ಮೈಸೂರು: ಮಹಾರಾಣಿ ಮಹಿಳಾ ಕಾಲೇಜಿನ ಮೇಲ್ಛಾವಣಿ ಕುಸಿತ ಪ್ರಕರಣ; ಅವಶೇಷಗಳಡಿಯಲ್ಲಿ ಸಿಲುಕಿದ್ದ ವ್ಯಕ್ತಿ ಮೃತ್ಯು

ಮೈಸೂರು,ಜ.29: ಮೂರು ವರ್ಷಗಳ ಹಿಂದೆ ಶಿಥಿಲಗೊಂಡು ಕುಸಿದಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ಮೇಲ್ಛಾವಣಿ ಮಂಗಳವಾರ ಪೂರ್ಣ ಕುಸಿದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ.
ಬುಧವಾರ ಮಹರಾಣಿ ಮಹಿಳಾ ಕಾಲೇಜಿನ ಮೇಲ್ಚಾವಣಿ ಕುಸಿದು 13 ಮಂದಿ ಕಾರ್ಮಿಕರು ಹೊರಬಂದಿದ್ದರು. ಓರ್ವ ಕಾರ್ಮಿಕ ಸದ್ದಾಂ ಕಟ್ಟಡದ ಒಳಗೆ ಸಿಲುಕಿಕೊಂಡಿದ್ದ. ಮಂಗಳವಾರ ಸಂಜೆಯಿಂದಲೇ ಅಗ್ನಿಶಾಮಕ ದಳ ಪೊಲೀಸರು ಮತ್ತು ನುರಿತ ಕೆಲಸಗಾರರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಹೊರತೆಗೆಯಲು ಕಾರ್ಯಾಚರಣೆ ಆರಂಭಿಸಿದ್ದರು. ಬುಧವಾರ ಬೆಳಗಿನ ಜಾವ ಅವಶೇಷಗಳಡಿಯಲ್ಲಿ ಸಿಲುಕಿದ್ದ ವ್ಯಕ್ತಿ ಮೃತಪಟ್ಟಿರುವುದು ದೃಡಪಟ್ಟಿದೆ.
ಮಂಗಳವಾರ ಸಂಜೆಯಿಂದಲೇ ಶಾಸಕ ಕೆ.ಹರೀಶ್ ಗೌಡ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸ್ಥಳದಲ್ಲೇ ಇದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆಗೆ ಮುಂದಾಗಿದ್ದರು. ಆದರೆ ಅದು ಸಾಧ್ಯವಾಗದೆ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿ ಸಾವಿಗೀಡಾಗಿದ್ದಾರೆ.