ಆಗ್ರಾ | ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ಸವರ್ಣಿಯರಿಂದ ದಾಳಿ: ವರ ಸೇರಿದಂತೆ ಹಲವರಿಗೆ ಗಾಯ

Screengrab:X/@zoo_bear
ಆಗ್ರಾ: ಆಗ್ರಾದ ನಾಗ್ಲಾ ತಾಲ್ಫಿ ಪ್ರದೇಶದಲ್ಲಿ ವಿವಾಹ ಮೆರವಣಿಗೆಯಲ್ಲಿ ದಲಿತ ವರನ ಮೇಲೆ ಸವರ್ಣೀಯರ ಗುಂಪೊಂದು ದಾಳಿ ನಡೆಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಮದುವೆ ಮೆರವಣಿಗೆಯಲ್ಲಿದ್ದ ವರ ರೋಹಿತ್ ಕುಮಾರ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ನಾಗ್ಲಾ ತಲ್ಫಿ ನಿವಾಸಿ ಅನಿತಾ ಎಂಬವರು ಈ ಕುರಿತು ಪೊಲೀಸ್ ದೂರು ನೀಡಿದ್ದಾರೆ.
ʼಬುಧವಾರ ಸಂಜೆ ಮಗಳ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಸವರ್ಣಿಯರಿದ್ದ ಗುಂಪು ಕೋಲುಗಳು ಮತ್ತು ಲಾಠಿಗಳಿಂದ ನಮ್ಮ ಮೇಲೆ ದಾಳಿ ನಡೆಸಿದೆ. ವರನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಆತನ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ದಾಳಿಯಿಂದ ಭಯಗೊಂಡ ನಾವು ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಮದುವೆ ಮಂಟಪಕ್ಕೆ ಓಡಿ ಬಂದೆವು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತ ಪಿ.ಕೆ.ರೈ ಈ ಕುರಿತು ಪ್ರತಿಕ್ರಿಯಿಸಿ, ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಸಂಬಂಧಿಸಿ 20 ಅಪರಿಚಿತರು ಸೇರಿದಂತೆ ಒಟ್ಟು 29 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.