ರಾಯಚೂರು | ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಪ್ರತಿಭಟನೆ

ರಾಯಚೂರು : ನಾಲ್ಕು ಲೇಬರ್ ಕೋಡ್ಗಳನ್ನು ರದ್ದುಗೊಳಿಸಬೇಕು. ಕನಿಷ್ಠ ವೇತನವನ್ನು ಜಾರಿಗೆ ತರಬೇಕು ಮತ್ತು ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ 31,500 ರೂ. ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಟಿಯುಸಿಐ ಜಿಲ್ಲಾ ಘಟಕದ ವತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮೂರು ಅವಧಿಯ ಮೋದಿ ಸರ್ಕಾರದಲ್ಲಿ ದೇಶ ಕಟ್ಟಿದ, ದೇಶಕ್ಕೆ ಅನ್ನ ಹಾಕುವ, ದೇಶದ ಅಗತ್ಯತೆಗಳನ್ನು ಉತ್ಪಾದಿಸುವ, ದೇಶದ ಸರ್ವಾಂಗ ಸೇವೆಗಳನ್ನು ಪೂರೈಸುವ ಕಾರ್ಮಿಕರಿಗೆ, ಉದ್ಯೋಗಿಗಳಿಗೆ, ಕೆಲಸಗಾರರಿಗೆ ಕನಿಷ್ಠ ಜೀವನ ಭದ್ರತೆ ಒದಗಿಸಲು ನಿರಾಕರಿಸಲಾಗುತ್ತಿದೆ.
ಹೊಸ ಕಾರ್ಮಿಕ ಕಾಯ್ದೆಗಳನ್ನು ಅಂಗೀಕರಿಸಿ ಬಂಡವಾಳಶಾಹಿಪರ ಆಡಳಿತ ನಡೆಸುತ್ತಿದೆ. ಈ ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ನಡೆಯುತ್ತಿರುವ ಹೋರಾಟವನ್ನು ಸರ್ಕಾರವೇ ತುಳಿದು ಹಾಕುತ್ತಿದೆ ಎಂದು ದೂರಿದರು
ಎಲ್ಲರಿಗೂ 8-ಗಂಟೆಗಳ ಕೆಲಸ, ರಜಾದಿನಗಳು ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸಿ ಮತ್ತು ಎಲ್ಲಾ ಕ್ಷೇತ್ರಗಳಿಗೆ ಸಮಾನ ವೇತನವನ್ನು ಖಚಿತಪಡಿಸಬೇಕು. ವಲಸೆ ಕಾರ್ಮಿಕರಿಗೆ ಕಾನೂನು ರಕ್ಷಣೆಯನ್ನು ಒದಗಿಸಿ ಹಿಂದೂ ರಾಷ್ಟ್ರ ಪರಿಕಲ್ಪನೆ ರದ್ದುಗೊಳಿಸಬೇಕು. ನಾವು ಭಾರತದ ನಿರ್ಮಾತೃಗಳು ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಜಿ.ಅಮರೇಶ್ ತುಂಗಭದ್ರಾ ಹಂಗಾಮಿ ಕಾರ್ಮಿಕ ಮುಖಂಡರು ಜಿ.ಅಡವಿರಾವ್, ಆಂಜಿನೇಯ, ಸತ್ಯಪ್ಪ, ಶಾಫಿ ಮತ್ತು ನಗರದ ಬೀದಿಬದಿ ವ್ಯಾಪಾರಿಗಳ ಸಂಘದ ಶೇಕ್ ಹುಸೇನ್ ಭಾಷಾ, ರಾಮು, ರಾಜು, ಕರೀಮುಲ್ಲಾ, ಪ್ರಕಾಶ ಇನ್ನಿತರರು ಇದ್ದರು.