ರಾಯಚೂರು | ಪ್ರಾಥಮಿಕ ಶಾಲಾ ಶಿಕ್ಷಕರ ವಿಚಾರ ಸಂಕಿರಣ
ಪ್ರಾಥಮಿಕ ಶಿಕ್ಷಣವು ಮಕ್ಕಳಿಗೆ ಭದ್ರ ಬುನಾದಿಯಾಗಲಿ : ಸಿಇಒ ರಾಹುಲ್

ರಾಯಚೂರು : ಮಕ್ಕಳು ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ನಿಮ್ಮ ಛಾಪು ಮೂಡಿಸುವ ಗುರಿ ಹೊಂದಬೇಕು. ಪ್ರತಿ ಮಗುವಿಗೆ ಪ್ರಾಥಮಿಕ ಶಿಕ್ಷಣವು ಭದ್ರ ಬುನಾದಿಯಾಗಿದ್ದು, ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಹೇಳಿದರು.
ಮಾ.17ರ ಸೋಮವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ರಾಯಚೂರು, ಅಜೀಂ ಪ್ರೇಮ್ ಜೀ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭವಿಷ್ಯದ ಭಾರತವನ್ನು ನಿರ್ಮಿಸುವ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಹೊಣೆ ಹೊತ್ತಿರುವ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ದೇಶಕ್ಕೂ ಭದ್ರ ಬುನಾದಿ ಹಾಕಿದಂತೆ ಆಗಲಿದೆ. ಗ್ರಾಮೀಣ ಭಾಗಗಳ ಸರಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂದರು.
ಶಿಕ್ಷಕರು ಶಿಸ್ತು ಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ಅಲ್ಲದೆ ಸಂವಹನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಪ್ರಚಲಿತ ಜ್ಞಾನದ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ವಹಿಸಬೇಕು. ಶಿಕ್ಷಕರು ಜಾಗತೀಕರಣ ಜೊತೆಗೆ ನಮ್ಮ ಆಚರಣೆ ಸಂಸ್ಕೃತಿ ಕಾರ್ಯಕ್ರಮಗಳನ್ನು ಮರೆಯಬಾರದೆಂದು ಶಿಕ್ಷಕರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಡಯಟ್ ಉಪ ನಿರ್ದೇಶಕರಾದ ಆರ್.ಇಂದಿರಾ, ಡಯಟ್ ಹಿರಿಯ ಉಪನ್ಯಾಸಕಿಯಾದ ಶಿವಮ್ಮ, ಕಲಬುರ್ಗಿ ವಿಭಾಗೀಯ ಅಜೀಂ ಪ್ರೇಮ್ ಜೀ ಫೌಂಡೇಶನ್ ನಿರ್ದೇಶಕರಾದ ಗುರುರಾಜ ರಾವ್ ಕೆ., ಅಜೀಂ ಪ್ರೇಮ್ ಜೀ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಆನಂದ ಕೆ ಸೇರಿದಂತೆ ಇತರರು. ಇದಕ್ಕೂ ಮುಂಚೆ ತಾಲೂಕಿನ ಸಂಗಮಕುಂಟಾ ಉನ್ನತಿಕರೀಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಮಾಜದ ಹದ್ದಿನ ಕಣ್ಣಿಗೆ ಸಿಲುಕಿದ ಭಾರತಾಂಬೆಯ ಕಥೆ ಜಾಗತೀಕರಣ ಎಂಬ ಕಿರು ನಾಟಕವನ್ನು ಮಾಡಲಾಯಿತು.