ಲಿಂಗಸೂಗೂರು | ಕಠಿಣ ಪರಿಶ್ರಮದಿಂದ ಓದಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ : ಬೀರಪ್ಪ ಜಗ್ಗಲ್

ಲಿಂಗಸೂಗೂರು : ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯ ವ್ಯರ್ಥ ಮಾಡದೇ ಕಠಿಣ ಪರಿಶ್ರಮದಿಂದ ಓದಿದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಾಧನೆ ಮೂಲಕ ನಿಮಗಾಗಿ ನಿರಂತರವಾಗಿ ದುಡಿಯುವ ತಂದೆ-ತಾಯಿಗಳ ಕಷ್ಟ ಮತ್ತು ವಿದ್ಯೆ ಕಲಿಸಿದ ಗುರುಗಳ ಶ್ರಮ ಸಾರ್ಥಗೊಳಿಸಬೇಕು ಎಂದು ಪ್ರಾಧ್ಯಾಪಕ ಬೀರಪ್ಪ ಜಗ್ಗಲ್ ಕರೆ ನೀಡಿದರು.
ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಹನುಮವ್ವ ಸಂಗನಗೌಡ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಗುರಿಯಿರಲಿ, ಗುರಿ ತಲುಪುವ ಕಡೆ ಗಮನವಿರಲಿ, ಈ ಎರಡು ವರ್ಷ ಶ್ರಮವಹಿಸಿ ಓದಿದರೆ ಜೀವನ ಪರ್ಯಂತ ದೊಡ್ಡ ಹುದ್ದೆ ಪಡೆದು ಸುಖ ಜೀವನ ಸಾಗಿಸಬಹುದು ಎಂದರು.
ಪ್ರಾಧ್ಯಾಪಕರಾದ ಭೀಮಸಿಂಗ್ ನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ಓದಿಗೆ ಸಮಯ ನೀಡಿ, ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೆತ್ತವರ ಮೇಲೆ ಪ್ರೀತಿ, ಗುರುಗಳ ಮೇಲೆ ನಂಬಿಕೆ, ಶಾಲೆಗಳ ಮೇಲೆ ಗೌರವವಿದ್ದರೆ ಮಾತ್ರ ನಿಮ್ಮ ಸಂಕಲ್ಪ ಈಡೇರುತ್ತದೆ, ನಿಮ್ಮ ಸಾಧನೆಗೆ ಇಡೀ ಸಮಾಜ ಹೆಮ್ಮೆಪಡುವಂತಾಗಲಿ ಎಂದು ಆಶಿಸಿದರು.
ಹಿರಿಯ ಪ್ರಾಧ್ಯಾಪಕ ಡಿ.ಕೆ.ಮುಜಾವರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಬಸವರಾಜ ವೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪ್ರಾಧ್ಯಾಪಕರಾದ ಬಸವರಾಜ ಖೈರವಾಡಗಿ, ನಿರುಪಾದಿ ಡಿ.ಕೆ, ಮಂಜುನಾಥ ಪಾಟೀಲ, ಅನಿಲಕುಮಾರ ಮಿಶ್ರಾ, ದುರ್ಗಾಸಿಂಗ್, ಶರಣಮ್ಮ ಪಾಟೀಲ, ವಿದ್ಯಾರ್ಥಿಗಳಾದ ಸುಮಂಗಲಾ, ಅನನ್ಯ ಪಾಟೀಲ, ಲಕ್ಷ್ಮೀ, ಸರಸ್ವತಿ, ಸಾಬಮ್ಮ, ಸಂಗೀತಾ, ಪವನಕುಮಾರ, ವೀರನಗೌಡ, ಹನುಮೇಶ, ವೆಂಕಟೇಶ, ಆಕಾಶ ಎಂ, ನರಸಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.