ಸಂವಿಧಾನವನ್ನು ಮುಳುಗಿಸುವ ಯತ್ನ ಯಾರದ್ದು?

ನಿನ್ನೆ ರವಿವಾರ ಇಡೀ ಭಾರತ 76ನೇ ಗಣರಾಜ್ಯೋತ್ಸವವನ್ನು ಆಚರಿಸಿತು. ಆದರೆ, ಇನ್ನೊಂದೆಡೆ ‘ಸಂವಿಧಾನ ಸಮ್ಮಾನ’ ಎಂಬ ಅಭಿಯಾನ ನಡೆಸುತ್ತಿರುವವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಸಮ್ಮಾನ ಮಾಡಲು ಹೊರಟವರೇ ಇನ್ನೊಂದೆಡೆ ಈ ಸಂವಿಧಾನವನ್ನು ಮುಳುಗಿಸಿ ತಮ್ಮದೇಸಂವಿಧಾನವನ್ನು ತರಲು ಹೊರಟಿದ್ದಾರೆ.
ಈಗಿರುವ ಇಡೀ ಭಾರತ ಒಪ್ಪಿದ ಬಾಬಾಸಾಹೇಬರ ಸಂವಿಧಾನವನ್ನು ಬದಲಿಸಿ ಉದ್ದೇಶಿತ ‘ಹಿಂದೂರಾಷ್ಟ್ರ’ ನಿರ್ಮಾಣಕ್ಕೆ ಅಗತ್ಯ ಸಂವಿಧಾನ ರಚನೆಯಾಗಿ ಅಂತಿಮ ಸ್ವರೂಪ ಪಡೆಯುವ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆದಿದೆ.ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಫೆಬ್ರವರಿ 3ರಂದು ‘ವಸಂತ ಪಂಚಮಿ’ ದಿನ ಈ ಸಂವಿಧಾನವನ್ನು ಬಹಿರಂಗ ಮಾಡಿ ರಾಷ್ಟ್ರವ್ಯಾಪಿ ಚರ್ಚೆಗೆ ಬಿಡಲಾಗುತ್ತದೆ. ಮನುಸ್ಪತಿ ಹಾಗೂ ಚಾಣಕ್ಯನ ಅರ್ಥಶಾಸ್ತ್ರದಲ್ಲಿನ ಮತ್ತು ರಾಮರಾಜ್ಯದ ತತ್ವಾದರ್ಶಗಳ ಆಧಾರದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಂತ ಮಂಡಳಿಯ ಸಂತರು, ಸಾಧುಗಳು ಹಾಗೂ ಆಯ್ದ ಪರಿಣಿತರು ಹಿಂದೂ ರಾಷ್ಟ್ರದ ಈ ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳ ಪೀಠಾಧಿಪತಿಗಳು ಇದಕ್ಕೆ ಒಪ್ಪಿಗೆ ನೀಡಿದ ನಂತರ, ಈ ಸಂವಿಧಾನವನ್ನು ಕೇಂದ್ರದ ಮೋದಿ ನೇತೃತ್ವದ ಸರಕಾರಕ್ಕೆ ಕಳಿಸಲಾಗುತ್ತದೆ ಎಂದು ಸದರಿ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಸಂತರೊಬ್ಬರು ಬಹಿರಂಗ ಪಡಿಸಿದ್ದಾರೆ.
