ದೇಶೀ ಕ್ರಿಕೆಟ್ ನಲ್ಲಿ ಆಟಗಾರನಿಗೆ ಐಪಿಎಲ್ ನಲ್ಲಿ ಸಿಗುವ ಮೂಲ ವೇತನವೂ ಸಿಗುವುದಿಲ್ಲ: ಸುನೀಲ್ ಗವಾಸ್ಕರ್
ಐಪಿಎಲ್-ರಣಜಿ ಟ್ರೋಫಿ ವೇತನ ಅಸಮಾನತೆಯತ್ತ ಬೆಟ್ಟು ಮಾಡಿದ ಹಿರಿಯ ಕ್ರಿಕೆಟಿಗ

ಸುನೀಲ್ ಗವಾಸ್ಕರ್ | PC : BCCI
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ‘ಸ್ಪೋರ್ಟ್ಸ್ಸ್ಟಾರ್’ನಲ್ಲಿನ ತನ್ನ ಅಂಕಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅದೇ ವೇಳೆ, ಓರ್ವ ಆಟಗಾರ ಈ ಟಿ20 ಪಂದ್ಯಾವಳಿಯಲ್ಲಿ ಆಡುವುದಕ್ಕೂ ಭಾರತೀಯ ದೇಶಿ ಕ್ರಿಕೆಟ್ನಲ್ಲಿ ಆಡುವುದಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಬೆಟ್ಟುಮಾಡಿದ್ದಾರೆ.
‘‘ಒಂದು ನಿರ್ವಹಣೆಯು ಓರ್ವ ಅಜ್ಞಾತ ಆಟಗಾರನನ್ನು ಉನ್ನತ ಗೌರವಕ್ಕೆ ಒಯ್ಯಬಹುದು ಎನ್ನುವುದನ್ನು ಐಪಿಎಲ್ ಮತ್ತೊಮ್ಮೆ ತೋರಿಸಿದೆ. ಆದರೆ, ರಾಷ್ಟ್ರೀಯ ಚಾಂಪಿಯನ್ ಶಿಪ್ ರಣಜಿ ಟ್ರೋಫಿಯ ಕತೆ ತೀರಾ ಭಿನ್ನವಾಗಿದೆ. ಅಲ್ಲಿ ಅತ್ಯುನ್ನತ ನಿರ್ವಹಣೆಯೂ ದೊಡ್ಡದಾಗಿ ಸುದ್ದಿಯಾಗುವುದಿಲ್ಲ’’ ಎಂದು ಗವಾಸ್ಕರ್ ಬರೆದಿದ್ದಾರೆ.
ಒಂದು ಉತ್ತಮ ಐಪಿಎಲ್ ಋತು ಒರ್ವ ಆಟಗಾರನಿಗೆ ಗರಿಷ್ಠ ಲಾಭ ತಂದುಕೊಡಬಹುದು. ಆದರೆ ಜೀವನವಿಡೀ ರಣಜಿ ಟ್ರೋಫಿ ಆಡಿದರೂ ಅದು ಇಷ್ಟು ಪ್ರತಿಫಲ ತರುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಸಮಾನತೆಯನ್ನು ಹೇಗೆ ಕಡಿಮೆಗೊಳಿಸುವ ಪರಿಹಾರವನ್ನೂ ಅವರು ಸೂಚಿಸಿದ್ದಾರೆ.
‘‘ಇಡೀ ಋತುವಿನಲ್ಲಿ, ರಣಜಿ ಟ್ರೋಫಿ, ವಿಜಯ ಹಝಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಆಡಿದರೂ ಅವುಗಳ ಆಟಗಾರರಿಗೆ ಐಪಿಎಲ್ ನಲ್ಲಿ ಹೊಸಬ ಆಟಗಾರನಿಗೆ ಸಿಗುವ ಮೂಲ ಬೆಲೆ ರೂ. 30 ಲಕ್ಷದಷ್ಟೂ ಸಿಗುವುದಿಲ್ಲ. ರಣಜಿ ಆಟಗಾರರಿಗೆ ಬಿಸಿಸಿಐ ನೀಡುವಷ್ಟೇ ವೇತನವನ್ನು ಮುಂಬೈ ಮುಂತಾದ ಇತರ ಅಸೋಸಿಯೇಶನ್ ಗಳು ನೀಡಿದರೆ ಈ ವೇತನ ತಾರತಮ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿತಗೊಳಿಸಬಹುದು’’ ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.