‘ಅಕ್ರಮ ಡಿ ನೋಟಿಫಿಕೇಶನ್’ ಕುಮಾರಸ್ವಾಮಿ ವಿಚಾರಣೆ ಎದುರಿಸಲೇಬೇಕು : ಪ್ರಿಯಾಂಕ್ ಖರ್ಗೆ
"ಬಿಜೆಪಿ ಪಕ್ಷದ ಯಾವ ಬಣ ಎಚ್ಡಿಕೆ ರಾಜಿನಾಮೆಗಾಗಿ ‘ಮಂಡ್ಯ ಚಲೋ’ ಮಾಡಲಿದೆ?"

ಪ್ರಿಯಾಂಕ್ ಖರ್ಗೆ/ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಅಕ್ರಮ ಡಿ ನೋಟಿಫಿಕೇಶನ್ ಹಗರಣದ ವಿಚಾರಣೆಗೆ ತಡೆ ಕೋರಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಭೂ ಕಬಳಿಕೆಗೆ ಮುಖ್ಯಮಂತ್ರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡಿದ್ದರ ಬಗ್ಗೆ ಈಗ ವಿಚಾರಣೆ ಎದುರಿಸಲೇಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಬಿಡಿಎಯ ತೀವ್ರ ಆಕ್ಷೇಪಣೆಯ ನಡುವೆಯೂ ಡಿ ನೋಟಿಫಿಕೇಶನ್ ಮಾಡಿದ್ದ ಕುಮಾರಸ್ವಾಮಿಯವರ ಹಿತಾಸಕ್ತಿ ಏನಿತ್ತು? ಇದರ ಬಗ್ಗೆ ವಿಚಾರಣೆಯಲ್ಲಿ ಹಿತಾಸಕ್ತಿಯ ಸಂಗತಿಗಳು ಅನಾವರಣವಾಗಲಿದೆ ಎಂದು ಹೇಳಿದ್ದಾರೆ.
ಭೂ ಹಗರಣಗಳಿಗೆ ಹೆಸರುವಾಸಿಯಾಗಿದ್ದಕ್ಕಾಗಿಯೇ ‘ಮಣ್ಣಿನ ಮಕ್ಕಳು’ ಎಂಬ ಬಿರುದು ಬಂದಿದೆಯೇ ?. ಈಗ ಬಿಜೆಪಿ ಹಾಗೂ ಜೆಡಿಎಸ್ ಗೆ ಹಲವು ಪ್ರಶ್ನೆಗಳು ಎದುರಾಗುತ್ತವೆ, ‘ನಾ ಖಾವುಂಗಾ ನಾ ಖಾನೆದುಂಗಾ ‘ಎನ್ನುವ ಪ್ರಧಾನಿ ಮೋದಿ ತಮ್ಮ ಸಂಪುಟದ ಸಚಿವರ ಈ ಹಗರಣದ ಬಗ್ಗೆ ಮನ್ ಕಿ ಬಾತ್ ಆಡುವುದು ಯಾವಾಗ? ಕುಮಾರಸ್ವಾಮಿ ನಿಷ್ಪಕ್ಷಪಾತ ವಿಚಾರಣೆ ಎದುರಿಸಲು ರಾಜೀನಾಮೆ ನೀಡುತ್ತಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಹುಲ್ಲು ಕಡ್ಡಿ ಅಲ್ಲಾಡಿದರೂ ಕಾಂಗ್ರೆಸ್ ನವರ ರಾಜೀನಾಮೆ ಕೇಳುವ ಬಿಜೆಪಿಯವರು ಕುಮಾರಸ್ವಾಮಿ ರಾಜೀನಾಮೆ ಕೇಳುವುದು ಯಾವಾಗ? ವೈಜೆಪಿ(ಯತ್ನಾಳ್), ವಿಜೆಪಿ(ವಿಜಯೇಂದ್ರ), ಎಜೆಪಿ(ಅಶೋಕ್), ರಾಜ್ಯ ಬಿಜೆಪಿ ಪಕ್ಷದ ಯಾವ ಬಣ ಕುಮಾರಸ್ವಾಮಿ ರಾಜಿನಾಮೆಗಾಗಿ ‘ಮಂಡ್ಯ ಚಲೋ’ ಮಾಡಲಿದೆ?. ಮೈತ್ರಿ ಪಕ್ಷವಾಗಿರುವ ಬಿಜೆಪಿಯೂ ಕುಮಾರಸ್ವಾಮಿಯ ಭೂ ಹಗರಣದ ಹೊಣೆ ಹೊರಲಿದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.