ದಲಿತ, ಪ್ರಗತಿಪರ ಸಂಘಟನೆಗಳಿಂದ ಮನುಸ್ಮೃತಿ ದಹಿಸಿ ಪ್ರತಿಭಟನೆ
![Photo of Protest Photo of Protest](https://www.varthabharati.in/h-upload/2024/12/25/1310483-whatsapp-image-2024-12-25-at-75350-pm.webp)
ಮಂಡ್ಯ : ಅಸ್ಪೃಶ್ಯತೆ, ಜಾತೀಯತೆ, ಲಿಂಗ ತಾರತಮ್ಯ, ಅಸಮಾನತೆಯ ಮನುಸ್ಮೃತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸುಟ್ಟ ಐತಿಹಾಸಿಕ ದಿನವಾದ ಬುಧವಾರ ದಲಿತ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮನುಸ್ಮೃತಿ ದಹಿಸಿ ಮನುವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಟ್ಟು ಸಮತೆಯ ಜ್ಯೋತಿ ಬೆಳಗಿಸೋಣ’ ಘೋಷಣೆಯಡಿ ಮನುಸ್ಮೃತಿಯ ಪ್ರತಿಯನ್ನು ದಹಿಸಿ ಸಂವಿಧಾನದ ಆಶಯ ಸಂಪೂರ್ಣ ಅನುಷ್ಠಾನಕ್ಕೆ ಆಗ್ರಹಿಸಲಾಯಿತು.
ಮನು ಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ, ಪ್ರಜಾತಾಂತ್ರಿಕ ಸಂವಿಧಾನವನ್ನು ಅಂಬೇಡ್ಕರ್ ಅವರು ದೇಶಕ್ಕೆ ರೂಪಿಸಿಕೊಟ್ಟಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು, ಪ್ರಸ್ತುತ ಜನರ ದಿಕ್ಕು ತಪ್ಪಿಸಿ, ಸುಳ್ಳು ಹಬ್ಬಿಸುವ ಕಾರ್ಯದಲ್ಲಿ ಸಕ್ರಿಯವಾಗಿವೆ ಎಂಬುದನ್ನ ಪ್ರಜ್ಞಾವಂತರು ಅರಿಯಬೇಕಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಮನುಸ್ಮೃತಿ ಸುಟ್ಟ ದಿನವನ್ನು ದೇಶದಾದ್ಯಂತ ಅಚರಣೆ ಮಾಡಿ ಮನುವಾದಕ್ಕೆ ಪ್ರತಿರೋಧ ಒಡ್ಡಬೇಕು. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳುವವರೆಗೂ ದೇಶದಲ್ಲಿ ಮನುಸ್ಮೃತಿ ದಹನದ ಪ್ರಕ್ರಿಯೆ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನಶಕ್ತಿಯ ಸಿದ್ದರಾಜು ಎಂ., ಮಹಿಳಾ ಮುನ್ನಡೆಯ ಶಿಲ್ಪ ಬಿ.ಎಸ್., ಜಾಗೃತ ಕರ್ನಾಟಕದ ಎನ್.ನಾಗೇಶ್, ಎನ್.ಸುಬ್ರಹ್ಮಣ್ಯ, ಸಿಐಟಿಯುನ ಸಿ.ಕುಮಾರಿ, ದಸಂಸ ಗುಡಿಗೇನಹಳ್ಳಿ ಚಂದ್ರಶೇಖರ್, ಹುರುಗಲವಾಡಿ ರಾಮಯ್ಯ, ವಕೀಲರಾದ ಬಿ.ಟಿ.ವಿಶ್ವನಾಥ್, ಲಕ್ಷ್ಮಣ್ ಚೀರನಹಳ್ಳಿ, ಕರ್ನಾಟಕ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಗಂಜಾಂ ರವಿ, ವೈ.ರಾಜಶೇಖರ, ರೈತಸಂಘದ ಪಾಂಡು, ಗಂಗಾಧರಯ್ಯ, ಹೊನ್ನಪ್ಪ, ಶ್ರೀನಿವಾಸ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.