ಮಧ್ಯಪ್ರದೇಶ: ಬಿಜೆಪಿ ವೈದ್ಯಕೀಯ ಘಟಕದಲ್ಲಿ ಸೇವೆ ಸಲ್ಲಿಸಿದ್ದ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲು

ಶುಭಮನ್ ಅವಸ್ಥಿ PC: x.com/PalpalIndia
ಜಬಲ್ಪುರ: ಬಿಜೆಪಿ ಜಬಲ್ಪುರ ಜಿಲ್ಲಾ ವೈದ್ಯಕೀಯ ಘಟಕದಲ್ಲಿ ಸಹ ಸಂಚಾಲಕನಾಗಿ ಸೇವೆ ಸಲ್ಲಿಸಿದ್ದ ನಕಲಿ ವೈದ್ಯನೊಬ್ಬನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಕಲಿ ಆಯುಷ್ ಪದವಿ ಪಡೆದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈತ ಕರ್ತವ್ಯ ನಿಭಾಯಿಸುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
"ಸರ್ಕಾರಿ ಸೇಠ್ ಗೋವಿಂದ್ದಾಸ್ ಜಬಲ್ಪುರ ಆಸ್ಪತ್ರೆಯಲ್ಲಿ ನಕಲಿ ಆಯುಷ್ ಪದವಿ ಬಳಸಿಕೊಂಡು ವೃತ್ತಿ ನಿರ್ವಹಿಸುತ್ತಿದ್ದ ಶುಭಮನ್ ಅವಸ್ಥಿ ಎಂಬ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೆಹರೂ ಸಿಂಗ್ ಖಂಡಾತೆ ಹೇಳಿದ್ದಾರೆ.
ದಮೋಹ್ ಮಿಷನರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ನಕಲಿ ಹೃದಯ ತಜ್ಞನೊಬ್ಬನ ವಿರುದ್ಧ ಪ್ರಕರಣ ದಾಖಲಾಗುವ ಎರಡು ದಿನಗಳ ಮುನ್ನ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿದ ಮಾಹಿತಿಯ ಪ್ರಕಾರ ಈತ ಚಿಕಿತ್ಸೆ ನೀಡಿದ್ದ ಏಳು ಹೃದ್ರೋಗಿಗಳು ಮೃತಪಟ್ಟಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿ ಜಬಲ್ಪುರ ನಗರ ಘಟಕದ ಅಧ್ಯಕ್ಷ ರತ್ನೇಶ್ ಸೋನ್ಕರ್ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ, ಪ್ರಕರಣ ಅಧಿಕೃತವಾಗಿ ದೃಢಪಟ್ಟ ಬಳಿಕ ಪಕ್ಷದ ಮಾರ್ಗಸೂಚಿ ಅನ್ವಯ ಅವಸ್ಥಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.
ನಕಲಿ ವೈದ್ಯ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದ ಎನ್ನುವುದನ್ನು ಆಡಳಿತಾರೂಢ ಬಿಜೆಪಿ ಒಪ್ಪಿಕೊಂಡಿದ್ದು, ಎರಡು ವರ್ಷದ ಹಿಂದೆ ಆತನನ್ನು ಹುದ್ದೆಯಿಂದ ತೆಗೆಯಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.