ಕರ್ನಾಟಕ ಬಜೆಟ್ 25-26: ಅಲ್ಪ ಸಂಖ್ಯಾತರಿಗೆ ದಕ್ಕಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯರು ಇತ್ತೀಚೆಗೆ ಮಂಡಿಸಿದ 2025-26ನೇ ಆರ್ಥಿಕ ವರ್ಷದ ಕರ್ನಾಟಕ ರಾಜ್ಯದ ಬಜೆಟ್ ತಕ್ಕ ಮಟ್ಟಿಗೆ ಸಂತುಲಿತವಾಗಿದೆ. ಪರಿಶಿಷ್ಟ ಜಾತಿಗಳು (SC),ಪರಿಶಿಷ್ಟ ವರ್ಗಗಳು (ST), ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯುದಯಕ್ಕೆ ಗಣನೀಯ ಆದ್ಯತೆ ನೀಡಿ ಈ ಹಿಂದಿನ ಹೆಚ್ಚಿನ ಕಲ್ಯಾಣ ಯೋಜನೆಗಳನ್ನು ಮುಂದುರಿವಸಿರುವುದನ್ನು ಅನೇಕರು ಹೊಗಳಿದ್ದಾರೆ. ಆದರೆ, ಈ ಬಜೆಟ್ ಅನ್ನು ಸ್ವಲ್ಪ ಆಳವಾಗಿ ಹಾಗೂ ಸೂಕ್ಷ್ಮ್ಮವಾಗಿ ನೋಡಿದರೆ, ಇದರಲ್ಲಿ ಸರಕಾರವು ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಬಗ್ಗೆ ತೋರಿಸಿರುವ ಒಂದಂಶವನ್ನೂ ಕೂಡಾ ಅಲ್ಪಸಂಖ್ಯಾತ ಸಮುದಾಯಗಳ ಉದ್ಧಾರದ ಬಗ್ಗೆ ತೋರಿಸಿಲ್ಲ ಎಂಬ ಆಘಾತಕರ ಅಂಶ ಗಮನಕ್ಕೆ ಬರುತ್ತದೆ.
ಈ ಬಜೆಟ್ ನಲ್ಲಿ ಪರಿಶಿಷ್ಟ ಜಾತಿಗಳು (SC),ಪರಿಶಿಷ್ಟ ವರ್ಗಗಳು (ST) ಮತ್ತು ಹಿಂದುಳಿದ ವರ್ಗಗಳಿಗೆ ಒದಗಿಸಲಾಗಿರುವ ಎಲ್ಲ ಯೋಜನೆಗಳು ಬಹಳ ಸ್ಪಷ್ಟ, ನಿಖರ ಹಾಗೂ ಸವಿಸ್ತಾರ ವಾಗಿವೆ. ಅಲ್ಲಿ ಯಾವುದೇ ಅನಿಶ್ಚಿತತೆ ಇಲ್ಲ, ಗೊಂದಲಕ್ಕೆ ಆಸ್ಪದವಿಲ್ಲ. ಅದೇವೇಳೆ, ಅಲ್ಪಸಂಖ್ಯಾತರಿಗೆಂದು ನೀಡಲಾಗಿರುವ ಎಲ್ಲ ಯೋಜನೆ, ಕಾರ್ಯಕ್ರಮ, ಅನುದಾನ ಇತ್ಯಾದಿಗಳೆಲ್ಲಾ ತೀರಾ ಅಸ್ಪಷ್ಟ, ಅನಿಶ್ಚಿತ ಹಾಗೂ ಗೊಂದಲಮಯವಾಗಿವೆ. ಇದು ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಸರಕಾರದ ನಿರಾಸಕ್ತಿಯನ್ನು ಹಾಗೂ ಬದ್ಧತೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಇದು ಸರಕಾರದ ಮೇಲೆ ಪ್ರಭಾವ ಬೀರಿ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಿಸಬೇಕಾಗಿದ್ದ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ನಾಯಕರು, ಅವರ ವಿವಿಧ ಸಂಘಟನೆಗಳು ಮತ್ತು ವಿವಿಧ ಸ್ತರದ ಪ್ರತಿನಿಧಿಗಳ ವೈಫಲ್ಯವಾಗಿದೆ.
