ಹಟ್ಟಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಸಂಘಟನೆಗಳಿಂದ ಪ್ರತಿಭಟನೆ

ಹಟ್ಟಿ : ಪಟ್ಟಣದ ವಿವಿಧ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ಶೌಚಾಲಯ, ರಸ್ತೆ, ವಿದ್ಯುತ್, ಬಸ್ ನಿಲ್ದಾಣ ಒತ್ತುವರಿ, ರುದ್ರಭೂಮಿ, ಮಟಕಾ, ಇಸ್ಪೀಟ್ ದಂಧೆಗೆ ಕಡಿವಾಣ ಹಾಕಬೇಕು ಎಂಬ ಬೇಡಿಕೆಗಳು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಡಿವೈಎಫ್ಐ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಎಸ್ಎಫ್ಐ ಜಂಟಿ ಸಂಘಟನೆಗಳು ಪಟ್ಟಣ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಹಲವು ಹಂತಗಳಲ್ಲಿ ಹೋರಾಟ ನಡೆಸಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಸೇರಿ ತಾಲೂಕಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದೇವೆ. ಆದರೆ ಸಮಸ್ಯೆಗಳನ್ನು ಈಡೇರಿಸುವಲ್ಲಿ ಪಪಂ ಹಾಗೂ ತಾಲೂಕು ಪಂಚಾಯತ್ ನ ಆಡಳಿತ ವಿಫಲವಾಗಿದೆ. ಮುಂದೆಯೂ ಇದೇ ರೀತಿಯಲ್ಲಿ ಮುಂದುವರೆದರೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಜಂಟಿ ಸಂಘಟನೆಗಳು ಎಚ್ಚರಿಕೆ ನೀಡಿದೆ.
ಈ ವೇಳೆ ಮುಖ್ಯಾಧಿಕಾರಿ ಜಗನಾಥ್ ದೇಸಾಯಿ ಮನವಿ ಪತ್ರ ಸ್ವೀಕರಿಸಿ, ಆದಷ್ಟು ಬೇಗನೇ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಸಿಐಟಿಯು ತಾಲೂಕು ಸಂಚಾಲಕ ಹನೀಫ್, ಡಿವೈಎಫ್ಐ, ರಿಯಾಜ್ ಖುರೇಷಿ, ಚನ್ನಬಸವ ಅಂಬೇಡ್ಕರ್ ನಗರ, ಸಿಐಟಿಯು ಮುಖಂಡರಾದ ವೆಂಕಟೇಶ ಗೋರಕಲ್, ನಿಂಗಪ್ಪ ಎಂ, ಅಲ್ಲಾಭಕ್ಷ ದೇವರಭೂಪುರು, ರಫಿ, ಎಸ್ಎಫ್ಐ ಮುಖಂಡ ವಿನಯ್ ಕುಮಾರ್, ನಾಗರಾಜ್ ಹನಮಗುಡ್ಡ ಹೊಸೂರು, ಹಾಜಿ ಕಟ್ಟಿಮನಿ, ಖಾಜಾ ಮೈನುದ್ದೀನ್, ಮಹಾಂತೇಶ್ ಮುದಗಲ್, ನಾಗಯ್ಯ ತಾತಾ, ಇಮ್ರಾನ್, ಬೆಟ್ಟಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.