ದುರಾದೃಷ್ಟವಶಾತ್ ಔರಂಗಜೇಬನ ಸಮಾಧಿಯನ್ನು ಸರಕಾರ ರಕ್ಷಿಸಬೇಕಿದೆ; ಮಹಿಮಾ ಮಂದನ್ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ: ಫಡ್ನವಿಸ್

ಥಾಣೆ: ಔರಂಗಜೇಬ್ ನ ಸಮಾಧಿ ಸಂರಕ್ಷಿತ ತಾಣವಾಗಿರುವುದರಿಂದ, ಸರಕಾರ ಅದನ್ನು ರಕ್ಷಿಸಬೇಕಾದ ಅನಿವಾರ್ಯತೆಗೊಳಗಾಗಿದೆ ಎಂದು ಸೋಮವಾರ ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆದರೆ, ‘ಮಹಿಮಾ ಮಂದನ್’ ಕಾರ್ಯಕ್ರಮದ ಮೂಲಕ ಔರಂಗಜೇಬ್ ವೈಭವೀಕರಿಸಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದರು.
ಔರಂಗಜೇಬ್ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ಹಿಂದುತ್ವವಾದಿ ಸಂಘಟನೆಗಳು ಆಗ್ರಹಿಸುತ್ತಿರುವ ಬೆನ್ನಿಗೇ, ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನಾಚರಣೆಯ ಅಂಗವಾಗಿ ಥಾಣೆಯಲ್ಲಿ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ದೇವಾಲಯವೊಂದನ್ನು ಉದ್ಘಾಟಿಸಿ ಮಾತನಾಡಿದ ಫಡ್ನವಿಸ್, “ಔರಂಗಜೇಬ್ ಸಮಾಧಿಯನ್ನು ಘೋಷಿತ ಸಂರಕ್ಷಿತ ತಾಣವನ್ನಾಗಿ ರಕ್ಷಿಸಬೇಕಾದ ಅನಿವಾರ್ಯತೆ ಇದ್ದು, ಅದನ್ನು ರಕ್ಷಿಸಬೇಕಿರುವುದು ಚಾರಿತ್ರಿಕ ದಾಖಲೆಗಳಿಗಾಗಿಯೇ ಹೊರತು ಗೌರವದಿಂದಲ್ಲ” ಎಂದು ಹೇಳಿದ್ದಾರೆ.
“ಔರಂಗಜೇಬ್ ಕಿರುಕುಳದ ಇತಿಹಾಸದ ಹೊರತಾಗಿಯೂ, ಆತನ ಸಮಾಧಿಯನ್ನು ರಕ್ಷಿಸಬೇಕಾದ ಹೊಣೆಗಾರಿಕೆಯನ್ನು ಸರಕಾರ ತೆಗೆದುಕೊಳ್ಳಬೇಕಿರುವುದು ದುರದೃಷ್ಟಕರವಾಗಿದೆ. ಆದರೆ, ‘ಮಹಿಮಾ ಮಂದನ್’ನಂತಹ ಕಾರ್ಯಕ್ರಮಗಳ ಔರಂಗಜೇಬ್ ವೈಭವೀಕರಿಸುವ ಪ್ರಯತ್ನಕ್ಕೆ ಮುಂದಾದರೆ, ಅವು ಯಶಸ್ವಿಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಅವರು ಅಭಯ ನೀಡಿದ್ದಾರೆ.
ಕೇವಲ ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯ ಮಾತ್ರ ವೈಭವೀಕರಣಕ್ಕೆ ಅರ್ಹವಾಗಿದೆಯೇ ಹೊರತು, ಔರಂಗಜೇಬ್ ಸಮಾಧಿಯಲ್ಲ ಎಂದೂ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಬೆಳಗ್ಗೆ ವಿವಿಧ ಸರಕಾರ ಕಚೇರಿಗಳೆದುರು ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್, ಖುಲ್ದಾಬಾದ್ ನಲ್ಲಿರುವ ಔರಂಗಜೇಬನ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ಮನವಿ ಪತ್ರಗಳನ್ನು ಸಲ್ಲಿಸಿತು.