ಕನ್ನಡ ನಾಮಫಲಕ ಬಳಸದಿದ್ದರೆ ಉಗ್ರ ಹೋರಾಟ : ಸೋಮನಾಥ ಕಟ್ಟಿಮನಿ
ಕಲಬುರಗಿ : ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಬೆಂಗಳೂರು ವಿಧಾನಸೌಧದಲ್ಲಿ ಮಾತ್ರ ಬಳಕೆಯಲ್ಲಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಕನ್ನಡಕ್ಕಿಂತ ಅನ್ಯಭಾಷೆಯೇ ಹೆಚ್ಚಾಗಿ ಬಳಕೆಯಾಗುತ್ತಿದೆ. ಇನ್ಮುಂದೆ ಕನ್ನಡ ನಾಮಫಲಕಗಳನ್ನು ಬಳಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಕಟ್ಟಿಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಅಂಗಡಿ - ಮುಂಗಟ್ಟು ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಕನ್ನಡ ನಾಮಫಲಕಗಳು ಅಳವಡಿಸಬೇಕೆಂದು ಒತ್ತಾಯಿಸಿ, ಹೋರಾಟ ಮಾಡಿರುವ ಕನ್ನಡ ಸೈನ್ಯ ಬೇರೆ ಭಾಷೆಗಳ ನಾಮಫಲಕಕ್ಕೆ ಕಪ್ಪು ಮಸಿ ಬಳಿಯುವ ಮೂಲಕ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡಿದೆʼ ಎಂದು ತಿಳಿಸಿದರು.
ನವೆಂಬರ್ ತಿಂಗಳೊಳಗಾಗಿ ರಾಜ್ಯದಲ್ಲಿ ಕನ್ನಡ ಭಾಷೆಯ ನಾಮಫಲಕಗಳು ಅನುಷ್ಠಾನಕ್ಕೆ ತರಬೇಕು, ಒಂದು ವೇಳೆ ಇದನ್ನು ಮಾಡದಿದ್ದರೆ ನಾಡಿನ ವಿವಿಧ ಸಂಘ ಸಂಸ್ಥೆಗಳ, ಸಾಹಿತಿಗಳು, ಬುದ್ದಿಜೀವಿಗಳು, ಕನ್ನಡಾಭಿಮಾನಿಗಳ ಸಭೆ ಕರೆದು ಬೃಹತ್ ಚಳುವಳಿ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಂಕರ ತಾಳಿಕೋಟೆ, ಡಾ.ರಾಜಶೇಖರ ಕಟ್ಟಿಮನಿ ಇದ್ದರು.