ಕೇರಳದಲ್ಲಿ ಅಪಘಾತ : ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಗೆ ಗಾಯ

ಪಿ.ವಿ. ಮೋಹನ್
ಕೊಟ್ಟಾಯಂ: ಇಲ್ಲಿಗೆ ಸಮೀಪದ ಪಾಲ ಎಂಬಲ್ಲಿನ ರಾಮಪುರದಲ್ಲಿ ರವಿವಾರ ತಡರಾತ್ರಿ ನಡೆದ ಅಪಘಾತದಲ್ಲಿ ಎಐಸಿಸಿ ಕಾರ್ಯದರ್ಶಿ ಮಂಗಳೂರಿನ ಪಿ.ವಿ. ಮೋಹನ್ ಗಾಯಗೊಂಡಿದ್ದಾರೆ.
ತಿರುವನಂತಪುರದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಿ ಬೆಳಗಾವಿಗೆ ಕೊಚ್ಚಿ ಮೂಲಕ ತೆರಳಲು ಕಾರಲ್ಲಿ ಅವರು ಪ್ರಯಾಣಿಸುತ್ತಿದ್ದರು. ಈ ಸಂದರ್ಭ ವಾಹನವೊಂದು ಇವರ ಕಾರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ.
ಘಟನೆಯಲ್ಲಿ ಪಿ.ವಿ. ಮೋಹನ್ ಅವರ ಕಾಲಿಗೆ ಗಾಯವಾಗಿದ್ದು ಪಾಲ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಚ್ಚಿಗೆ ಕರೆದುಕೊಂಡು ಹೋಗಲಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರ ಆರೈಕೆಯ ಉಸ್ತುವಾರಿ ವಹಿಸಿದ್ದಾರೆ.
ವಾರ್ತಾಭಾರತಿ ಜೊತೆ ಮಾತಾಡಿದ ಪಿ.ವಿ. ಮೋಹನ್, "ಕೊಚ್ಚಿಯಿಂದ ಗೋವಾ ಮೂಲಕ ಬೆಳಗಾವಿ ಸಮಾವೇಶಕ್ಕೆ ತಲುಪಲು ರಾತ್ರಿ ಹೊರಟಿದ್ದೆ. ಆಗ ಪಾಲ ಸಮೀಪ ಅಪಘಾತವಾಗಿದೆ. ನಮ್ಮ ವಾಹನಕ್ಕೆ ಢಿಕ್ಕಿ ಹೊಡೆದು ಹೋಗಿರುವ ವಾಹನ ಯಾವುದು ಎಂದು ಪತ್ತೆಯಾಗಿಲ್ಲ. ಕಾಲಿಗೆ ಪೆಟ್ಟಾಗಿದೆ. ಆದರೆ ಯಾವುದೇ ಅಪಾಯವಿಲ್ಲ " ಎಂದು ಹೇಳಿದ್ದಾರೆ.
(Photo credit: mediaoneonline.com)