ಈ ಹಿಂದೂ ರಾಷ್ಟ್ರದ ಸಂವಿಧಾನದ ಪ್ರಕಾರ ಏಕ ಸದನ ಸಂಸದೀಯ ವ್ಯವಸ್ಥೆಯ ಬಗ್ಗೆ ಪ್ರತಿಪಾದಿಸಲಾಗಿದೆ. ಸಂಸತ್ತಿಗೆ ‘ಧರ್ಮಸಂಸತ್ತು’ ಎಂದು ಹೆಸರಿಸಲಾಗಿದೆ. ಈ ಸಂವಿಧಾನದ ಪ್ರಕಾರ, ಸನಾತನ ಧರ್ಮದ ಅನುಯಾಯಿಗಳು ಮಾತ್ರ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಎರಡನೆಯದಾಗಿ ಗುರುಕುಲ ಪದ್ಧತಿಯಲ್ಲಿ ವೇದಾಧ್ಯಯನವನ್ನು ಮಾಡಿದವರು ಮಾತ್ರವೇ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬಹುದು. ಸನಾತನ ಧರ್ಮವೂ ಸೇರಿದಂತೆ ಉಪಖಂಡದ ಇತರ ಧರ್ಮಗಳಾದ ಬೌದ್ಧ, ಸಿಖ್, ಜೈನ ಧರ್ಮದ ಅನುಯಾಯಿಗಳಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಈಗಿರುವ ನ್ಯಾಯಾಂಗ ವ್ಯವಸ್ಥೆಯ ಬದಲಿಗೆ ಹಿಂದೂ ನ್ಯಾಯಾಂಗ ವ್ಯವಸ್ಥೆ ಜಾರಿ, ಗುರುಕುಲ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವುದು, ಆಧುನಿಕ ಶಿಕ್ಷಣ ಪದ್ಧತಿಯ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಗುರುಕುಲಗಳನ್ನಾಗಿ ಬದಲಿಸುವುದು ಮತ್ತು ಸರಕಾರದ ಆರ್ಥಿಕ ಸಹಾಯದಿಂದ ನಡೆಯುತ್ತಿರುವ ಎಲ್ಲ ಮದರಸಗಳಿಗೆ ಬೀಗ ಹಾಕುವುದು ಇವೇ ಮೊದಲಾದ ಅಂಶಗಳು ಈ ಹೊಸ ಸಂವಿಧಾನದಲ್ಲಿವೆ.
ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಸ್ವತಂತ್ರ ಭಾರತ ಅಂಗೀಕರಿಸಿ 75 ವರ್ಷಗಳಾದ ಸಂದರ್ಭದಲ್ಲಿ ಭಾರತಕ್ಕೆ ಬೆಳಕು ನೀಡಿ ಮುನ್ನಡೆಸಿದ ಸಂವಿಧಾನ ಈಗ ಅಳಿವು ಉಳಿವಿನ ಸವಾಲನ್ನು ಎದುರಿಸುತ್ತಿದೆ. ಸ್ವತಂತ್ರ ಭಾರತ ಸಂವಿಧಾನವನ್ನು ಅಂಗೀಕರಿಸುವ ಸಂದರ್ಭದಲ್ಲಿ ಡಾ ಅಂಬೇಡ್ಕರ್ ಅವರು, ‘ಈ ಸಂವಿಧಾನವನ್ನು ಒಳ್ಳೆಯವರು ಅನುಷ್ಠಾನ ಗೊಳಿಸಿದರೆ ಸಮರ್ಪಕವಾಗುತ್ತದೆ. ಕೆಟ್ಟವರ ಕೈಗೆ ಹೋದರೆ ಹಾಳಾಗುತ್ತದೆ’ ಎಂದಿದ್ದರು. ಇದು ಈ ಸನ್ನಿವೇಶದಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ. ಸಂವಿಧಾನ ಬದಲಾವಣೆಯ ಈ ಮಸಲತ್ತು ಅನಿರೀಕ್ಷಿತವಲ್ಲ. ಫ್ಯಾಶಿಸ್ಟ್ ಶಕ್ತಿಗಳು ಸ್ವಾತಂತ್ರ್ಯ ಬಂದ ದಿನದಿಂದಲೇ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.
