ರಾಯಚೂರು | ಶ್ರೀರಾಮಸೇನೆ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಮಾತನಾಡುತ್ತಿದ್ದ ವೇಳೆ ಮಾರಕಾಯುಧದೊಂದಿಗೆ ವೇದಿಕೆಗೆ ನುಗ್ಗಿದ ವ್ಯಕ್ತಿ
ಆರೋಪಿ ಪೊಲೀಸ್ ವಶಕ್ಕೆ

ಆರೋಪಿ ಶ್ರೀನಿವಾಸ್ (ಎಡಚಿತ್ರ) | ಶಾಸಕ ಬಸನಗೌಡ ಪಾಟೀಲ ಯತ್ನಾಳ್
ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶ್ರೀರಾಮಸೇನೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮಾರಕಾಯುಧದೊಂದಿಗೆ ವೇದಿಕೆಗೆ ನುಗ್ಗಿದ ಘಟನೆ ರವಿವಾರ ನೆಡದಿದೆ.
ಹಟ್ಟಿ ಪಟ್ಟಣದ ಶ್ರೀನಿವಾಸ್ ಮಾರಕಾಯುಧದೊಂದಿಗೆ ವೇದಿಕೆಗೆ ನುಗ್ಗಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀರಾಮಸೇನೆ ವತಿಯಿಂದ ರವಿವಾರ 'ಹಿಂದೂ ಸಾಮ್ರಾಜ್ಯೋತ್ಸವ' ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಯತ್ನಾಳ್ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವೇದಿಕೆಯ ಹಿಂಭಾಗದಿಂದ ಪ್ರವೇಶಿಸಿದ ಆರೋಪಿ ಶ್ರೀನಿವಾಸ್ ಬೆನ್ನಲ್ಲಿ ಮಚ್ಚು ಇಟ್ಟುಕೊಂಡಿದ್ದನೆನ್ನಲಾಗಿದೆ. ಇದನ್ನು ಗಮನಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಆತನನ್ನು ಹಿಡಿದು ಸ್ಥಳದಲ್ಲಿದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂಲತಃ ಲಿಂಗಸಗೂರು ನಿವಾಸಿಯಾಗಿರುವ ಶ್ರೀನಿವಾಸ್ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಇದ್ದರೂ ಮಚ್ಚು ಹಿಡಿದು ವೇದಿಕೆಗೆ ನುಗ್ಗಿದ್ದರಿಂದ ಕೆಲ ಸಮಯ ಆತಂಕಕ್ಕೆ ಕಾರಣವಾಗಿತ್ತು.
ಆರೋಪಿಯನ್ನು ವಶಕ್ಕೆ ಪಡೆದಿರುವ ಪಟ್ಟಣ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.