ಕೆಕೆಆರ್ಡಿಬಿ ಶಿಕ್ಷಣ ಸುಧಾರಣಾ ಸಮಿತಿ ಪುನರ್ ರಚನೆ : ಸಮಿತಿಯ ಅಧ್ಯಕ್ಷರಾಗಿ ಡಾ.ಛಾಯಾ ದೇಗಾಂವಕರ್ ನೇಮಕ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸುಧಾರಣಾ ತಜ್ಞರ ಸಮಿತಿ ಪುನರ್ ರಚಿಸಿ, ಡಾ.ಛಾಯಾ ದೇಗಾಂವಕರ ಅಧ್ಯಕ್ಷ ನೇತೃತ್ವದ 8 ಜನ ಸದಸ್ಯರು ಹೊಂದಿರುವ ಶಿಕ್ಷಣ ತಜ್ಞರ ಸಮಿತಿ ಪುನರ್ ರಚಿಸಲಾಗಿದೆ ಎಂದು ಕೆಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ತಿಳಿಸಿದರು.
ರವಿವಾರ ಕೆಕೆ.ಆರ್.ಡಿ.ಬಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿ ಮತ್ತು ಶಿಕ್ಷಣ ಸುಧಾರಣೆ ಹಿತದೃಷ್ಟಿಯಿಂದ ಡಾ.ಛಾಯಾ ದೇಗಾಂವಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಡಾ.ಅಬ್ದುಲ್ ಖದೀರ್ ಬೀದರ್, ಮಲ್ಲಿಕಾರ್ಜುನ್ ಎಂ.ಎಸ್ ಬೀದರ್, ಬಳ್ಳಾರಿಯ ಫ್ರಾಂಸಿಸ್ ಬಾಷ್ಯಮ್, ಕಲಬುರಗಿಯ ರುದ್ರೇಶ್ ಎಸ್.ಎನ್.ಬಿ.ಪಾಟೀಲ್, ಯಶವಂತ ಹರಸೂರ್ ಹಾಗೂ ಡಾ.ನಾಗಾಬಾಯಿ ಬಿ ಬುಳ್ಳಾ ಸದಸ್ಯರು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
2 ವರ್ಷದಲ್ಲಿ ವರದಿ ನೀಡಲು ನೂತನ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ತ್ವರಿತ ಬದಲಾವಣೆಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಕೋರ್ಸ್ಗಳನ್ನು ಪರಿಚಯಿಸುವಂತೆ ಸಹ ತಿಳಿಸಿದೆ. ಮುಂದಿನ ದಿನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಕಾಣಲು ಆರೋಗ್ಯ ಸಮಿತಿ ಸಹ ರಚಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ.ಕ.ಪ್ರದೇಶದ 200 ಕಡೆ ಕೆ.ಪಿ.ಎಸ್. ಮಾದರಿಯ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಗೆ ಚಿಂತನೆ ನಡೆದಿದೆ. ಮುಂಬರುವ 2025-26ರ ಆಯವ್ಯಯದಲ್ಲಿ ಈ ಬಗ್ಗೆ ಘೋಷಣೆಯಾಗಲಿದೆ. ಸಿ.ಎಸ್.ಆರ್. ನಿಧಿ ಬಳಸಿಕೊಂಡು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4-5 ಶಾಲೆಗಳನ್ನು ತಲಾ 5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಮಾರ್ಚ್ ನಂತರ ನಡೆಯುವ ಮಂಡಳಿ ಸಭೆಯಲ್ಲಿ ಇದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ನಗರವಾಸಿ ಮಕ್ಕಳಂತೆ ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ರಾಜ್ಯ ಸರ್ಕಾರವು ಮಂಡಳಿಗೆ 5,000 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಅದರಲ್ಲಿ ಇದೂವರೆಗೆ 4,500 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮತಿ ಸಿಕ್ಕಿದೆ. ಈ ವರ್ಷ ಸಹ 5,000 ಕೋಟಿ ರೂ. ಘೋಷಣೆಗೆ ಇತ್ತೀಚೆಗೆ ಆಯವ್ಯಯಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ವಿನಂತಿ ಮಾಡಿಕೊಂಡಿದ್ದು, ಅಷ್ಟು ಹಣ ಘೋಷಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಮಂಡಳಿಗೆ ನೀಡಲಾಗುವ ಹಣ ಸಂಪೂರ್ಣವಾಗಿ ಖರ್ಚು ಮಾಡಲು ಪ್ರತ್ಯೇಕ 229 ಇಂಜಿನೀಯರ್ ಒಳಗೊಂಡ ಇಂಜಿನೀಯರಿಂಗ್ ವಿಂಗ್ ಸ್ಥಾಪನೆ ಕುರಿತು ಸಿಎಂ ಜೊತೆ ಚರ್ಚಿಸಲಾಗಿದೆ. ಇದಲ್ಲದೆ ಮಂಡಳಿಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಾ.ಅಜಯ್ ಸಿಂಗ್ ಅವರು, ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಆರ್ಥಿಕ ತಜ್ಞ ಪ್ರೊ.ಗೋವಿಂದರಾವ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದರಿಂದ, ಅವರೊಂದಿಗೂ ಪ್ರದೇಶದ ಅಭಿವೃದ್ಧಿ ಕುರಿತಂತೆ ಸಮಾಲೋಚನೆ ಮಾಡಲಾಗಿದೆ ಎಂದರು.