ಎಪ್ಪತ್ತು ಎಂಭತ್ತರ ದಶಕದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಈ ಅಪಾಯದ ಬಗ್ಗೆ ಎಚ್ಚರಿಸಿತ್ತು.ಆದರೆ ಅಂದಿನ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ವಿವೇಕದ ಈ ಧ್ವನಿಯನ್ನು ಯಾರೂ ಗಮನಿಸಲಿಲ್ಲ. ಈಗ ಎಲ್ಲ
ಕೈಮೀರಿದ ನಂತರ ಸತ್ತರೂ ಯಾರು ಕೇಳುವವರಿಲ್ಲದ ಕಾಲಘಟ್ಟದಲ್ಲಿ ಸಂವಿಧಾನವನ್ನು ಉಳಿಸಿಕೊಳ್ಳುವ ಕೂಗು ಅರಣ್ಯರೋದನವಾಗಿದೆ. ಜಾತಿ ಮತ ನೋಡದೇ ಎಲ್ಲರನ್ನೂ ಸಮಾನವಾಗಿ ನೋಡುವ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆ ಫ್ಯಾಶಿಸ್ಟ್ ಶಕ್ತಿಗಳಿಗೆ ಬೇಕಾಗಿಲ್ಲ. ಭಿನ್ನಾಭಿಪ್ರಾಯವನ್ನು ಗೌರವಿಸುವುದು ಪ್ರಜಾಪ್ರಭುತ್ವದ ಮೂಲ ತತ್ವ.ಆದರೆ ಈಗ ಅಭಿಪ್ರಾಯ ಭೇದವಿದ್ದವರನ್ನೆಲ್ಲ ಕತ್ತಲ ಕೋಣೆಗೆ ದಬ್ಬುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕಲಾಗುತ್ತಿದೆ.ಅಂತಲೇ ಇದು ಪ್ರಜಾತಂತ್ರದ ಅಗ್ನಿಪರಿಕ್ಷೆಯ ಕಾಲ.
ಜನವರಿ 26 ಸಾಮಾನ್ಯ ದಿನವಲ್ಲ.ಆಗಸ್ಟ್ 15 ರಂತೆ ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. 1947ರ ಆಗಸ್ಟ್ 15 ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ದಿನ. ಅದೇ ರೀತಿ 1950ನೇ ಇಸವಿ ಜನವರಿ 26ರಂದು ನಾವು ಒಪ್ಪಿಕೊಂಡಿರುವ ಸಂವಿಧಾನ ಜಾರಿಗೆ ಬಂದ ದಿನ.
ಈ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇದೇ ಸಂವಿಧಾನವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರ ಕೈಗೆ ತೆಗೆದುಕೊಂಡಿದ್ದಾರೆ. ಅವರಿಂದಲೇ ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ. ಸ್ವಾತಂತ್ರ್ಯ ಬಂದ ನಂತರ ನಮ್ಮನ್ನು ಆಳಿದ ಸರಕಾರಗಳು ಹಾಗೂ ಪ್ರಜಾಪ್ರಭುತ್ವ ವಾದಿ ಶಕ್ತಿಗಳು ಹೊಸ ಪೀಳಿಗೆಯಲ್ಲಿ ಸಂವಿಧಾನದ ಅರಿವು ಮೂಡಿಸಿದ್ದರೆ ದೇಶ ಇಂಥ ಸಂಕಟದ ಸಂದರ್ಭ ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.