ಉದಾಹರಣೆಗೆ, ಹಿಂದುಳಿದವರ ಕಲ್ಯಾಣಕ್ಕಾಗಿ ಬಜೆಟ್ನಲ್ಲಿ ಒಂದು ಉಪಕ್ರಮವಿದೆ (210). ಹಿಂದುಳಿದ ಸಮುದಾಯದ ನಿರುದ್ಯೋಗಿ ಯುವಕರಿಗೆ ನಾಲ್ಕು ಚಕ್ರದ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಅಥವಾ ಆಹಾರ ಕಿಯೋಸ್ಕ್ ಗಳನ್ನು ಸ್ಥಾಪಿಸಲು ರೂ. 3 ಲಕ್ಷದವರೆಗೆ ನಿಧಿಯನ್ನು ಒದಗಿಸುತ್ತದೆ. ಆದರೆ, ಇಂತಹ ಅಥವಾ ಇದಕ್ಕೆ ಸಮಾನಾಂತರವಾದ ಯಾವುದೇ ಸ್ಪಷ್ಟ, ನಿಶ್ಚಿತ ಕೊಡುಗೆ ಅಲ್ಪಸಂಖ್ಯಾತರಿಗೆ ಲಭ್ಯವಿಲ್ಲ. ಅಲ್ಪಸಂಖ್ಯಾತರಿಗೆ ನೀಡಿರುವುದು ಏನು ಗೊತ್ತೇ? ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲಾಗುವುದು ಎಂಬ ಗೊಂದಲಕಾರಿ ಆಶ್ವಾಸನೆ ಮಾತ್ರ (217). ಈ ಪ್ರೋತ್ಸಾಹವನ್ನು ಕೂಡಾ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗುವುದು. ಎಷ್ಟು ಮೊತ್ತ ನೀಡಲಾಗುವುದು? ಎಷ್ಟು ಮಂದಿಗೆ ನೀಡಲಾಗುವುದು? ಇದಕ್ಕಾಗಿ ಮೀಸಲಿರುವ ಒಟ್ಟು ಮೊತ್ತ ಎಷ್ಟು? ಇತ್ಯಾದಿ ತೀರಾ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರವಿಲ್ಲ. ಸರಕಾರ ಮನಸ್ಸು ಮಾಡಿದ್ದರೆ ಈ ವಿಷಯದಲ್ಲಿ ಎಲ್ಲವನ್ನೂ ಸ್ಪಷ್ಟ ಪಡಿಸಬಹುದಿತ್ತು. ಸ್ಪಷ್ಟತೆಯ ಕೊರತೆಯು ಅನಗತ್ಯ ವಿಳಂಬ, ಆಡಳಿತಾತ್ಮಕ ಅಡೆತಡೆಗಳು, ಭ್ರಷ್ಟಾಚಾರ ಇತ್ಯಾದಿ ಹಲವು ದುರಂತಗಳಿಗೆ ಕಾರಣವಾಗುತ್ತದೆಂಬುದು ಚೆನ್ನಾಗಿ ತಿಳಿದಿದ್ದರೂ ಈ ಧೋರಣೆ ಯಾಕೆ?
