ಬಿಜೆಪಿಗೆ ಬೇಡವಾದರೇ ಕುಮಾರಸ್ವಾಮಿ?

ಮೂರ್ನಾಲ್ಕು ತಿಂಗಳ ಹಿಂದಿನವರೆಗೂ ಕೇಂದ್ರ ಬಿಜೆಪಿ ನಾಯಕರು ಮತ್ತು ಎಚ್.ಡಿ. ಕುಮಾರಸ್ವಾಮಿ ಸಂಬಂಧ ಸಿಕ್ಕಾಪಟ್ಟೆ ಗಟ್ಟಿಯಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ ರಾಜ್ಯ ಬಿಜೆಪಿ ನಾಯಕರ ಕಿತ್ತಾಟದ ಬಗ್ಗೆ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಅವರಿಂದಲೂ ಮಾಹಿತಿ ಪಡೆದುಕೊಂಡಿದ್ದರಂತೆ. ಇದು ಗೊತ್ತಾಗುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರ ಪೈಕಿ ಕೆಲವರು ಗರಬಡಿದಂತಾಗಿದ್ದರು. ಕುಮಾರಸ್ವಾಮಿ ನಮ್ಮೆಲ್ಲರನ್ನೂ ಓವರ್ ಟೇಕ್ ಮಾಡಿಬಿಡಬಹುದು ಎಂದು ಬೆಚ್ಚಿ ಬಿದ್ದಿದ್ದರು. ಇನ್ನು ಕೆಲವರು ಕುಮಾರಸ್ವಾಮಿಯೇ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಕುಹಕವಾಡುತ್ತಿದ್ದರು. ಆದರೆ ಅದ್ಯಾಕೋ ಏನೋ ಇತ್ತೀಚೆಗೆ ಕುಚುಕುಗಳ ನಡುವೆ ಕಂದಕ ಸೃಷ್ಟಿಯಾಗಿದೆ ಎಂಬ ಗುಲ್ಲು ಕೇಳಿಬರುತ್ತಿದೆ. ಇಂಥ ಮಾತುಗಳು ಬೆಂಗಳೂರಲ್ಲಿ ಮಾತ್ರ ಹರಿದಾಡಿದ್ದರೆ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡಬಹುದಿತ್ತು. ಆದರೆ ದಿಲ್ಲಿಯಲ್ಲೂ ಅದೇ ಗುಸುಗುಸು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ 19 ಸ್ಥಾನ ಗೆಲ್ಲಲು ಮೈತ್ರಿಯೇ ಪ್ರಮುಖ ಕಾರಣವಾಗಿತ್ತು. ಜೆಡಿಎಸ್ ಎರಡೇ ಕ್ಷೇತ್ರದಲ್ಲಿ ಗೆದ್ದಿದ್ದರೂ ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮೈಸೂರಿನಲ್ಲಿ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆದುಕೊಂಡಿತ್ತು. ಇದೇ ಮೈತ್ರಿ ಪ್ರಚಂಡ ಬಹುಮತವಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಒಮ್ಮೆ ನಡುಗಿಸಿತ್ತು. ಈಗಲೂ ಕಾಂಗ್ರೆಸ್ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಹೋಗಲು ಹೆದರುತ್ತಿರುವುದು ಈ ಮೈತ್ರಿಯೇ ಪ್ರಮುಖ ಕಾರಣ. ಆದರೂ ಏಕೆ? ಅದೂ ಇಷ್ಟು ಬೇಗ, ಕುಮಾರಸ್ವಾಮಿ ಬಿಜೆಪಿಗೆ ಬೇಡವಾಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರ ಸಿಗುತ್ತಿಲ್ಲ. ರಾಜಕಾರಣ ಬಹುಪಾಲು ಸಾಗುವುದೇ ಹೀಗೆ; ಅಗೋಚರವಾಗಿ ಎನ್ನುವುದಕ್ಕೆ ಈ ಬೆಳವಣಿಗೆ ಉತ್ತಮ ನಿದರ್ಶನ.
