ಗ್ಯಾರಂಟಿ ಯೋಜನೆಗಳು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಆಶಯಗಳಲ್ಲವೇ?

ಪ್ರಸಕ್ತ ಬಹು-ಆಯಾಮಗಳ ಚರ್ಚೆಯಲ್ಲಿದೆ ಗ್ಯಾರಂಟಿ ಯೋಜನೆಗಳು. ಈ ಉಚಿತ ಯೋಜನೆಗಳನ್ನು ಜಗತ್ತಿನಲ್ಲೇ ಮೊದಲಾರಂಭಿಸಿದ್ದು ತಮಿಳುನಾಡಿನಲ್ಲಿ. ಅದುವರೆಗೂ ಉಚಿತ ಎನ್ನುವ ಪರಿಕಲ್ಪನೆಯಿರಲಿಲ್ಲ. ಅಂದರೆ ತಮಿಳುನಾಡಿನ ಫ್ರೀಬೀ ಸಂಸ್ಕೃತಿಯು ಆಯಾ ರಾಜಕೀಯ ಪಕ್ಷಗಳಿಗೆ ವೋಟು ತಂದುಕೊಡುವ ಜತೆಗೆ ಆ ರಾಜ್ಯದ ಅಭಿವೃದ್ಧಿಯೂ ಆಗತೊಡಗಿತು. ಹೇಗೆಂದರೆ, ಜನರಲ್ಲಿ ಕೊಡು ಮತ್ತು ಕೊಳ್ಳುವಿಕೆಯಿಂದ ಬೇಡಿಕೆ ದ್ವಿಗುಣಗೊಳ್ಳುತ್ತಾ, ತಲಾದಾಯವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯನ್ನು ಸರಿದೂಗಿಸುವುದು. ಒಟ್ಟಾರೆಯಾಗಿ ಈ ವಿದ್ಯಮಾನಗಳು ದೇಶದ ಚುನಾವಣಾ ಆಧಾರಿತ ರಾಜಕೀಯ ವ್ಯವಸ್ಥೆಯ ದೌರ್ಬಲ್ಯಗಳನ್ನು ತೋರಿಸುತ್ತವೆ. ಚುನಾವಣೆಗಳಿಂದಾಗಿ ಜನರು ರಾಜಕೀಯ ಅನಕ್ಷರಸ್ಥರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಉಚಿತ ಯೋಜನೆಗಳನ್ನು ಮತಗಳಿಗಾಗಿ ಬಳಸಿಕೊಳ್ಳುತ್ತಿವೆ.
ಭಾರತದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆಯು ಸಂವಿಧಾನದ ನಾಲ್ಕನೇ ಭಾಗದಲ್ಲಿರುವ ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ತನ್ನ ನಾಗರಿಕರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ರಾಜ್ಯವು ಜವಾಬ್ದಾರನಾಗಿರಬೇಕು. ಸಂವಿಧಾನದ 39(ಎ), 47ನೇ ವಿಧಿಯು ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು ರಾಜ್ಯದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಇಂತಹ ಜನಕಲ್ಯಾಣ ಯೋಜನೆಗಳ ಮೂಲಕ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಕೆಲವಾದರೂ ಆಶಯಗಳು ನಿಜಗೊಳ್ಳುತ್ತವೆ. ಅಂಬೇಡ್ಕರ್ ಅವರು ಬಯಸಿದ್ದ ಸಮಾನತೆಯ ಪ್ರಜಾಪ್ರಭುತ್ವವು ಅನುಷ್ಠಾನಕ್ಕೆ ಬಂದಿದ್ದರೆ ಉಚಿತ ಯೋಜನೆಗಳ ಅವಶ್ಯಕತೆಯೇ ಇರುತ್ತಿರಲಿಲ್ಲ. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಗಳಲ್ಲಿ ಪ್ರಗತಿಯಾಗಿದ್ದರೆ ಉಚಿತ ಯೋಜನೆಗಳು ಅನವಶ್ಯಕವಾಗುತ್ತವೆ. ಅಲ್ಲದೆ ಚುನಾವಣಾ ಪ್ರಕ್ರಿಯೆಗಳು ಈ ಪ್ರಮಾಣದಲ್ಲಿ ಭ್ರಷ್ಟಗೊಂಡಿರದಿದ್ದರೆ ಅವು ಅನವಶ್ಯಕವಾಗುತ್ತಿದ್ದವು.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಐದು ಉಚಿತ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಜನಸಾಮಾನ್ಯರಿಗೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಿದ 5 ಗ್ಯಾರಂಟಿ ಯೋಜನೆಗಳಿಗೆ ಅಂದಾಜು 59 ಸಾವಿರ ಕೋಟಿ ರೂ.