ರಾಯಚೂರು | 400 ಕೆಪಿಎಸ್ ಶಾಲೆ ತೆರೆಯುವ ನಿರ್ಧಾರ ಖಂಡಿಸಿ ಪ್ರತಿಭಟನೆ

ರಾಯಚೂರು : ರಾಜ್ಯ ಸರ್ಕಾರ 400 ಪಬ್ಲಿಕ್ (ಕೆ ಪಿ ಎಸ್) ಶಾಲೆಗಳನ್ನು ತೆರೆಯುವ ನಿರ್ಧಾರ ಖಂಡಿಸಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾ.7ರಂದು ರಾಜ್ಯ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 400 ಪಬ್ಲಿಕ್ ಶಾಲೆಗಳನ್ನು ಆರಂಭಿಸುವಾದಾಗಿ ಘೋಷಿಸಿರುವುದು ಅಘಾತಕಾರಿಯಾಗಿದೆ. ಕನ್ನಡ ಭಾಷೆಗೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇದು ದೊಡ್ಡ ಹೊಡೆತ ನೀಡುವ ವಿಷಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈಗಾಗಲೇ ಪಬ್ಲಿಕ್ ಸ್ಕೂಲ್ ಹೆಸರಲ್ಲಿ ಸರಕಾರಿ ಅಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಗಳು ಆರಂಭಗೊಂಡು ಕನ್ನಡ ಮಾಧ್ಯಮ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಕೀಳರಿಮೆ ಮೂಡಿಸಿದೆ. ಹಾಗೆ ಇಂಗ್ಲಿಷ್ ಮಾಧ್ಯಮ ಸೆಳೆದು ಕನ್ನಡ ಮಾಧ್ಯಮಕ್ಕೆ ಕೊಡಲಿಪೆಟ್ಟು ಬೀಳಹತ್ತಿದೆ. ಹೀಗಾದರೆ ಮುಂದಿನ ಐದಾರು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮುಚ್ಚಿಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಉದ್ದೇಶಿಸಿರುವ ಅಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಗಳನ್ನು ತೆರೆಯುವ ನಿರ್ಧಾರ ಹಿಂಪಡಬೇಕು. ಈಗಾಗಲೇ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ತೆರೆದಿರುವ ಇಂಗ್ಲಿಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನು ಕೂಡಲೇ ಮುಚ್ಚಬೇಕು. ಎಲ್ ಕೆ ಜಿ ಯು ಕೆ ಜಿಯಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಾತ್ರ ನಡೆಸಬೇಕು. ಇದು ರಾಜ್ಯ ಭಾಷಾ ನೀತಿಗೆ ಅನುಗುಣವಾಗಿದೆ. ಕನ್ನಡ ಮಾಧ್ಯಮ ಬಿಟ್ಟು ಉಳಿದೆಲ್ಲ ಶಿಕ್ಷಣ ಮಾಧ್ಯಮ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಕರ್ನಾಟಕ ಸರಕಾರದ ನೀತಿಯಂತೆ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಆಗುವಂತೆ ರಾಯಚೂರು ಮಹಾನಗರ ಪಾಲಿಗೆ ಕೂಡಲೇ ಅನುಷ್ಠಾನ ಗೊಳಿಸುವಂತೆ ಮಾಡಬೇಕು. ಕರ್ನಾಟಕ ವಿದ್ಯುತ್ ನಿಗಮದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ( ಡಿ ಎ ವಿ ) ಅಂಗ್ಲ ಮಾಧ್ಯಮ ಶಾಲೆ ರದ್ದುಪಡಿಸಬೇಕು ಅಂದರೆ ಮುಚ್ಚಬೇಕು. ಮುಚ್ಚಿರುವ ಕನ್ನಡ ಮಾಧ್ಯಮ ಶಾಲೆ ಪುನಃ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆ.ಮ.ನಡುಮನಿ, ಪ್ರಧಾನ ಕಾರ್ಯದರ್ಶಿ ಹನುಮಂತು ಆಲೂರು, ಸಹ ಕಾರ್ಯದರ್ಶಿ ಸಿದ್ರಾಮಪ್ಪ ಮಾಲೀಪಾಟೀಲ್, ಉಪಾಧ್ಯಕ್ಷರಾದ ರಾಮಣ್ಣ ಮ್ಯಾದಾರ, ರಾಮಲಿಂಗಪ್ಪ, ಬಶೀರ್ ಅಹ್ಮದ್ ಹೊಸಮನಿ, ರುದ್ರಯ್ಯ ಗಣಾರಿ, ವೆಂಕಟರೆಡ್ಡಿ, ಹನುಮಂತಪ್ಪ, ರಫೀಕ್ ಅಹ್ಮದ್, ಅಶೋಕಕುಮಾರ ಜೈನ್, ಈರಣ್ಣ ಬೆಂಗಾಲಿ ಪಾಲ್ಗೊಂಡಿದ್ದರು.