ಒಂದು ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು. ಕುಮಾರಸ್ವಾಮಿ ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದರು, ಅವರಷ್ಟಕ್ಕವರು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಎಂದಿನಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ವ್ಯಕ್ತಿ ಕೇಂದ್ರಿತವಾಗಿ ದಾಳಿ ಮಾಡುತ್ತಿದ್ದರು. ಮತ್ತೆ ದಿಲ್ಲಿಗೆ ಹೋಗಿಬಿಡುತ್ತಿದ್ದರು. ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ತಮ್ಮ ಪಾಡಿಗೆ ತಾವಿರುತ್ತಿದ್ದರು. ಮುಡಾ ಪ್ರಕರಣದ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಯ ಒಂದೇ ಒಂದು ಜಂಟಿ ಹೋರಾಟ ನಡೆಯಲಿಲ್ಲ. ಒಂದೇ ಒಂದು ಜಂಟಿ ಪತ್ರಿಕಾಗೋಷ್ಠಿ ಆಗಲಿಲ್ಲ. ಎರಡೂ ಪಕ್ಷಗಳ ನಾಯಕರು ಸಭೆ ಸೇರಿರಲಿಲ್ಲ, ಸಮಾಲೋಚನೆ ಮಾಡಿರಲಿಲ್ಲ. ಕಡೆಗೆ ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿ ‘ಬಜೆಟ್ ಅಧಿವೇಶನಕ್ಕೂ ಮುನ್ನ ಸಭೆ ಮಾಡಿ ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸಿ’ ಎಂದು ಹೇಳಿದ ನಂತರವೇ ‘ಮತ್ತೆ ಒಂದಾಗಿದ್ದು’.
ಸದ್ಯದ ಬಿಜೆಪಿ ಹೈಕಮಾಂಡ್ ನಾಯಕರ ಕಾರ್ಯಶೈಲಿಯೇ ಹಾಗೆ. ಅವರು 2028ರ ಚುನಾವಣೆಗೆ ಈಗಿನಿಂದಲೇ ತಯಾರಿ ಶುರುಮಾಡಿ ಎಂದಿದ್ದರು. ಆ ಮಾತನ್ನು ಕುಮಾರಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ ಇಬ್ಬರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಹಗರಣಗಳನ್ನು ಹೊರಗೆ ತೆಗೆಯಿರಿ ಎಂದು ಹೇಳಿದ್ದರು. ಅದೂ ಸಾಧ್ಯವಾಗಿಲ್ಲ. ಜಂಟಿಯಾಗಿ ಎಷ್ಟೇ ಬೆವರು ಹರಿಸಿದರೂ ಯಶಸ್ಸಿನಲ್ಲಿ ಯಾರಿಗೆ ಎಷ್ಟು ಪಾಲು ಎಂಬ ಖಾತರಿ ಇಲ್ಲದಿರುವುದರಿಂದ ಇಬ್ಬರೂ ನಿಷ್ಕ್ರಿಯರಾಗಿರಬಹುದು. ಆದರೆ ಹೈಕಮಾಂಡ್ ನಾಯಕರು ನೆಪ ಕೇಳಲು ಸಿದ್ಧರಿಲ್ಲ.
ಇದಲ್ಲದೆ ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲುರನ್ನು ಕುಮಾರಸ್ವಾಮಿ ಸಂಪರ್ಕ ಮಾಡಿದ್ದಾರೆ. ‘ಚುನಾವಣೆವರೆಗೂ ತಾಳ್ಮೆಯಿಂದ ಇರಿ, ಯಾವಾಗ ಏನಾಗುತ್ತೋ ಯಾರಿಗೆ ಗೊತ್ತು, ನಾನು ನಿಮ್ಮ ಜೊತೆ ಇರುತ್ತೇನೆ’ ಎಂಬ ‘ಸಾಂತ್ವನ’ದ ಮಾತನ್ನಾಡಿದ್ದಾರೆ ಎನ್ನುವ ಮಾಹಿತಿಗಳಿವೆ. ಆದರೆ ಇದು ಸಾಂತ್ವನ ಅಲ್ಲ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕುಯುಕ್ತಿ ಎನ್ನುವುದು ವಿಜಯೇಂದ್ರ ಗ್ರಹಿಕೆ. ಅವರು ಯಥಾವತ್ತು ಹೈಕಮಾಂಡಿಗೆ ಸಂದೇಶ ರವಾನಿಸಿದ್ದಾರೆ. ಕುಮಾರಸ್ವಾಮಿ ಬಗ್ಗೆ ಹೈಕಮಾಂಡ್ ನಾಯಕರ ಕಣ್ಣು ಕೆಂಪಾಗಲು ಇದು ಮುಖ್ಯ ಕಾರಣವಾಗಿರಬಹುದು ಎನ್ನುವುದು ದಿಲ್ಲಿ-ಬೆಂಗಳೂರು ರಾಜಕಾರಣದಲ್ಲಿ ಮಿಂದೆದ್ದಿರುವ ಬಿಜೆಪಿ ನಾಯಕರೊಬ್ಬರ ವಿವರಣೆ. ಡಿ.ಕೆ. ಶಿವಕುಮಾರ್ ಬಿಜೆಪಿಗೆ ಹತ್ತಿರ ಆಗುತ್ತಿರುವುದರಿಂದ ಕುಮಾರಸ್ವಾಮಿ ಜೊತೆಗಿನ ಅಂತರ ಜಾಸ್ತಿಯಾಗುತ್ತಿರಬಹುದು ಎನ್ನುವುದು ಅವರ ಒಗ್ಗರಣೆ.