ಬೇಕು. ಈಗ 3 ಲಕ್ಷ ಕೋಟಿ ರೂ. ಗಾತ್ರದ ಕರ್ನಾಟಕ ಬಜೆಟ್ನಲ್ಲಿ ಯೋಜನೆಗೆ ಸಿಗುವುದು ಶೇ. 30-40. ಇದೀಗ ಗ್ಯಾರಂಟಿಗಳನ್ನೇ ನೀಡಿಬಿಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂಬ ವಾದ, ಇದಕ್ಕೆ ವ್ಯತಿರಿಕ್ತ ವಾದವೂ ಇದೆ. ಈ ಉಚಿತಗಳನ್ನು ಬೇಡ ಎನ್ನುತ್ತಿರುವವರು ಮೇಲ್ವರ್ಗದವರು, ಇಲ್ಲಿಯವರೆಗೆ ಸಮಾಜವನ್ನು ಶೋಷಣೆ ಮಾಡಿದವರು. ಅವರು ಇಷ್ಟು ವರ್ಷ ಸೋಮಾರಿಗಳಾಗಿ ಕುಳಿತು ಎಲ್ಲವನ್ನೂ ಪಡೆದವರು. ಆಗ ಆರ್ಥಿಕತೆಗೆ ಹೊಡೆತ ಬಿದ್ದಿರಲಿಲ್ಲ. ಆದರೆ ಈಗ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಯುವ ಸಮುದಾಯ ಗ್ಯಾರಂಟಿ ಯೋಜನೆಯ ಲಾಭ ಪಡೆದ ಕೂಡಲೇ ಬೊಬ್ಬೆ ಹೊಡೆಯುತ್ತಿದ್ದಾರೆ ಎನ್ನುವುದು ಯೋಜನೆಯನ್ನು ಸಮರ್ಥಿಸುವವರ ವಾದ. ಇತ್ತೀಚೆಗೆ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಸುಪ್ರಿಂಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ‘‘ಸರಕಾರಗಳು ಜನರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿದೆ’’ ಅನ್ನುವ ಆತಂಕವನ್ನು ವ್ಯಕ್ತಪಡಿಸಿದೆ. ಜನರ ಸ್ವಾವವಂಬನೆಗೆ ಅವಕಾಶ ಕೊಡದಿರುವುದು ಸಂವಿಧಾನ ಜಾರಿಗೊಂಡ 75 ವರ್ಷಗಳೂ ಕಳೆದರೂ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳ ಸೋಲಲ್ಲವೇ?
ತಮಿಳುನಾಡಿನ ನಂತರ ದಿಲ್ಲಿಯಲ್ಲಿ ಉಚಿತಗಳ ಪರಿಣಾಮವಾಗಿ ದಶಕದ ಕಾಲ ಅಧಿಕಾರದ ಚುಕ್ಕಾಣಿ ಹಿಡಿದ ಎಎಪಿ ನಂತರ ಕರ್ನಾಟಕ ಮತ್ತು ತೆಲಂಗಾಣವೂ ಅದೇ ಮಾದರಿ ಅನುಸರಿಸಿ ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನೇರಿದೆ. ಅದನ್ನೇ ವಿರೋಧಿಸುತ್ತಿದ್ದ ವಿರೋಧ ಪಕ್ಷಗಳು ಇಂದು ಅವರ ದಾರಿಯನ್ನೇ ಅನುಸರಿಸಲು ಹೊರಟಿವೆ. ಆದರೆ ಒಟ್ಟಾರೆಯಾಗಿ ಗ್ಯಾರಂಟಿ ಯೋಜನೆಗಳನ್ನು ಇಡಿಯಾಗಿ ವಿರೋಧಿಸುವುದು ಮತ್ತು ಒಪ್ಪಿಕೊಳ್ಳುವುದು ಕಷ್ಟ. ಜನರ ತಕ್ಷಣದ ಸಂಕಟವನ್ನು ಈ ಯೋಜನೆಗಳು ಪರಿಹರಿಸಿದಂತೆ ಕಾಣುತ್ತವೆಯಾದರೂ ದೀರ್ಘಕಾಲದಲ್ಲಿಯೂ ಇವು ತುಂಬಾ ಪ್ರಯೋಜನಕಾರಿಯೇ ಎನ್ನುವ ಪ್ರಶ್ನೆಗಳಿವೆ. ಈ ಯೋಜನೆಗಳ ಜೊತೆಗೆ ಕನಿಷ್ಠ ಕೂಲಿ ಹೆಚ್ಚಿಸುವ, ಭೂ ಹಂಚಿಕೆ ಮಾಡುವ (ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಮೂಲಭೂತ ಹಕ್ಕಾಗಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಎದ್ದುಕಾಣುತ್ತಿದೆ) ಜೊತೆಗೆ ಖಾಸಗಿಯಿಂದ ರಕ್ಷಿಸುವ ಆ ಮೂಲಕ ಗ್ಯಾರಂಟಿ ಯೋಜನೆಗಳು ಜನರ ದೀರ್ಘ ಭವಿಷ್ಯಕ್ಕೆ ಅನುಕೂಲವಾಗುವ ಚರ್ಚೆಗಳು ನಡೆಯಬೇಕು.