UPSC ಆಕಾಂಕ್ಷಿಗಳು ಪೂರ್ವಭಾವಿ ಪರೀಕ್ಷೆಯ ಹಂತದಲ್ಲೇ ಜಾತಿ, ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ
ಪೂಜಾ ಖೇಡ್ಕರ್ ಪ್ರಕರಣದ ಬೆನ್ನಲ್ಲೇ ನಿಯಮಗಳಲ್ಲಿ ಬದಲಾವಣೆ

Photo credit: PTI
ಹೊಸದಿಲ್ಲಿ : ನಾಗರಿಕ ಸೇವಾ ನೇಮಕಾತಿಗಾಗಿ ಪೂರ್ವಭಾವಿ ಪರೀಕ್ಷೆಯ ಹಂತದಲ್ಲೇ ಆಕಾಂಕ್ಷಿಗಳು ಆನ್ಲೈನ್ ಮೂಲಕ ಶೈಕ್ಷಣಿಕ, ಜಾತಿ ಮತ್ತು ದೈಹಿಕ ಅಂಗವೈಕಲ್ಯದ ಕುರಿತು ಪ್ರಮಾಣಪತ್ರಗಳನ್ನು ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಈ ಮೊದಲು, ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ನಂತರವೇ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗಿತ್ತು. ಆದರೆ ಸಿಬ್ಬಂದಿ ಸಚಿವಾಲಯವು 2025ರ ನಾಗರಿಕ ಸೇವಾ ಪರೀಕ್ಷೆಯ ಪರಿಷ್ಕೃತ ನಿಯಮಗಳನ್ನು ಬುಧವಾರ ಪ್ರಕಟಿಸಿದೆ.
ಯುಪಿಎಸ್ಸಿ ಕೇಂದ್ರ ನಾಗರಿಕ ಸೇವೆಗಳಿಗೆ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ. ಇತ್ತೀಚೆಗೆ ಪೂಜಾ ಖೇಡ್ಕರ್ ಅವರು ನಕಲಿ ದಾಖಲೆ ನೀಡಿ ಐಎಎಸ್ ಹುದ್ದೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಕೇಂದ್ರ ಲೋಕ ಸೇವಾ ಆಯೋಗ ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆಯ ಹಂತದಲ್ಲೇ ಆನ್ ಲೈನ್ ಅರ್ಜಿ ನಮೂನೆಯೊಂದಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ವಿಫಲವಾದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಕಲಿ ದಾಖಲೆ ಸಲ್ಲಿಸಿದ ಆರೋಪ ಕೇಳಿ ಬಂದ ಬಳಿಕ ಕೇಂದ್ರ ಸರ್ಕಾರ ಸೆಪ್ಟೆಂಬರ್ 6ರಂದು ಪೂಜಾ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ಬಿಡುಗಡೆ ಮಾಡಿತ್ತು.