ವಿಶ್ವಕಪ್ ಹಾರಿ ಹೋಗುತ್ತಿದ್ದುದನ್ನು ನೋಡುತ್ತಿದ್ದೆ, ಅದನ್ನು ಹಾರಿ ಹಿಡಿದುಕೊಂಡೆ : ಸೂರ್ಯಕುಮಾರ್ ಯಾದವ್
![ವಿಶ್ವಕಪ್ ಹಾರಿ ಹೋಗುತ್ತಿದ್ದುದನ್ನು ನೋಡುತ್ತಿದ್ದೆ, ಅದನ್ನು ಹಾರಿ ಹಿಡಿದುಕೊಂಡೆ : ಸೂರ್ಯಕುಮಾರ್ ಯಾದವ್ ವಿಶ್ವಕಪ್ ಹಾರಿ ಹೋಗುತ್ತಿದ್ದುದನ್ನು ನೋಡುತ್ತಿದ್ದೆ, ಅದನ್ನು ಹಾರಿ ಹಿಡಿದುಕೊಂಡೆ : ಸೂರ್ಯಕುಮಾರ್ ಯಾದವ್](https://www.varthabharati.in/h-upload/2024/07/01/1274925-15.webp)
ಸೂರ್ಯಕುಮಾರ್ ಯಾದವ್ | PC : X
ಬ್ರಿಜ್ಟೌನ್ (ಬಾರ್ಬಡೋಸ್) : ‘‘ನನ್ನ ಮನಸ್ಸಿನಲ್ಲಿ ಏನು ನಡೆಯುತ್ತಿತ್ತು ಎನ್ನುವುದು ನನಗೆ ನಿಜವಾಗಿಯೂ ಗೊತ್ತಿಲ್ಲ. ವಿಶ್ವಕಪ್ ಹಾರಿ ಹೋಗುತ್ತಾ ಇದ್ದುದನ್ನು ಮಾತ್ರ ನಾನು ನೋಡುತ್ತಿದ್ದೆ ಮತ್ತು ಅದನ್ನು ಹಾರಿ ಹಿಡಿದುಕೊಂಡೆ’’ ಎಂದು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ರ ಆ ಅಮೋಘ ಕ್ಯಾಚ್ ಬಗ್ಗೆ ಮಾತನಾಡುತ್ತಾ ಸೂರ್ಯಕುಮಾರ್ ಯಾದವ್ ಹೇಳಿದರು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
1983ರ ಏಕದಿನ ವಿಶ್ವಕಪ್ನಲ್ಲಿ ಕಪಿಲ್ ದೇವ್ ಹಿಡಿದ ವಿವಿಯನ್ ರಿಚರ್ಡ್ಸ್ರ ಕ್ಯಾಚ್ ಅಮೋಘ ಕ್ಯಾಚಾಗಿತ್ತು. ಅದು ಭಾರತೀಯ ಕ್ರಿಕೆಟ್ ಇತಿಹಾಸದ ಗತಿಯನ್ನೇ ಬದಲಿಸಿತು. 1983ರ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದ ರೋಜರ್ ಬಿನ್ನಿ ಹಾಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ‘‘ಸೂರ್ಯ ಹಿಡಿದ ಕ್ಯಾಚ್ ಕಪಿಲ್ ಹಿಡಿದ ಕ್ಯಾಚ್ನಷ್ಟೇ ಶ್ರೇಷ್ಠವಾಗಿತ್ತು’’ ಎಂದು ಬಿನ್ನಿ ಹೇಳಿದರು.
‘‘ಕಪಿಲ್ರ ಕ್ಯಾಚ್ ತನ್ನದೇ ರೀತಿಯಲ್ಲಿ ಅದ್ಭುತವಾಗಿತ್ತು. ಅವರು ಚೆಂಡನ್ನು ನೋಡುತ್ತಾ ಹಿಂದಕ್ಕೆ ಓಡುತ್ತಾ ಆ ಕ್ಯಾಚ್ ಹಿಡಿದಿದ್ದರು. ಅದನ್ನು ಅವರು ಅತ್ಯಂತ ಸುಲಲಿತವಾಗಿ ನಿಭಾಯಿಸಿದ್ದರು. ಸೂರ್ಯಕುಮಾರ್ ಕೂಡ ಬೌಂಡರಿ ಹಗ್ಗವನ್ನು ನಿಭಾಯಿಸುತ್ತಾ ಕ್ಯಾಚ್ ಹಿಡಿದರು. ಅವರು ಆ ಕ್ಯಾಚ್ ಬಿಟ್ಟಿದ್ದರೆ ನಾವು ಬಹುಷಃ ಪಂದ್ಯವನ್ನು ಸೋಲುತ್ತಿದ್ದೆವು. ಅವರ ಹಾಗೂ ಕಪಿಲ್ರ ಕ್ಯಾಚ್ಗಳು ಸಮಾನವಾಗಿವೆ’’ ಎಂದು ಕೆನ್ಸಿಂಗ್ಟನ್ ಓವಲ್ನಲ್ಲಿ ಬಿನ್ನಿ ಹೇಳಿದರು.