ದೇವೇಗೌಡರಿಂದ ಡ್ಯಾಮೇಜ್ ಕಂಟ್ರೋಲ್!
ದಿನದಿಂದ ದಿನಕ್ಕೆ ಕುಮಾರಸ್ವಾಮಿ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರ ಪ್ರೀತಿ ಕರಗಿ ನೀರಾಗಿ ಪರಿಸ್ಥಿತಿ ಬರಡಾಗುತ್ತಿದೆ ಎಂಬುದನ್ನು ಕುಮಾರಸ್ವಾಮಿಗಿಂತಲೂ ಮೊದಲು ಗ್ರಹಿಸಿದ್ದು ದೇವೇಗೌಡರು. ದೇವೇಗೌಡರು ಖುದ್ದಾಗಿ ಮೋದಿ ಭೇಟಿ ಮಾಡಿ ‘ತಮ್ಮ ಮಗು ಪುಟಕ್ಕಿಟ್ಟ ಚಿನ್ನ’ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಮೈಗೆ ಹುಷಾರಿಲ್ಲದಿದ್ದರೂ ರಾಜ್ಯಸಭೆಯಲ್ಲಿ ಎದ್ದು ನಿಂತು ಮಾತನಾಡಿ ಮೋದಿಗೆ ಬಹುಪರಾಕ್ ಹೇಳಿದ್ದಾರೆ. ಮೋದಿಯನ್ನು ಹೊಗಳುವುದರಲ್ಲಿ ಬಿಜೆಪಿಯವರನ್ನೇ ಮೀರಿಸಿದ್ದಾರೆ. ಆದರೂ ನಿರೀಕ್ಷಿತ ಫಲ ಸಿಕ್ಕಿದಂತೆ ಕಾಣುತ್ತಿಲ್ಲ. ಅದರಿಂದಾಗಿ ಕುಮಾರಸ್ವಾಮಿಯಲ್ಲಿ ಮೊದಲಿನ ರಣೋತ್ಸಾಹ ಕಾಣುತ್ತಿಲ್ಲ ಎನ್ನುತ್ತಾರೆ ಅಪ್ಪಮಕ್ಕಳನ್ನು ಬಲ್ಲವರು.
ಬಲ್ಲವರಿಗೇ ಗೊತ್ತು ‘ಬೆಲ್ಲದ್’ ರುಚಿ
ವಿಜಯೇಂದ್ರ ಮಾತ್ರವಲ್ಲ, ರಾಜ್ಯ ಬಿಜೆಪಿಯ ಬೇರೆ ನಾಯಕರು ಕೂಡ ಕುಮಾರಸ್ವಾಮಿ ವಿರುದ್ಧ ದೂರು ನೀಡಿದ್ದಾರಂತೆ. ನೇರವಾಗಿ ‘ಇವರನ್ನು ನಂಬಬೇಡಿ’ ಎಂದು ಹೇಳಿದ್ದಾರಂತೆ. ದೂರು ಕೊಟ್ಟವರು ಯಾರು ಎಂಬ ಮಾಹಿತಿ ಈ ಅಂಕಣಕಾರನಿಗೆ ಗೊತ್ತಿಲ್ಲ, ಆದರೆ ಬಲ್ಲವರಿಗೇ ಗೊತ್ತು ‘ಬೆಲ್ಲದ್’ ರುಚಿ ಎನ್ನುವ ಹಾಗೆ ಯಾರೋ ದೇವೇಗೌಡ-ಕುಮಾರಸ್ವಾಮಿ ಬಗ್ಗೆ ಬಲ್ಲವರೇ ದೂರು ಕೊಟ್ಟಿರಬಹುದು ಎನ್ನುವುದನ್ನು ಅಲ್ಲಗೆಳೆಯಲಾಗುವುದಿಲ್ಲ.