ಈ ಸಂವಿಧಾನ ಬರುವ ಮುಂಚೆ ಈ ಭಾರತ ಹೇಗಿತ್ತು ಎಂದು ವಿವರಿಸಿ ಹೇಳಬೇಕಾಗಿಲ್ಲ.ಹಿಂದೆ ಇಲ್ಲಿ ಶ್ರೇಣೀಕೃತ ಜಾತಿ ಪದ್ದತಿ ಇತ್ತು. ಅಸ್ಪಶ್ಯತೆಯ ನಗ್ನ ತಾಂಡವ ನೃತ್ಯವಿತ್ತು. ತುಳಿಯುವ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುವ ನ್ಯಾಯ ವ್ಯವಸ್ಥೆ ಇತ್ತು.ಹೆಣ್ಣು ಮಕ್ಕಳಿಗೆ ಸಮಾನತೆ ಇರಲಿಲ್ಲ. ಹೀಗೆ ಮನುಷ್ಯರ ನಡುವೆ ತಾರತಮ್ಯಗಳಿಂದ ಕೂಡಿದ ಸಮಾಜ ಇಲ್ಲಿತ್ತು.ಇದನ್ನು ಪ್ರತಿರೋಧಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಈಗ ಇದೆಲ್ಲ ಸಂಪೂರ್ಣ ಮಾಯವಾಗಿದೆಯೆಂದಲ್ಲ. ಆದರೆ ಧ್ವನಿ ಕಳೆದುಕೊಂಡ ಸಮುದಾಯಗಳಿಗೆ ಸಂವಿಧಾನ ರಕ್ಷಾ ಕವಚವಾಗಿದೆ ಎಂಬುದು ನಿಜ.
ಸಂವಿಧಾನ ಬಂದ ನಂತರ ಅಸ್ಪಶ್ಯತೆಯ ಆಚರಣೆ ಅಪರಾಧವಾಗಿದೆ. ವರದಕ್ಷಿಣೆ ನಿರ್ಬಂಧಿಸಲ್ಪಟ್ಟಿದೆ.ಶತಮಾನಗಳಿಂದ ದುಡಿದು ದೇಶ ಕಟ್ಟಿದವರ ರಕ್ಷಣೆ ಗೆ ಮೀಸಲು ವ್ಯವಸ್ಥೆ ಜಾರಿಗೆ ಬಂದಿದೆ.ಅನ್ಯಾಯವನ್ನು ಪ್ರತಿಭಟಿಸುವ ಅವಕಾಶ ದೊರಕಿದೆ. ಆದರೆ ಈಗ ನಮ್ಮೆದುರು ಹೊಸ ಸವಾಲು ಎದುರಾಗಿದೆ. ನೂರಾರು ಭಾಷೆಗಳು, ಧರ್ಮಗಳು, ಜನಾಂಗಗಳು, ಸಂಸ್ಕೃತಿಗಳು ಹಾಗೂ ರಾಷ್ಟ್ರೀಯತೆಗಳನ್ನು ಒಳಗೊಂಡಿರುವ ಈ ನಮ್ಮ ಬಹುತ್ವ ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನ ಒಂದು ದೇಶವಾಗಿರಲಿಲ್ಲ.ಇಲ್ಲಿ ಊರಿಗೊಬ್ಬ ರಾಜರು,ಪ್ರದೇಶಕ್ಕೊಬ್ಬ ಸಾಮ್ರಾಟರು,ಚಕ್ರವರ್ತಿಗಳು ಇದ್ದರು.ಸ್ವಾತಂತ್ರ್ಯ ಬಂದಾಗ ಇವರನ್ನು ದೂರವಿಟ್ಟು ಸಮಸ್ತ ಭಾರತೀಯರ ಕೈಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ರಾಷ್ಟ್ರೀಯ ಆಂದೋಲನದ ಮುಖ್ಯ ಉದ್ದೇಶವಾಗಿತ್ತು.ಆದರೆ ರಾಜ ಮಹಾರಾಜರ ಆಸ್ಥಾನದಲ್ಲಿ ಭಟ್ಟಂಗಿಗಳು ಹಾಗೂ ವಿದೂಷಕರಾಗಿದ್ದ ಸ್ವಾರ್ಥಿಗಳಿಗೆ ಈ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಬಂದಿರುವದು ಇಷ್ಟವಿಲ್ಲ. ಅವರೇ ಈಗ ಅಪಸ್ವರ ತೆಗೆಯುತ್ತಿದ್ದಾರೆ.
