ಕಲಬುರಗಿ | ಎ.12ರಂದು ಒಳ ಮೀಸಲಾತಿ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ : ಮಹಾದೇವ ಮೋಘ

ಕಲಬುರಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಎ.6 ರಿಂದ ರಾಜ್ಯದಾದ್ಯಂತ ನಡೆಯಲಿರುವ ಗಣತಿಯಲ್ಲಿ ಛಲವಾದಿ ಸಮುದಾಯದ ಜನರು ಮೂಲ ಜಾತಿಯನ್ನು ನಮೂದಿಸುವ ಮೂಲಕ ಸಮರ್ಪಕ ಮಾಹಿತಿಯನ್ನು ದಾಖಲಿಸಬೇಕೆಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಅಧ್ಯಕ್ಷ ಮಹಾದೇವ ಮೋಘ ಮನವಿ ಮಾಡಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಜಾತಿಗಳ ಆಧಾರದ ಮೇಲೆ ಜಾತಿಗಳ ಗಣತಿ ನಡೆಯುತ್ತಿದ್ದು, ಛಲವಾದಿ ಸಮುದಾಯದ ಉಪಜಾತಿಗಳು ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಒಳ ಮೀಸಲಾತಿ ಸಮೀಕ್ಷೆ ಪ್ರಾರಂಭವಾಗಿರುವ ಪ್ರಯುಕ್ತ ಬಲಗೈ ಸಮುದಾಯದ ಛಲವಾದಿ, ಮಹರ, ಹೊಲೆಯ, ಪರೈಯ, ಬೇಗಾರ, ಮಾಲ, ಚನ್ನಿದಾಸರ ಮತ್ತು ಸಂಬಂಧಿಸಿದ ಉಪಜಾತಿಗಳ ಸಮುದಾಯಗಳ ಜನರಿಗೆ ಗಣತಿದಾರರು ಮನೆ ಮನೆಗೆ ಆಗಮಿಸಿದಾಗ ಹೇಗೆ ಮಾಹಿತಿಯನ್ನು ನೀಡಬೇಕೆಂಬುವುದರ ಕುರಿತು ಎ.12 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು, ಹೋರಾಟಗಾರರು, ಸಾಹಿತಿ, ಚಿಂತಕರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಲಹೆ ಸೂಚನೆ ನೀಡಬೇಕೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ವಾಲಿ, ಸಂಪತ್ ವಳಕೇರಿ, ಮಹೇಶ ಮದನಕರ್, ಚಂದ್ರಕಾಂತ ಬಂಗಲೆ ಸೇರಿದಂತೆ ಇತರರು ಇದ್ದರು.