ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ : ಶಾಸಕ ಎಂ.ವೈ.ಪಾಟೀಲ್
ಕಲಬುರಗಿ : ʼಭಾರತವು ಕೃಷಿ ಪ್ರಧಾನವಾದ ದೇಶವಾಗಿದೆ. ಅದರಲ್ಲೂ ಅಫಜಲಪುರ ತಾಲೂಕಿನಲ್ಲಿ ರೈತರ ಕಾರ್ಯ ಚಟುವಟಿಕೆಗಳು ನೀರು ಮತ್ತು ವಿದ್ಯುತ್ನಿಂದ ಕೂಡಿರುವುದರಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ರೈತರಿಗೆ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಗುಣಮಟ್ಟದ ವಿದ್ಯುತ್ ಪೂರೈಸಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತದೆʼ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.
ಅಫಜಲಪುರ ತಾಲೂಕಿನ ಘತ್ತರಗಾ 110 ಕೆವಿ ಉಪಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಲೇವನ್ ಕೆವಿ ಸಿದ್ದೇಶ್ವರ್ ಫೀಡರ್ ಮತ್ತು ಹಿಂಚಗೇರಾ ಫೀಡರ್ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ʼಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ರೈತರಿಗೆ ನೀರು ಮತ್ತು ವಿದ್ಯುತ್ ಅತ್ಯಗತ್ಯವಾಗಿದ್ದು, ಅದನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರ ನಿರಂತರವಾಗಿ ರೈತರ ಜತೆ ನಿಂತುಕೊಂಡಿದೆ. ಜೆಸ್ಕಾಂ ಇಲಾಖೆ ತುರ್ತುಸೇವೆ ಪಟ್ಟಿಯಲ್ಲಿರುವುದರಿಂದ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ರಾತ್ರಿಯಾದರೂ ವಿದ್ಯುತ್ ಕಂಬ ಏರಿ ಸಮಸ್ಯೆ ಸರಿ ಪಡಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ವಿದ್ಯುತ್ ಪರಿವರ್ತಕ ಮತ್ತು ಪರವಾನಿಗೆ ಪತ್ರ ವಿತರಣೆ ಮಾಡಲಾಯಿತು.ಆಳಂದ ಎಇಇ ಪ್ರಭು, ಶಿವಶರಣಪ್ಪ ಮೇತ್ರಿ, ಮಹಾರಾಜ ಜಮಾದಾರ, ದಯಾನಂದ ನಿರೋಣಿ, ಭೀಮಾಶಂಕರ ಹೂಗಾರ, ಕಲ್ಯಾಣಿ ಸಿಂದಗೇರಿ,ಶರಣು ಕುಂಬಾರ, ಶಿವಾನಂದ ಗಾಡಿಸಾಹುಕಾರ, ವಿಠ್ಠಲ್ ನಾಟೀಕಾರ, ಮಹಾಂತೇಶ ಪಾಟೀಲ್, ಪಾಂಡುರಂಗ ಸುತಾರ, ಶ್ರೀಶೈಲ್ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.