ಒಕ್ಕೂಟ ಸರಕಾರದ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗಾದ ಮೋಸವೇನು?

ಇತ್ತೀಚೆಗೆ ಫೆಬ್ರವರಿ 1, ಶನಿವಾರದಂದು ಒಕ್ಕೂಟ ಸರಕಾರ ದಿಂದ 2025-26ರ ವಾರ್ಷಿಕ ಕೇಂದ್ರೀಯ ಬಜೆಟ್ ಅನ್ನು ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ರವರು ಲೋಕಸಭೆಯಲ್ಲಿ ಮಂಡಿಸಿದರು.
ಸತತ ಮೂರನೇ ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಆಡಳಿತದ ಮೋದಿ ನೇತೃತ್ವದ ಒಕ್ಕೂಟ ಸರಕಾರವು ದೇಶದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಈ ಹಿಂದೆ ಸ್ಥಾಪಿಸಲಾಗಿದ್ದ ಅನೇಕ ಸಂಸ್ಥೆಗಳನ್ನು ಮತ್ತು ಯೋಜನೆ/ಕಾರ್ಯಕ್ರಮಗಳನ್ನು ಕ್ರಮೇಣವಾಗಿ ಕಡಿತಗೊಳಿಸುವ ವ್ಯವಸ್ಥಿತ ಕೆಲಸವನ್ನು ಮಾಡುತ್ತಿರುವ ಬಗ್ಗೆ ಹಲವು ಲೇಖನ ವರದಿಗಳು ಮತ್ತು ಅನುದಾನ ಕಡಿತದಂತಹ ಹಾಗೂ ವಿವಿಧ ಸಂದರ್ಭಗಳಲ್ಲಿ ಸರಕಾರದ ಇಚ್ಛಾಶಕ್ತಿಯೂ ಮುನ್ನೆಲೆಗೆ ಬಂದಿದೆ.
ಬಿಜೆಪಿ ನೇತೃತ್ವದ ಸರಕಾರವು ಈ ಬಾರಿಯ 2025-26ರ ಕೇಂದ್ರೀಯ ಬಜೆಟ್ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಗೆ ರೂ. 3,350 ಕೋಟಿ ಅನುದಾನವನ್ನು ಘೋಷಿಸಿದೆ. ಇದು ಕಳೆದ ಬಾರಿಯ ಬಜೆಟ್ನಲ್ಲಿ ಘೋಷಿಸಿದ್ದ ಅನುದಾನಕ್ಕಿಂತಲೂ ಪ್ರತಿಶತ 5ರಷ್ಟು ಅಂದರೆ ರೂ. 166 ಕೋಟಿ ಅನುದಾನ ಹೆಚ್ಚಾಗಿದ್ದರೂ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಸಮುದಾಯದ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತಿದೆ.
ಕಳೆದ ಬಾರಿ 2024-25ರ ವಾರ್ಷಿಕ ಬಜೆಟ್ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಗೆ ರೂ. 3,183 ಕೋಟಿ ಅನುದಾನವನ್ನು ನೀಡಿದ್ದರು, ಆದರೆ ಅದನ್ನು ಪರಿಷ್ಕರಿಸಿ ರೂ. 1,868 ಕೋಟಿ ಅನುದಾನವನ್ನು ಒದಗಿಸಿದ್ದರು, ಅಂದರೆ ಬಿಡುಗಡೆ ಸಂದರ್ಭದಲ್ಲಿ ಸುಮಾರು ರೂ. 1,300 ಕೋಟಿ ಅನುದಾನವನ್ನು ಹಿಂಪಡೆದುಕೊಂಡಿದ್ದರು.
ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಕೇಂದ್ರದ ಮೂಲಕ ಜಾರಿಗೊಳ್ಳುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಮೌಲಾನಾ ಆಝಾದ್ ನ್ಯಾಷನಲ್ ಫೆಲೋಶಿಪ್ ಮತ್ತು ಉಚಿತ ಕೋಚಿಂಗ್ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಒಳಗೊಂಡ ಒಟ್ಟು 6 ಯೋಜನೆ/ಕಾರ್ಯಕ್ರಮಗಳಿಗೆ ರೂ. 678 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಕಳೆದ ಬಾರಿಗೆ ಹೋಲಿಸಿದರೆ ಸುಮಾರು ರೂ. 900 ಕೋಟಿಯಷ್ಟು ಅನುದಾನವನ್ನು ಕಡಿತಗೊಳಿಸಿದ್ದಾರೆ. ಇದೇ ಯೋಜನೆಗಳಿಗೆ ಕಳೆದ ಬಾರಿ ರೂ. 1,575 ಕೋಟಿ ಅನುದಾನವನ್ನು ಘೋಷಿಸಿದ್ದರು. ಆದರೆ ಬಿಡುಗಡೆಗೊಳಿಸಿದ್ದು ಮಾತ್ರ ಕೇವಲ ರೂ. 517 ಕೋಟಿ.
ಬಹಳ ಪ್ರಮುಖವಾಗಿ, ಮುಸ್ಲಿಮ್ ಸಮುದಾಯದ ಮಕ್ಕಳು ಅಭ್ಯಸಿಸುವ ಮದ್ರಸ ಶಿಕ್ಷಣಕ್ಕೆ ಆಧುನಿಕ ಅಥವಾ ಔಪಚಾರಿಕ ಶಿಕ್ಷಣದ ಕಲಿಕೆಯನ್ನು ಸಂಯೋಜಿಸಲು ನೀಡುತ್ತಿದ್ದ ಆರ್ಥಿಕ ಸಹಾಯವನ್ನು ಅತೀ ದೊಡ್ಡ ಪ್ರಮಾಣದಲ್ಲಿ ನಿಲ್ಲಿಸಿದ್ದಾರೆ, ಈ ಬಾರಿಯ ಬಜೆಟ್ನಲ್ಲಿ ಮದ್ರಸ ಶಿಕ್ಷಣಕ್ಕೆ ಕೇವಲ 0.01 ಕೋಟಿ ರೂ. ಅಂದರೆ ಕೇವಲ 10 ಲಕ್ಷ ರೂ. ಅನುದಾನವನ್ನು ಮಾತ್ರ ಮೀಸಲಿಟ್ಟಿದ್ದಾರೆ. ಕಳೆದ ಬಾರಿ ಇದಕ್ಕಾಗಿ ರೂ. 10 ಕೋಟಿ ಘೋಷಿಸಿದ್ದರು. ನಂತರದಲ್ಲಿ ಅದನ್ನು ಪರಿಷ್ಕರಿಸಿ ರೂ. 2 ಕೋಟಿಗೆ ಇಳಿಸಿದ್ದರು.
ಸಂಪೂರ್ಣ ಒಕ್ಕೂಟ ಸರಕಾರದಿಂದ ಅನುಷ್ಠಾನಗೊಳ್ಳುತ್ತಿರುವ ಅನೇಕ ಶೈಕ್ಷಣಿಕ, ಆರ್ಥಿಕ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಈ ಬಾರಿ ರೂ. 1,237 ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಇದಕ್ಕೆಲ್ಲ ಕಳೆದ ಬಾರಿ 2,120 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ನಂತರದಲ್ಲಿ ಅದನ್ನು ಪರಿಷ್ಕರಿಸಿ ರೂ. 770 ಕೋಟಿ ಅನುದಾನವನ್ನು ನೀಡಿದ್ದರು, ಒಟ್ಟಾರೆ ರೂ. 800 ಕೋಟಿಗಿಂತಲೂ ಅಧಿಕ ಅನುದಾನವನ್ನು ಕಡಿತಗೊಳಿಸಿದ್ದಾರೆ.
