ತಮಿಳುನಾಡಿನಲ್ಲಿ 250 ಪ್ರತಿಭಟನಾನಿರತ ಸ್ಯಾಮಸಂಗ್ ಕಾರ್ಮಿಕರ ಬಂಧನ
ಚೆನ್ನೈ : ಅನುಮತಿಯಿಲ್ಲದೆ ಖಾಸಗಿ ಜಮೀನನ್ನು ಅತಿಕ್ರಮಿಸಿ, ಪ್ರತಿಭಟನೆಯನ್ನು ನಡೆಸಿದ ಆರೋಪದಲ್ಲಿ 250 ಮಂದಿ ಮುಷ್ಕರ ನಿರತ ಸ್ಯಾಮಸ್ಸಂಗ್ ಸಂಸ್ಥೆಯ ಕಾರ್ಮಿಕರನ್ನು ತಮಿಳುನಾಡಿನ ಕಾಂಚಿಪುರಂನಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಮ್ಮ ಒಕ್ಕೂಟಕ್ಕೆ ಮಾನ್ಯತೆ, ವೇತನ ಪರಿಷ್ಕರಣೆ, ಎಂಟು ತಾಸುಗಳ ಕೆಲಸದ ಶೆಡ್ಯೂಲ್ ಮತ್ತಿತರ ಸವಲತ್ತುಗಳನ್ನು ಆಗ್ರಹಿಸಿ ಈ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ.
ಐದು ಸಾವಿರ ರೂ. ವೇತನ ಹೆಚ್ಚಳ ಸೇರಿದಂತೆ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಸ್ಯಾಮ್ಸಂಗ್ ಸಮ್ಮತಿಸಿತು. ಎಲ್ಲಾ ಕಾರ್ಮಿಕರ ಸಾಗಾಟಕ್ಕೆ ಹವಾನಿಯಂತ್ರಿತ ಬಸ್ಗಳ ವ್ಯವಸ್ಥೆ, ಕಾರ್ಮಿಕ ಸಾವನ್ನಪಿದ ಸಂದರ್ಭದಲ್ಲಿ ಒಂದು ಲಕ್ಷ ರೂ. ತುರ್ತು ಪರಿಹಾರ ಸೇರಿದಂತೆ ಮತ್ತಿತರ ಬೇಡಿಕೆಗಳ ಬಗ್ಗೆ ಚರ್ಚಿಸಲೂ ಅದು ಒಪ್ಪಿಕೊಂಡಿತ್ತು. ಆದರೆ ಕಾರ್ಮಿಕರ ಒಕ್ಕೂಟಕ್ಕೆ ಮಾನ್ಯತೆಯನ್ನು ನೀಡಲು ಅದು ನಿರಾಕರಿಸಿತು.
ಇದು ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆಯೂ ತಮಿಳುನಾಡು ವಿತ್ತ ಸಚಿವ ತಂಗಮ್ ತೆನ್ನರಸು ಕಾರ್ಮಿಕ ಒಕ್ಕೂಟ ಸಿಜಿಟಿಯುಗೆ ಮನವಿ ಮಾಡಿದ್ದರು.