ಸಮಸ್ತ ಭಾರತೀಯರೆಂದರೆ ಯಾವುದೇ ಒಂದು ಧರ್ಮ,ಇಲ್ಲವೇ ಜಾತಿಗೆ ಸೇರಿದವರಲ್ಲ.ಶತಮಾನಗಳಿಂದ ಈ ನೆಲದಲ್ಲಿ ಒಟ್ಟಿಗೆ ಬಾಳಿದ, ಒಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಎಲ್ಲ ಸಮುದಾಯಗಳ ಜನರೂ ಭಾರತೀಯರು ಇದರಲ್ಲಿ ಹಿಂದೂ, ಮುಸ್ಲಿಮ್, ಜೈನ, ಸಿಖ್, ಕ್ರೈಸ್ತ, ಎಲ್ಲರೂ ಇದ್ದಾರೆ. ಅಂತಲೇ ಇದು ಹಿಂದೂ ರಾಷ್ಟ್ರವಲ್ಲ, ಮುಸ್ಲಿಮ್ ರಾಷ್ಟ್ರವಲ್ಲ, ಕ್ರೈಸ್ತ ರಾಷ್ಟ್ರವಲ್ಲ,ಇದು ಇವರೆಲ್ಲರನ್ನು ಒಳಗೊಂಡ ಧರ್ಮ ನಿರಪೇಕ್ಷ ರಾಷ್ಟ್ರ, ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಂಡೆವು.ಇದಕ್ಕೆ ಸೂಕ್ತವಾದ, ಪೂರಕವಾದ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದರು.
1947ರ ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಂವಿಧಾನ ರಚನಾ ಸಭೆಗೆ 296 ಜನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಭಿನ್ನಾಭಿಪ್ರಾಯ ಕಾರಣ ಕೆಲ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. 1946 ಡಿಸೆಂಬರ್ 6 ರಂದು ಮೊದಲ ಸಭೆ ನಡೆದು ಸಂವಿಧಾನ ರಚನೆಯ ಪ್ರಕ್ರಿಯೆ ಆರಂಭವಾಯಿತು. ಒಂದು ವರ್ಷ ಎರಡು ತಿಂಗಳ ಕಾಲಾವಧಿಯಲ್ಲಿ ಹಲವಾರು ಬಾರಿ ಸಭೆ ಸೇರಿ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದೆ ಚರ್ಚೆಗೆ ಇಡಲಾಯಿತು. ಜನರೇ ಇದಕ್ಕೆ 7,635 ತಿದ್ದುಪಡಿ ಗಳನ್ನು ಸೂಚಿಸಲಾಯಿತು. ಈ ತಿದ್ದುಪಡಿಗಳನ್ನು ಪರಿಶೀಲಿಸಿ,ಸೂಕ್ತ ವಾದವುಗಳನ್ನು ಒಪ್ಪಿ 1949 ನವೆಂಬರ್ 26ರಂದು ಅಂತಿಮ ಕರಡನ್ನು ಭಾರತ ಸರಕಾರಕ್ಕೆ ಸಲ್ಲಿಸಲಾಯಿತು. ಮುಂದೆ 1950 ಜನವರಿ 26ರಂದು ಈ ಸಂವಿಧಾನವನ್ನು ಅಂಗೀಕರಿಸಿ ಜಾರಿಗೆ ಬಂತು.