ಈ ಬಜೆಟ್ನಲ್ಲಿ ಗಮನಿಸಬೇಕಾದದ್ದು ಏನೆಂದರೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿಸಿರುವ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೆ ಕಳೆದ ಬಾರಿ ರೂ. 910 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿಯ ಬಜೆಟ್ನಲ್ಲಿ ಈ ಯೋಜನೆಗೆ ರೂ. 1,913 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಅಂದರೆ ಸುಮಾರು ರೂ. 1 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ಈ ಯೋಜನೆಗೆ ಮೀಸಲಿಟ್ಟಿರುವುದು ಮೇಲ್ನೋಟಕ್ಕೆ ಪ್ರಧಾನಿಯ ಹೆಸರಿನ ಮೇಲೆ ಚಾಲ್ತಿಯಲ್ಲಿರುವ ಯೋಜನೆಯನ್ನು ಜನಪ್ರಿಯಗೊಳಿಸುವ ಮೂಲಕ ಅಲ್ಪಸಂಖ್ಯಾತರ ಕಾಳಜಿಯನ್ನು ಪ್ರಕಟಿಸುವುದಾಗಿದೆ ಹೊರತು ಸಮುದಾಯದ ಸಬಲೀಕರಣಕ್ಕೆ ಅಗತ್ಯವಿರುವ ಯೋಜನೆಗಳಿಗೆ ಅನುದಾನ ನೀಡದಿರುವುದು ನೈಜ ಕಾಳಜಿ ಹೊಂದಿಲ್ಲ ಎಂಬುದು ಗೊತ್ತಾಗುತ್ತದೆ. ಪ್ರಚಾರ ಗಿಟ್ಟಿಸಿಕೊಳ್ಳಲು ಈ ಬಗೆಯ ಕಾರ್ಯತಂತ್ರವನ್ನು ಕೇಂದ್ರ ನಿರಂತರವಾಗಿ ಮಾಡುತ್ತಿರುವುದು ಜಗಜ್ಜಾಹೀರಾಗಿದೆ.
ಯುಪಿಎಸ್ಸಿ ಪೂರ್ವಭಾವಿ ಮತ್ತು ಎಸ್.ಎಸ್.ಸಿ. ಹಾಗೂ ರಾಜ್ಯದ ಲೋಕಸೇವಾ ಆಯೋಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ನೀಡುತ್ತಿದ್ದ ಕೋಚಿಂಗ್ ಅನ್ನು ಸಹ ನಿಲ್ಲಿಸಲಾಗಿದೆ. ಅದಲ್ಲದೆ ಮೌಲಾನಾ ಆಝಾದ್ ಎಜುಕೇಷನ್ ಫೌಂಡೇಷನ್ ಸಂಸ್ಥೆ ಮತ್ತು ಎನ್ಎಮ್ಡಿಎಫ್ಸಿಗೆ ಯಾವುದೇ ರೀತಿಯ ಅನುದಾನವನ್ನು ನೀಡಿಲ್ಲ, ಈ ಸಂಸ್ಥೆಗಳಿಗೆ ಕಳೆದ ಬಾರಿಯೂ ಯಾವುದೇ ಅನುದಾನವನ್ನು ನೀಡದೆ, ಸಂಸ್ಥೆಯ ಕಾರ್ಯವನ್ನು ನಿಲ್ಲಿಸಲಾಗಿದೆ.
2023-24ರ ಬಜೆಟ್ನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ 433 ಕೋಟಿ ರೂ. ನೀಡಲಾಗಿತ್ತು, ಆದರೆ ಅದರಲ್ಲಿ ಬಳಕೆ ಮಾಡಿದ್ದು ಮಾತ್ರ ಕೇವಲ ರೂ. 95 ಕೋಟಿ ಮಾತ್ರ. 2024-25ರ ಬಜೆಟ್ನಲ್ಲಿ ಈ ಯೋಜನೆಯ ಅನುದಾನವನ್ನು ರೂ. 326 ಕೋಟಿಗೆ ಇಳಿಸಲಾಯಿತು, ಆನಂತರ ಅದರಲ್ಲಿ ಕೇವಲ ರೂ.90 ಕೋಟಿ ಅನುದಾನವನ್ನು ಮಾತ್ರ ಬಿಡುಗಡೆಗೊಳಿಸಿತ್ತು. ಇದೀಗ 2025-26ರ ಬಜೆಟ್ನಲ್ಲಿ ಕೇವಲ ರೂ. 195 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಈ ಹಿಂದೆ ಪ್ರಿ-ಮೆಟ್ರಿಕ್ ಸ್ಕಾಲರ್ಶಿಪ್ ಅನ್ನು 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೂ ನೀಡಲಾಗುತ್ತಿತ್ತು. ಕಳೆದ ವರ್ಷದಲ್ಲಿ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಅನ್ನು ನಿಲ್ಲಿಸಿ ಕೇವಲ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಇದಕ್ಕಾಗಿ ಆರ್ಟಿಇ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ಆರ್ಟಿಇಯ ಶೈಕ್ಷಣಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಕೇಂದ್ರ ಸರಕಾರ ಯೋಜನೆಯನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದೆ.
ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಕಳೆದ ಬಾರಿ ರೂ. 413 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು, ಆದರೆ ಈ ಬಾರಿ ಅನುದಾನವನ್ನು ಶೇ. 65ರಷ್ಟು ಇಳಿಕೆ ಮಾಡಿದ್ದಾರೆ.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಕಳೆದ ಬಾರಿ ರೂ. 33.80 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿ ಅನುದಾನವನ್ನು ರೂ. 7.34 ಕೋಟಿಗೆ ಇಳಿಕೆ ಮಾಡಿದ್ದಾರೆ.
ಉನ್ನತ ಶಿಕ್ಷಣ ಅಧ್ಯಯನಕ್ಕೆ ವಿದೇಶಿ ವಿವಿಗಳಲ್ಲಿ ಕಲಿಯಲು ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಕಳೆದ ಬಾರಿ ರೂ. 15.30 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿ ಅದನ್ನು ಕಡಿತಗೊಳಿಸಿ ರೂ. 8.16 ಕೋಟಿ ಮಾತ್ರ ಅನುದಾನವನ್ನು ಮೀಸಲಿಟ್ಟಿದ್ದಾರೆ.
ಈ ಹಿಂದಿನಿಂದಲೂ ಸಾಚಾರ್ ವರದಿ ಮತ್ತು ರಂಗನಾಥ ಮಿಶ್ರಾರಂತಹ ಸಮೀಕ್ಷಾ ವರದಿಗಳ ಅಂಕಿ-ಅಂಶಗಳು ಸರಕಾರದ ಮುಂದಿದ್ದರೂ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ನ್ಯಾಯದ ಬಗೆಗೆ ನಿಜವಾದ ಕಾಳಜಿ ಇಲ್ಲದಿರುವುದು ಬರಹಿರಂಗವಾಗಿದೆ. ಇದರೊಂದಿಗೆ ಜಾತಿ, ಧರ್ಮ ಮತ್ತು ಸೈದ್ಧಾಂತಿಕ ಭಿನ್ನತೆಯ ಆಧಾರದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳುವ ಬಿಜೆಪಿಯ ರಾಜಕೀಯ ಸಿದ್ಧಾಂತವು ಸಾಮಾಜಿಕ ಸಮಾನತೆಗೆ ವಿರುದ್ಧವಾದ ನಡೆಯಾಗಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಅಲ್ಪಸಂಖ್ಯಾತರ ಸಮುದಾಯಕ್ಕೆ ಸಂವಿಧಾನ ಒದಗಿಸಿದ ಹಕ್ಕುಗಳನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಬಜೆಟ್ ಮೂಲಕ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಸರಕಾರವೇ ಮುಂದೆ ನಿಂತು ಅನುದಾನ ಕಡಿತಗೊಳಿಸುವುದು ಹಾಗೂ ಅಭಿವೃದ್ಧಿಗೆ ಬೇಕಾದ ಅನುದಾನದ ಹಂಚಿಕೆಯಲ್ಲಿ ನಿರಂತರವಾಗಿ ತಾರತಮ್ಯ ನೀತಿ ಅನುಸರಿಸುತ್ತಿ ರುವುದು ಪ್ರಜಾಪ್ರಭುತ್ವದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮೌಲ್ಯಕ್ಕೆ ವಿರುದ್ಧವಾದುದಾಗಿದೆ.