ಯಾರಾದರೂ ಒಬ್ಬರು ನನ್ನ ಹೆಸರು ಹೇಳಿ!
ಲಿಂಗಾಯತ ಸಮುದಾಯದ ನಾಯಕತ್ವಕ್ಕಾಗಿ ರಾಜ್ಯ ಬಿಜೆಪಿಯಲ್ಲಿ ಈಗ ಹೊಸ ಕಚ್ಚಾಟ ಶುರುವಾಗಿದೆ. ವಿಜಯೇಂದ್ರ ಮತ್ತು ಯತ್ನಾಳ್ ಬಣಗಳ ತಯಾರಿ ಶರವೇಗದಲ್ಲಿ ಸಾಗುತ್ತಿದೆ. ಯತ್ನಾಳ್ ಬಣ ‘ಯಾರ ಮುಖ?’ ಇಟ್ಟುಕೊಂಡು ಸಮಾವೇಶ ನಡೆಸಬೇಕು ಎಂದು ಚರ್ಚೆ ಮಾಡಿದೆ. ಸಹಜವಾಗಿ ಯತ್ನಾಳ್, ಸೋಮಣ್ಣ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತಿತರ ಹೆಸರುಗಳು ಚರ್ಚೆಯಾಗಿವೆ. ಯತ್ನಾಳ್ ಪರ ಜಾಸ್ತಿ ವೋಟು ಬಿದ್ದಿಲ್ಲ. ಬಸವರಾಜ ಬೊಮ್ಮಾಯಿಯನ್ನು ‘ನಂಬಿಕೆಗೆ ಅರ್ಹರಲ್ಲ’ ಎಂದು ನಿರ್ಧರಿಸಲಾಗಿದೆ. ಮುರುಗೇಶ್ ನಿರಾಣಿ ಹೆಸರಿಗೆ ನಿರೀಕ್ಷೆಯಂತೆ ಯತ್ನಾಳ್ ವಿರೋಧಿಸಿದ್ದಾರೆ. ಉಳಿದದ್ದು ಸೋಮಣ್ಣ ಮಾತ್ರ. ಆದರೆ ಸೋಮಣ್ಣಗೆ ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ. ಎರಡೆರಡು ಕಡೆ ಸೋತು ಸುಣ್ಣವಾಗಿದ್ದ ಸಂದರ್ಭದಲ್ಲಿ ಸಿಕ್ಕಿರುವ ಕೇಂದ್ರ ಸಚಿವ ಸ್ಥಾನ ಬಿಟ್ಟುಕೊಡಲು ಮನಸ್ಸಿಲ್ಲ. ಪದೇ ಪದೇ ಮುಖ್ಯಮಂತ್ರಿ ಪದವಿಯ ಕನಸು ಬಿಳುತ್ತಿರುವುದರಿಂದ ಲಿಂಗಾಯತನಾಗಿ ಹೊರಹೊಮ್ಮಿ, ರಾಜ್ಯಾಧ್ಯಕ್ಷ ಹುದ್ದೆ ಏರಬೇಕೆಂಬ ಆಸೆಯನ್ನೂ ನಿಯಂತ್ರಿಸಿಕೊಳ್ಳಲಾಗುತ್ತಿಲ್ಲ.