ಶಿಕ್ಷಣ ಕ್ಷೇತ್ರದಲ್ಲಿ, ಸರಕಾರವು 100 ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಅಥವಾ ಸ್ನಾತಕ ಪದವಿಗಳನ್ನು ಪಡೆಯುತ್ತಿರುವ, ಪರಿಶಿಷ್ಟ ಜಾತಿಗಳ (SC) ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿವೇತನಗಳನ್ನು ನೀಡಲಿದೆ (185). ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಕೊಡುಗೆಯಲ್ಲಿ ಇಷ್ಟು ಔದಾರ್ಯವಿಲ್ಲ. ಕೆ.ಇ.ಎ. ಮೂಲಕ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 50ಶೇ. ಶುಲ್ಕ ವಾಪಸಾತಿಯ ಹಳೆಯ ಪ್ರಸ್ತಾವವೇ ಮುಂದುವರಿದಿದೆ. ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನದಲ್ಲಿ ಹೆಚ್ಚಳ ಕೇವಲ ರೂ. 10 ಲಕ್ಷಕ್ಕೆ ಸೀಮಿತವಾಗಿದೆ.
ಸಾಕ್ಷರತಾ ಪ್ರಮಾಣ 92.87ಶೇ. ದಷ್ಟಿರುವ ಉಳ್ಳಾಲದಲ್ಲಿ ಅಲ್ಪಸಂಖ್ಯಾತ ಹುಡುಗಿಯರಿಗಾಗಿ ಹಾಸ್ಟೆಲ್ ಸೌಲಭ್ಯವಿರುವ ಪಿಯು ಕಾಲೇಜು ಸ್ಥಾಪಿಸುವ ನಿರ್ಧಾರ ಪ್ರಕಟಿಸಲಾಗಿದೆ. ಉಳ್ಳಾಲಕ್ಕೆ ಹೋಲಿಸಿದರೆ, ಅಲ್ಪಸಂಖ್ಯಾತರು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಲವು ಪಟ್ಟು ಹಿಂದಿರುವ, ಯಾದಗಿರಿಯಂತಹ ಎಷ್ಟೋ ಕ್ಷೇತ್ರಗಳು ಕಲ್ಯಾಣ ಕರ್ನಾಟಕದಲ್ಲಿವೆ. ಅಲ್ಲಿ ಅಲ್ಪಸಂಖ್ಯಾತರಿಗೆ ಕಾಲೇಜು, ಹಾಸ್ಟೆಲ್ ಇತ್ಯಾದಿಗಳ ತುರ್ತು ಅಗತ್ಯವಿದೆ. ಸರಕಾರದ ನಿರ್ಧಾರಗಳು ಕೇವಲ ಅಪಕ್ವ ಪುಢಾರಿಗಳ ಮತ್ತು ನಿರಾಸಕ್ತ ಅಧಿಕಾರಿಗಳ ಸೂಚನೆಗಳ ಬದಲು, ನೆಲಮಟ್ಟದ ವಾಸ್ತವಗಳು, ಸಮೀಕ್ಷೆ, ಅಧ್ಯಯನ ಮತ್ತು ತಜ್ಞರ ಶಿಫಾರಸುಗಳನ್ನು ಅವಲಂಬಿಸಿದ್ದರೆ ಅದು ಆ ಪ್ರದೇಶಗಳ ಅಲ್ಪ ಸಂಖ್ಯಾತರ ಏಳಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿತ್ತು ಮತ್ತು ಹೆಚ್ಚು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿತ್ತು.
ರಾಜ್ಯದಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತರು ಸಂಘಟಿತ ಕೋಮುವಾದಿ ಪುಂಡರ ಪಡೆಗಳಿಂದ ಪದೇ ಪದೇ ನಿಂದನೆ, ಅಪಮಾನ ಮಾತ್ರವಲ್ಲ, ಹಿಂಸಾತ್ಮಕವಾದ ಯೋಜಿತ ಹಲ್ಲೆ, ಆಕ್ರಮಣಗಳನ್ನು ಎದುರಿಸುತ್ತಾ ಬಂದಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ನ್ಯಾಯ ಒದಗಿಸಲು ನೆರವಾಗಬೇಕಾಗಿದ್ದ ಪೊಲೀಸ್ ಇಲಾಖೆ ಮತ್ತು ಆಡಳಿತ ಸಿಬ್ಬಂದಿ ವರ್ಗ ತೀರಾ ಪಕ್ಷಪಾತಿಗಳಾಗಿ ವರ್ತಿಸುತ್ತವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿವೆ. ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಜನರು ಇಂತಹದೇ ಸನ್ನಿವೇಶವನ್ನು ಎದುರಿಸಿದಾಗ ಅವರಿಗೆ ನ್ಯಾಯ ಒದಗಿಸಲು DCRE ಎಂಬೊಂದು ಪ್ರತ್ಯೇಕ ವಿಭಾಗವನ್ನೇ ರಚಿಸಿ 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವುದಕ್ಕೆ ಇಂತಹ ಯಾವುದೇ ಸಂವೇದನಾಶೀಲ ಕ್ರಮವನ್ನು ಸರಕಾರ ಯಾಕೆ ಕೈಗೊಳ್ಳುತ್ತಿಲ್ಲ?
ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ 25 ಸಾವಿರ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ಕಲೆಯನ್ನು ಕಲಿಸಲು ಹೊರಟಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಈ ಮೂಲಕ ಸರಕಾರವು ಅಲ್ಪ ಸಂಖ್ಯಾತ ಹೆಣ್ಣುಮಕ್ಕಳಿಗೆ, ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಿ, ನಮ್ಮಿಂದ ಏನನ್ನೂ ನಿರೀಕ್ಷಿಸಬೇಡಿ ಎಂಬ ಸಂದೇಶ ನೀಡುತ್ತಿದೆಯೇ?
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆ ಹಾಗೂ ಕಾರ್ಯಕ್ರಮಗಳ ವಿಷಯದಲ್ಲಿ ಈಗಿನ ಮತ್ತು ಈಹಿಂದಿನ ಸರಕಾರಗಳು ಪಾಲಿಸುತ್ತಾ ಬಂದಿರುವ ಅನಿರ್ದಿಷ್ಟ ಹಾಗೂ ಅಸ್ಪಷ್ಟ ನಿಲುವುಗಳಿಂದಾಗಿ ಭ್ರಷ್ಟ ಸಚಿವರುಗಳು ಮತ್ತು ಅಧಿಕಾರಿಗಳು ಹಬ್ಬ ಆಚರಿಸುವಂತಾಗಿದೆ. ಅವರು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಿಸುವ ಹೊಣೆಯನ್ನು ತಮಗೆ ಆಪ್ತವಾದ ಹಾಗೂ ತಮಗೆ ಪರ್ಸೆಂಟೇಜ್ ನೀಡುವ ಏನ್ಜಿಓಗಳಿಗೆ ಅಥವಾ ಇತರ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಟ್ಟು, ತಮ್ಮ ಜೇಬು ತುಂಬಿಸಿಕೊಂಡು, ತಮ್ಮ ಆಪ್ತರಿಗೆ ಪಾಲು ನೀಡಿ ಕೈ ತೊಳೆದುಕೊಳ್ಳುತ್ತಾರೆ. ಇದು ಹಿಂದಿನಿಂದಲೂ ಹೀಗೆಯೇ ನಡೆದು ಬಂದಿದ್ದು, ಸರಕಾರವು ನಿಜಕ್ಕೂ ಅಲ್ಪಸಂಖ್ಯಾತರ ಹಿತೈಷಿಯಾಗಿದ್ದರೆ ಇಂತಹ ಸೋರಿಕೆಯ ಬಾಗಿಲುಗಳನ್ನೆಲ್ಲಾ ಮುಚ್ಚಿಬಿಟ್ಟು, ಹೆಚ್ಚು ಡೇಟಾ ಆಧಾರಿತವಾದ, ತಜ್ಞರ ಶಿಫಾರಸುಗಳ ಬೆಳಕಿನಲ್ಲಿ ರೂಪಿಸಲಾದ ಪರಿಣಾಮಕಾರಿಯಾದ ಕಾರ್ಯಯೋಜನೆಯನ್ನು ಅನುಷ್ಠಾನಿಸಲು ಖಂಡಿತ ಸಾಧ್ಯವಿದೆ.