ಸಿರವಾರ | ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಸಚಿವ ರಾಮಲಿಂಗರೆಡ್ಡಿ
ಕಲ್ಯಾಣ ಕರ್ನಾಟಕ ಸಾರಿಗೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ರಾಮಲಿಂಗ ರೆಡ್ಡಿ

ಸಿರವಾರ : ನೂತನ ಬಸ್ ತಂಗುದಾಣವನ್ನು ಸಾರ್ವಜನಿಕರ ಬಳಕೆಗೆ ನೀಡಿದ್ದು, ಇದರ ಶುಚಿತ್ವ ಕಾಪಾಡಿಕೊಳ್ಳುವುದು ಸಾರ್ವಜನಿಕರ ಕರ್ತವ್ಯವಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಕೆಕೆಆರ್ ಡಿಬಿ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬಸ್ ನಿಲ್ದಾಣವನ್ನು ಶಾಸಕ ಜಿ.ಹಂಪಯ್ಯ ನಾಯಕ ಅವರೊಂದಿಗೆ ಉದ್ಘಾಟಿಸಿ ನಂತರ ಮಾತನಾಡಿದ ಅವರು, ನೂತನ ಬಸ್ ನಿಲ್ದಾಣದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು ಎಂದು ಮುಖ್ಯ ವ್ಯವಸ್ಥಾಪಕರಿಗೆ ತಿಳಿಸಿದ ಅವರು, ಬಜೆಟ್ ನಲ್ಲಿ ಪ್ರಾಸ್ತಪಿಸಿದಂತೆ 700 ಬಸ್ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುವುದು ಎಂದರು.
ಶಕ್ತಿ ಯೋಜನೆಯಿಂದ 20 ರಿಂದ 25 ಲಕ್ಷ ಮಹಿಳೆಯರು ದಿನಿನಿತ್ಯ ಶಕ್ತಿ ಯೋಜನೆಯಡಿ ಬಸ್ ಗಳಲ್ಲಿ ಉಚಿತವಾಗಿ ಸಾರಿಗೆ ಮಾಡುತಿದ್ದು, ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವುದರಿಂದ ವರ್ಷಕ್ಕೆ 429 ಕೋಟಿ ರೂ. ಸರ್ಕಾರ ಖರ್ಚು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯಲ್ಲಿ ಹೊಸ ಯೋಜನೆಗಳ ಮೂಲಕ ಹೆಚ್ವುವರಿ ಬಸ್ ಗಳನ್ನು ಬಿಡಲಾಗುವುದು. ನಾನು ಸಚಿವನಾಗಿ ಬಂದ ಮೇಲೆ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಕೆಎಸ್ಆರ್ಟಿಸಿ ಮತ್ತು ಕೆಕೆಆರ್ಟಿಸಿ ಸಂಸ್ಥೆಯಲ್ಲಿನ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ 1 ಕೋಟಿ ರೂ. ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೇ ಮಾದರಿಯಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಹಂಪಯ್ಯ ನಾಯಕ ಅವರು, ಸಿರವಾರ ತಾಲೂಕು ಸುತ್ತಮುತ್ತಲಿನ ಜಿಲ್ಲಾ ಹಾಗೂ ತಾಲೂಕಿಗೆ ಕೇಂದ್ರ ಬಿಂದುವಾಗಿದ್ದು, ತಾಲೂಕಿನ ಜಿಲ್ಲಾ ಕೇಂದ್ರದಿಂದ ಧಾರವಾಡ ಜಿಲ್ಲಗೆ ಹೋಗುವ ಬಸ್ ಸಮಸ್ಯೆ ಇದ್ದು, ಸಚಿವರು ಸಾರಿಗೆ ಬಸ್ ಕಲ್ಪಿಸಬೇಕು ಎಂದ ಅವರು, ಸರಕಾರದಿಂದ ಜನಸಾಮಾನ್ಯರಿಗೆ ಮೂಲ ಸೌಕರ್ಯವನ್ನು ಕಲ್ಪಿಸುವುದು ನಮ್ಮ ಕರ್ತವ್ಯ. ಈ ಭಾಗದಲ್ಲಿ ಉತ್ತಮ ರೀತಿಯ ನೂತನ ತಂಗುದಾಣ ಸಾರ್ವಜನಿಕರ ಬಳಕೆಗೆ ನೀಡಿದ್ದು, ಇದರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಹಂಪಯ್ಯ ನಾಯಕ, ತಹಶೀಲ್ದಾರ್ ರವಿ ಎಸ್.ಅಂಗಡಿ, ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಸ್ವಾಮಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಪಟ್ಟಣ ಪಂಚಾಯತ ಅಧ್ಯಕ್ಷ ವೈ ಭೂಪನಗೌಡ, ಮಾಜಿ ಎಂಎಲ್ ಸಿ ಬಸವರಾಜ ಪಾಟೀಲ್ ಇಟಗಿ, ಚನ್ನಪ್ಪ ಮೇಟಿ, ಚಂದ್ರಶೇಖರ್, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಬ್ರಿಜೇಶ ಪಾಟೀಲ್, ಶರಣಯ್ಯ ನಾಯಕ ಗುಡದಿನ್ನಿ, ರಮೇಶ ದರ್ಶನಕರ್, ಅರಕೇರಿ ಶಿವಶರಣ ಸಾಹುಕಾರ್, ಚುಕ್ಕಿ ಶಿವಕುಮಾರ್ ಸಾಹುಕಾರ್, ರೇಣುಕಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೂ ಕಾಂಗ್ರೇಸ್ ಕಾರ್ಯಕರ್ತರಿದ್ದರು.