ಇವರ ನಡುವೆ ಅರವಿಂದ ಬೆಲ್ಲದ್ ‘ಯಾರಾದರೂ ಒಬ್ಬರು ನನ್ನ ಹೆಸರು ಹೇಳಿ?’ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರಂತೆ. ಮುಖ್ಯಮಂತ್ರಿ ಪದವಿ, ರಾಜ್ಯಾಧ್ಯಕ್ಷ ಹುದ್ದೆ, ಲಿಂಗಾಯತ ಸಮುದಾಯದ ನಾಯಕನ ಸ್ಥಾನ ಯಾವುದಕ್ಕಾದರೂ ನನ್ನ ಹೆಸರು ಹೇಳಿ ಎಂದು ನಡುಬಗ್ಗಿಸಿ ಕೇಳಿಕೊಳ್ಳುತ್ತಿದ್ದಾರಂತೆ. ನಾನು ಯಾರ ಬಣದಲ್ಲೂ ಇಲ್ಲ. ಇದರಿಂದ ಮುಂದೆ ಯಾರಿಗೂ ಯಾವ ರೀತಿಯ ಸಮಸ್ಯೆಯೂ ಆಗುವುದಿಲ್ಲ. ಸಂಘ ನಿಷ್ಠೆ, ಅಧ್ಯಯನಶೀಲ ಗುಣಗಳಲ್ಲಿ ನನ್ನನ್ನು ಮೀರಿಸುವವರಿಲ್ಲ. ಸಂಪನ್ಮೂಲಕ್ಕೂ ಕೊರತೆ ಇಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಜೊತೆಗೆ ತಾನು ಪಂಚಮಸಾಲಿ, ತನಗೆ ನಾಯಕತ್ವ ಕೊಟ್ಟರೆ ಒಂದೇ ಏಟಿಗೆ ಯತ್ನಾಳ್ ಮತ್ತು ನಿರಾಣಿ ಖಾಲಿ ಖಾಲಿ ಎಂಬ ಸಂದೇಶವನ್ನು ವಿಜಯೇಂದ್ರಗೆ ಕಳುಹಿಸಿದ್ದಾರಂತೆ. ಅರವಿಂದ್ ಬೆಲ್ಲದ್ ಏನೇ ಹೇಳಿದರೂ ವಿಜಯೇಂದ್ರಗೆ ನಂಬಿಕೆ ಬರುತ್ತಿಲ್ಲವಂತೆ.
ಯತ್ನಾಳ್ ವಿರುದ್ಧ ಕ್ರಮ ಏಕಿಲ್ಲ?
ಬಂಡುಕೋರ ಬಸನಗೌಡ ಪಾಟೀಲ್ ಯತ್ನಾಳ್ ಗೆ ‘72 ಗಂಟೆಗಳಲ್ಲಿ ಉತ್ತರ ಕೊಡಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಜ್ಜಾಗಿ’ ಎಂದು ನೋಟಿಸ್ ಕೊಟ್ಟು ಉತ್ತರಕುಮಾರನ ಪೌರುಷ ಮೆರೆದಿದ್ದ ಬಿಜೆಪಿ ಹೈಕಮಾಂಡ್ ಇಷ್ಟು ದಿನವಾದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಯೂ ಚರ್ಚೆಯಾಗುತ್ತಿದೆ. ದಿಲ್ಲಿ ಮೂಲಗಳ ಪ್ರಕಾರ ವಿಜಯೇಂದ್ರ ಅಧ್ಯಕ್ಷ ಆಗುವುದು ಗ್ಯಾರಂಟಿ. ಯತ್ನಾಳ್ ಶಿಕ್ಷೆಯಿಂದ ಪಾರಾಗುವುದೂ ಗ್ಯಾರಂಟಿ. ಬಹಳ ದಿನಗಳಿಂದ ಗಿರವಿ ಇಟ್ಟಿರುವ ರಾಜ್ಯ ಬಿಜೆಪಿಯ ಮಾನವನ್ನು ಬಿಡಿಸಿಕೊಳ್ಳಲು ಹೈಕಮಾಂಡ್ ಈ ಸಂಧಾನ ಸೂತ್ರ ರೂಪಿಸಿದೆಯಂತೆ. ವಿಜಯೇಂದ್ರ ಮತ್ತು ಯತ್ನಾಳ್ ಪೈಕಿ ‘ಇಬ್ಬರಿಗೂ ಕೊಡಬೇಕು ಅಥವಾ ಇಬ್ಬರಿಂದಲೂ ಕಿತ್ತುಕೊಳ್ಳಬೇಕು’ ಎಂಬ ಸೂತ್ರವದು. ಒಬ್ಬರನ್ನು ಶಿಕ್ಷಿಸಿ ಇನ್ನೊಬ್ಬರನ್ನು ಪುರಸ್ಕರಿಸಿದರೆ ಸಮಸ್ಯೆ ಬಗೆಹರಿಯಲ್ಲ ಎಂದರಿತಿರುವ ಹೈಕಮಾಂಡ್ ವಿಜಯೇಂದ್ರಗೆ ಕುರ್ಚಿ, ಯತ್ನಾಳ್ಗೆ ಮಾಫಿ ನೀಡಲಿದೆಯಂತೆ.