ಸಂವಿಧಾನ ರಚನಾ ಸಮಿತಿಯಲ್ಲಿ 272 ಸದಸ್ಯರಿದ್ದರೂ ಸಂವಿಧಾನ ರಚನೆಯಲ್ಲಿ ಕೆಲವೇ ಕೆಲವು ಸದಸ್ಯರ ಕೊಡುಗೆ ಅಮೂಲ್ಯವಾಗಿದೆ.ಅದರಲ್ಲೂ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಬಾಬಾಸಾಹೇಬ ಅಂಬೇಡ್ಕರ್ ಅವರು ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡಿ ನಮಗೊಂದು ಸಂವಿಧಾನವನ್ನು ನೀಡಿದರು.ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬರ ಕೊಡುಗೆಯನ್ನು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.ಕರ್ನಾಟಕದವರಾದ ಬೆನಗಲ್ ನರಸಿಂಗರಾವ್ ಅವರೂ ಬಾಬಾಸಾಹೇಬರ ಜೊತೆಗೆ ಸಂವಿಧಾನ ರಚನೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದರು.
ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಹೆಸರಾಗಿದೆ.ಅತ್ಯಂತ ವೈವಿಧ್ಯಪೂರ್ಣವಾದ ಬಹುಧರ್ಮೀಯ,ಬಹುಜನಾಂಗೀಯ, ಬಹುಭಾಷಿಕ, ಬಹು ಸಾಂಸ್ಕೃತಿಕ ಹಾಗೂ ಬಹು ರಾಷ್ಟ್ರೀಯತೆಗಳನ್ನು ಒಳಗೊಂಡ ಭೂ ಪ್ರದೇಶಕ್ಕೆ ಅತ್ಯಂತ ಸೂಕ್ತವಾದ, ಎಲ್ಲ ಜನ ಸಮುದಾಯಗಳ ಜನರ ಭಾವನೆಗಳನ್ನು ಪ್ರತಿನಿಧಿಸುವ ಸಂವಿಧಾನವಿದು. ಶತಮಾನಗಳಿಂದ ಗೂಟಕ್ಕೆ ಕಟ್ಟಿದ ದನಗಳಂತೆ ನರಳಿ, ನರಳಿ ಬದುಕಿದ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಬೆಳಕನ್ನು ನೀಡಿರುವ ಸಂವಿಧಾನವಿದು.
ಇಂಥ ಸಂವಿಧಾನಕ್ಕೆ ಈಗ ಅಪಾಯ ಎದುರಾಗಿದೆ.ಇದನ್ನು ಬುಡಮೇಲು ಮಾಡಿ ಮನುವಾದಿ, ರಾಷ್ಟ್ರ ನಿರ್ಮಿಸುವ ಮಸಲತ್ತು ನಡೆಯುತ್ತಿದೆ.ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ದಮನ ಸತ್ರ ನಡೆದಿದೆ.ಸಂವಿಧಾನದ 19(1) (ಎ) ಎಲ್ಲಾ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ.ಸಂವಿಧಾನ ದತ್ತವಾದ ಈ ವಾಕ್ ಸ್ವಾತಂತ್ರ್ಯ ಇರುವಾಗಲೂ ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ ಕಾರಣಕ್ಕಾಗಿ ಚಿಂತಕರನ್ನು, ಆನಂದ ತೇಲ್ತುಂಬ್ಡೆ ಅವರಂಥ ಲೇಖಕರನ್ನು ಜೈಲಿಗೆ ಹಾಕಲಾಗಿತ್ತು. ದಾಭೋಲ್ಕ್ಕರ್, ಗೋವಿಂದ ಪನ್ಸ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರಂಥ ಹೋರಾಟಗಾರರು ಹಾಗೂ ಲೇಖಕರನ್ನು ಹತ್ಯೆ ಮಾಡಲಾಯಿತು. ಇದಕ್ಕೆ ಯಾರು ಕಾರಣ ಎಂಬುದು ಬಯಲಿಗೆ ಬರಬೇಕಾಗಿದೆ. ಆದರೆ ಲೇಖಕರು, ಕಲಾವಿದರು, ಚಿಂತಕರ ಬಾಯಿ ಮುಚ್ಚಿಸುವ ಸರ್ವಾಧಿಕಾರಿ ನೀತಿ ಸಂವಿಧಾನದ ಮೇಲೆ ಸವಾರಿ ಮಾಡುತ್ತಿದೆ.ಇದಕ್ಕೆ ಯಾರು ಕಾರಣವೆಂಬುದು ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್ ರೂಪಿಸಿದ ಸಂವಿಧಾನಕ್ಕೆ ಪರ್ಯಾಯವಾಗಿ ಬರಲಿರುವ ಸಂವಿಧಾನದಲ್ಲಿ ಇನ್ನು ಏನೇನು ಇದೆಯೋ ಯಾರಿಗೆ ಗೊತ್ತು?