ಕಳೆದ ಸೆಪ್ಟೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಳಿಯ 857 ಕೋಟಿ ರೂ. ಗಳ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ ಪರಿಣಾಮ ಇಂದು 439 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಉಪ ಕೇಂದ್ರ ನಿರ್ಮಾಣ, ದುರಸ್ತಿ, ಅಂಬುಲೆನ್ಸ್ ಸೇವೆ ಒದಗಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಇದಲ್ಲದೆ 50-50 ಅನುಪಾತ ಅನುದಾನದಡಿ ಅಲ್ಪಸಂಖ್ಯಾತ ಇಲಾಖೆಯ ಸಹಯೋಗದಡಿ 48 ಮೌಲಾನಾ ಅಜಾದ್, ಮೋರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆ, 34 ಬಿ.ಸಿ.ಎಂ. ಹಾಸ್ಟೆಲ್ ಸ್ಥಾಪನೆ, 186 ಕೋಟಿ ರೂ. ಮೊತ್ತದ ಎಸ್.ಸಿ.-ಎಸ್.ಟಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಕಲ್ಯಾಣ ಪಥ ಯೋಜನೆಯಡಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 330 ಕೋಟಿ ರೂ. ಮಂಡಳಿ ನೀಡಿದ್ದು, ಶೀಘ್ರವೇ ಸಿ.ಎಂ. ಚಾಲನೆ ನೀಡಲಿದ್ದಾರೆ. ಕಂದಾಯ ಇಲಾಖೆ-ಕೆ.ಕೆಆರ್.ಡಿ.ಬಿ. ಸಹಭಾಗಿತ್ವದಲ್ಲಿ ಪ್ರದೇಶದ ನೂತನ 16 ತಾಲೂಕಿನಲ್ಲಿ ತಲಾ 8.60 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನ ನಿರ್ಮಾಣಕ್ಕೂ ಟೆಂಡರ್ ಕರೆಯಲಾಗಿದ್ದು, ಮುಂದಿನ ದಿನದಲ್ಲಿ ಅಭಿವೃದ್ಧಿ ಚಿತ್ರಣ ಕಾಣಬಹುದಾಗಿದೆ ಎಂದರು.
ಅಕ್ಷರ ಆವಿಷ್ಕಾರ ಮುಂದುವರಿಕೆ :
ಮಂಡಳಿಯಿಂದ ಕಳೆದ 2023-24 ಮತ್ತು 2024-25ನೇ ವರ್ಷವನ್ನು ಶೈಕ್ಷಣಿಕ ವರ್ಷವೆಂದು ಘೋಷಿಸಿ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ 6,538 ಶಾಲೆಗಳಿಗೆ ದುರಸ್ತಿ ಭಾಗ್ಯ ಒಲಿದಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಕ.ಕ. ಭಾಗದಲ್ಲಿ 1,008 ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿ ಆರಂಭಿಸಲಾಗಿದೆ. ಹೀಗಾಗಿ ಮುಂದಿನ 2025-26 ವರ್ಷದಲ್ಲಿಯೂ ಸಹ ಅಕ್ಷರ ಆವಿಷ್ಕಾರ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಇದ್ದರು.