ಕೊಪ್ಪಳ | ಕಾಲುವೆಗೆ ಬಿದ್ದು ಯುವಕ ನೀರು ಪಾಲು

ಕೊಪ್ಪಳ/ಕನಕಗಿರಿ : ನರೇಗಾ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನೊರ್ವ ಕಾಲು ಜಾರಿ ಕಾಲುವೆಗೆ ಬಿದ್ದು ನೀರಲ್ಲಿ ಕೊಚ್ಚಿ ಹೋದ ಘಟನೆ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್ನಲ್ಲಿ ರವಿವಾರ ನಡೆದಿದೆ.
ಬಸವೇಶ್ವರ ಕ್ಯಾಂಪ್ನ ನಿವಾಸಿ ಹನುಮಂತಪ್ಪ ಆದಾಪುರ ಕೊಚ್ಚಿಹೋದ ಕಾರ್ಮಿಕ ಎಂದು ತಿಳಿದು ಬಂದಿದೆ.
ಕ್ಯಾಂಪ್ನಲ್ಲಿರುವ ನಾಲಾದಲ್ಲಿ ನರೇಗಾ ಯೋಜನೆಯಡಿ ಕಳೆದ 7 ದಿನಗಳಿಂದ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಹನುಮಂತಪ್ಪ ಆದಾಪುರ ಪಕ್ಕದಲ್ಲಿಯೇ ಇರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಹೋಗುವಾಗ ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಯುವಕರು ಹನುಮಂತಪ್ಪನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ನೀರಿನ ರಭಸಕ್ಕೆ ಹನುಮಂತಪ್ಪ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ನೀಡಿದ್ದಾರೆ. ತೆಪ್ಪದ ಮೂಲಕ ಕೊಚ್ಚಿ ಹೋದ ಹನುಮಂತಪ್ಪನನ್ನು ಹುಡುಕಲಾಗುತ್ತಿದೆ ಎಂದು ಪಿಡಿಒ ಲಕ್ಷ್ಮಣ ತಿಳಿಸಿದ್ದಾರೆ.
ಕುಟುಂಬಸ್ಥರಿಗೆ ಧೈರ್ಯ ತುಂಬಿದ ತಾಪಂ ಇಒ :
ಹನುಮಂತಪ್ಪ ನೀರಿನಲ್ಲಿ ಕೊಚ್ಚಿ ಹೋದ ಘಟನೆಯಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ತಾಪಂ ಇಒ ಕೆ. ರಾಜಶೇಖರ್ ಹನುಮಂತಪ್ಪನ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ಪರಿಹಾರಕ್ಕೆ ಮನವಿ :
ಕಾಲುವೆಯಲ್ಲಿ ಜಾರಿ ಬಿದ್ದು ನೀರು ಪಾಲಾದ ವ್ಯಕ್ತಿಯ ಮೃತದೇಹವೇ ಸಿಕ್ಕಿಲ್ಲ. ತೆಪ್ಪದ ಮೂಲಕ ಪತ್ತೆಗೆ ಗ್ರಾಪಂ ಆಡಳಿತ ಮಂಡಳಿ ಮುಂದಾಗಿದೆ. ಈ ನಡುವೆ ನರೇಗಾ ಕಾರ್ಮಿಕರು ತಾಪಂ ಇಒ ರಾಜಶೇಖರಗೆ ಪರಿಹಾರ ಧನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಗಂಗಾವತಿ ಗ್ರಾಮೀಣ ಠಾಣೆ ಪಿಎಸೈ ವೆಂಕಟೇಶ ಚವ್ಹಾಣ, ತಾಪಂ ಸಹಾಯಕ ನಿರ್ದೇಶಕಿ ಶೆರಪೊನ್ನಿಸಾ ಬೇಗಂ,ಗ್ರಾಪಂ ಪಿಡಿಒ ಲಕ್ಷ್ಮಣ, ಜೆಇ ಕೊಟ್ರೇಶ ಇದ್ದರು.