ಸ್ವತಂತ್ರ ಭಾರತ ನಡೆಯಬೇಕಾಗಿರುವುದು ಸಂವಿಧಾನದ ಆಧಾರದಲ್ಲಿ.ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ಗಳು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಬೇಕು.ಆದರೆ ಅದಕ್ಕೆ ಈಗ ಚ್ಯುತಿ ಬರುತ್ತಿದೆ.ಕ್ರಿಮಿನಲ್ ಮಾಫಿಯಾಗಳು ಕಾನೂನಿನ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿವೆ.ಸಂವಿಧಾನ ರಕ್ಷಣೆ ನೀಡಿದ್ದರೂ ಅಸ್ಪಶ್ಯರ ಮೇಲೆ ಪ್ರತಿ ದಿನ ಸರಾಸರಿ 27 ದೌರ್ಜನ್ಯಗಳು ನಡೆಯುತ್ತಿವೆ. ಪ್ರತೀ ದಿನ ಐವರಿಂದ ಅಸ್ಪಶ್ಯರ
ಮನೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ.ಪ್ರತಿವಾರ ಹನ್ನೊಂದು ಅಸ್ಪ್ರಶ್ಯರ ಹತ್ಯೆಯಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ ವರದಿಯ ಪ್ರಕಾರ ಪ್ರತೀ 77 ನಿಮಿಷಗಳಿಗೆ ಒಬ್ಬ ಮಹಿಳೆ ಹಿಂಸೆಯಿಂದ ಅಸು ನೀಗುತ್ತಿದ್ದಾಳೆ. ಪ್ರತೀ 6 ತಾಸಿಗೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತ ಸುಟ್ಟು ಹಾಕಲಾಗುತ್ತಿದೆ.ದೇಶದಲ್ಲಿ ಸುಮಾರು 45 ಸಾವಿರ ಮಕ್ಕಳು ಪ್ರತಿವರ್ಷ ಕಾಣೆಯಾಗುತ್ತಿದ್ದಾರೆ. ನಕಲಿ ಎನ್ಕೌಂಟರ್ ಗಳು, ಪೊಲೀಸ್ ಠಾಣೆಗಳಲ್ಲಿ ಸಂಶಯಾಸ್ಪದ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇವೆೆ. ಇವುಗಳನ್ನೆಲ್ಲ ಪ್ರಶ್ನಿಸಿ ಧ್ವನಿಯೆತ್ತಿದರೆ ಅಂಥವರನ್ನು ಅರ್ಬನ್ ನಕ್ಸಲ್ ಎಂದು ಕರೆದು ಜೈಲಿಗೆ ದಬ್ಬಲಾಗುತ್ತಿದೆ ಧರ್ಮನಿರಪೇಕ್ಷತೆ ನಮ್ಮ ಸಂವಿಧಾನದ ಮೂಲತತ್ವವಾಗಿದ್ದರೂ ಅದರ ಮೇಲೆಯೇ ದಾಳಿ ನಡೆದಿದೆ.ಯಾರು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು,ಯಾವ ಬಟ್ಟೆ ಧರಿಸಬೇಕು,ಯಾರನ್ನು ಪ್ರೀತಿಸಬೇಕು,ಯಾರನ್ನು ಮದುವೆಯಾಗಬೇಕು, ಯಾರೊಂದಿಗೆ ಯಾರು ಮಾತಾಡಬೇಕು, ಎಷ್ಟು ಮದುವೆಯಾಗಬೇಕು,ಎಷ್ಟು ಮಕ್ಕಳನ್ನು ಹಡೆಯಬೇಕು ಎಂಬ ಅತ್ಯಂತ ವೈಯಕ್ತಿಕ ವಿಷಯಗಳನ್ನು ತೀರ್ಮಾನಿಸುವ ದೊಣ್ಣೆ ನಾಯಕರು ಈ ದೇಶದಲ್ಲಿ ಹುಟ್ಟಿಕೊಂಡಿದ್ದಾರೆ.