕುಸಿಯುತ್ತಿದೆ. ಯುವಕರು ಸಾಮಾಜಿಕ ಜಾಲತಾಣಗಳನ್ನು ತಮ್ಮ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕಮಲಾಪುರ ಸರ್ಕಾರಿ ಡಿಗ್ರಿ ಕಾಲೇಜು ಪ್ರಾಧ್ಯಾಪಕ ಡಾ.ಗಿರೀಶ ರಾಠೋಡ ಮಾತನಾಡಿದರು.
ಚಿಂಚೋಳಿ ಸಿ.ಬಿ. ಪಾಟೀಲ ಕಾಲೇಜಿನ ಶಿಲ್ಪಾ ಪಾಟೀಲ, ಸಾಮಾಜಿಕ ಕಾರ್ಯಕರ್ತ ವಿಠ್ಠಲ್ ಚಿಕಣಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಗ್ರಂಥಪಾಲಕ ಡಾ.ವಿನೋದ ಹತ್ತಿಗೂಡುರ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಶರಣಪ್ಪ ಸೈದಾಪುರ, ಅಪರ್ಣಾ, ಡಾ.ಶರಣಪ್ಪ ಗುಂಡಗುರ್ತಿ ವೇದಿಕೆಯಲ್ಲಿದ್ದರು.
ಡಾ.ಖಾಜಾವಲಿ ಈಚನಾಳ, ಭೀಮಣ್ಣ ಬೆಡಕಪಳ್ಳಿ, ಶಿಬಿರಾರ್ಥಿಗಳು ಭಾಗವಹಿಸಿದ್ದರು.