ಉದಯಗಿರಿ ಪ್ರಕರಣ | ಘಟನೆಯಲ್ಲಿ ಯಾರೇ ಇದ್ದರೂ ಶಿಕ್ಷೆ ಆಗುತ್ತೆ : ಗೃಹ ಸಚಿವ ಜಿ.ಪರಮೇಶ್ವರ್
"ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ"

ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್
ಮೈಸೂರು : ʼಉದಯಗಿರಿ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರನ್ನು ಕುಗ್ಗಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲʼ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಉದಯಗಿರಿ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ʼಘಟನೆಯಲ್ಲಿ ಯಾರೇ ಇದ್ದರೂ ಶಿಕ್ಷೆ ಆಗುತ್ತೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ. ಘಟನೆ ಯಾಕಾಯಿತು, ಯಾರಿಂದ ಆಯಿತು ಎಂದು ತನಿಖೆ ಮಾಡಲು ನಾನು ಹೇಳಿದ್ದೆ. ಈಗ ಪ್ರಾಥಮಿಕ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಅಧಿಕಾರಿಗಳು ನನಗೆ ಎಲ್ಲ ವಿಚಾರವನ್ನು ತಿಳಿಸಿದ್ದಾರೆ. ತನಿಖೆಗೆ ಈಗಾಗಲೇ ಆದೇಶ ನೀಡಿರುವುದರಿಂದ ಏನೆಲ್ಲ ಚರ್ಚೆ ಆಗಿದೆ, ಘಟನೆಯಲ್ಲಿ ಯಾರು ಇದ್ದಾರೆ ಅದೆಲ್ಲ ಹೇಳುವುದಕ್ಕೆ ಆಗಲ್ಲ. ಪೊಲೀಸರಿಗೆ, ವಾಹನಗಳಿಗೆ, ಠಾಣೆಗೆ ಕಲ್ಲು ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ. ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ ಎಂದರು.
ಉತ್ತರ ಪ್ರದೇಶದಲ್ಲಿ ಬುಲ್ಡೋಝರ್ ತೆಗೆದುಕೊಂಡು ಮನೆ ಕೆಡವುತ್ತಾರೆ. ನಮ್ಮ ಜನ ಆ ಮಟ್ಟಕ್ಕೆ ಹೋಗಿಲ್ಲ. ಅಲ್ಲಿನ ರೀತಿ ಮಾಡುವುದಕ್ಕೆ ಇಲ್ಲಿ ಬರಲ್ಲ. ಅಂತಹ ಪರಿಸ್ಥಿತಿ ಬಂದಾಗ ನೋಡೋಣ. ಆದರೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ. ಇದರಲ್ಲಿ ಯಾರು ರಾಜಕೀಯ ಮಾಡಬಾರದು ಎಂದು ತಿಳಿಸಿದರು.