ಗೋ ರಕ್ಷಣೆ,ಮತಾಂತರದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಪ್ರತಿ ದಿನ ಹಲ್ಲೆ ಮಾಡುತ್ತ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಭಾರತವನ್ನು ಕಲ್ಯಾಣ ರಾಜ್ಯ ಮಾಡುವುದು ನಮ್ಮ ಸಂವಿಧಾನದ ಗುರಿಯಾಗಿದೆ.ಕಲ್ಯಾಣ ರಾಜ್ಯವೆಂದರೆ ಜನಸಾಮಾನ್ಯರಿಗೆ ಆಹಾರ,ಕುಡಿಯುವ ನೀರು,ಆರೋಗ್ಯ, ಶಿಕ್ಷಣ , ಉದ್ಯೋಗ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವುದು.ಹಾಗೇ ಕೊರತೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಆದರೆ ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲವನ್ನೂ ಅಂಬಾನಿ,ಅದಾನಿಯಂಥ ಖಾಸಗಿ ರಂಗದ ತಿಮಿಂಗಿಲಗಳ ಮಡಿಲಿಗೆ ಹಾಕಲು ಹೊರಟ ಸರಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದೆ.ಸಾಮಾಜಿಕ ನ್ಯಾಯದ ಉದ್ದೇಶದಿಂದ ತರಲಾಗಿರುವ ದಲಿತ ದಮನಿತ ಸಮುದಾಯಗಳ ಮೀಸಲು ವ್ಯವಸ್ಥೆಯನ್ನು ನಾಶ ಮಾಡುವ ಮಸಲತ್ತು ನಡೆದಿದೆ.
ಒಂದೇ ದೇಶ,ಒಂದೇ ಭಾಷೆ,ಒಂದೇ ಧರ್ಮ,ಒಂದೇ ಸಂಸ್ಕೃತಿ ಹೆಸರಿನಲ್ಲಿ ವೈವಿಧ್ಯಮಯವಾದ ಭಾರತದ ಪ್ರಾದೇಶಿಕ ಅಸ್ಮಿತೆಗಳನ್ನು ನಾಶ ನಾಡುವ ಹುನ್ನಾರ ನಡೆದಿದೆ.ದಕ್ಷಿಣ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮೇಲೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇರುವ ದೌರ್ಜನ್ಯ ನಡೆದಿದೆ.ಬಾರಾ ಬಾನಗಡಿ ಮಾಡಿ ಶೇಕಡಾ 49 ರಷ್ಟು ಮತಗಳನ್ನು ಮಾತ್ರ ಪಡೆದು ಕೇಂದ್ರದ ಚುಕ್ಕಾಣಿ ಹಿಡಿದ ನಾಗಪುರ ನಿರ್ದೇಶಿತ ಪಕ್ಷ ಸಂಸತ್ತಿನಲ್ಲಿ ಚರ್ಚೆ ಮಾಡದೇ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ.
ಈಗ ದೇಶದ ಮುಂದೆ ಉಳಿದ ಏಕೈಕ ದಾರಿ ಬಾಬಾಸಾಹೇಬರ ಸಂವಿಧಾನದ ಸಂರಕ್ಷಣೆ. ಈ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂಬುದನ್ನು ಮರೆಯಬಾರದು.