ಒಂದೇ ಮೈದಾನದಲ್ಲಿ ಆಡಿರುವುದರಿಂದ ಭಾರತಕ್ಕೆ ಲಾಭವಾಗಿದೆ: ಮುಹಮ್ಮದ್ ಶಮಿ

ಮುಹಮ್ಮದ್ ಶಮಿ | PTI
ಹೊಸದಿಲ್ಲಿ : ತನ್ನ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈಯ ಒಂದೇ ಸ್ಟೇಡಿಯಮ್ನಲ್ಲಿ ಆಡಿರುವುದರಿಂದ ಭಾರತಕ್ಕೆ ಲಾಭವಾಗಿದೆ ಎನ್ನುವುದನ್ನು ಭಾರತ ಕ್ರಿಕೆಟ್ ತಂಡದ ವೇಗಿ ಮುಹಮ್ಮದ್ ಶಮಿ ಒಪ್ಪಿಕೊಂಡಿದ್ದಾರೆ.
ಮಂಗಳವಾರ ದುಬೈಯಲ್ಲಿ ನಡೆದ ಸೆಮಿಫೈನಲ್ನಲ್ಲಿ ಭಾರತವು ಆಸ್ಟ್ರೇಲಿಯವನ್ನು 4 ವಿಕೆಟ್ಗಳಿಂದ ಸೋಲಿಸಿದೆ. ಶಮಿ 48 ರನ್ಗಳನ್ನು ಕೊಟ್ಟು 3 ವಿಕೆಟ್ಗಳನ್ನು ಉರುಳಿಸಿದ್ದಾರೆ.
ಭಾರತವು ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ದುಬೈಯಲ್ಲಿ ಈವರೆಗೆ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿಯ ಆತಿಥೇಯ ದೇಶವಾದರೂ, ಆ ದೇಶಕ್ಕೆ ಹೋಗಲು ಭಾರತೀಯ ಕ್ರಿಕೆಟ್ ತಂಡ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅದು ತನ್ನ ಎಲ್ಲಾ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ದುಬೈಯಲ್ಲಿ ಆಡುತ್ತಿದೆ.
ಫೈನಲ್ ಪಂದ್ಯವೂ ರವಿವಾರ ದುಬೈಯಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಭಾರತವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಅದೇ ವೇಳೆ, ಇತರ ಏಳು ತಂಡಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪಾಕಿಸ್ತಾನದ ಮೂರು ನಗರಗಳ ನಡುವೆ ಓಡಾಡಬೇಕಾಯಿತು.
‘‘ಇದರಿಂದ ಖಂಡಿತವಾಗಿಯೂ ನಮಗೆ ಲಾಭವಾಗಿದೆ. ಯಾಕೆಂದರೆ ಪಿಚ್ನ ಪರಿಸ್ಥಿತಿ ಮತ್ತು ಅದು ವರ್ತಿಸುವ ರೀತಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ’’ ಎಂದು ಮಂಗಳವಾರ ಆಸ್ಟ್ರೇಲಿಯವನ್ನು ಸೋಲಿಸಿದ ಬಳಿಕ ಮಾತನಾಡಿದ ಶಮಿ ಹೇಳಿದರು.
‘‘ನಮ್ಮ ಎಲ್ಲಾ ಪಂದ್ಯಗಳನ್ನು ಒಂದೇ ಮೈದಾನದಲ್ಲಿ ಆಡುವುದು ಪ್ರಯೋಜನಕಾರಿಯಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.
ಭಾರತವು ದುಬೈನಲ್ಲಿ ತಾನಾಡಿದ ಒಟ್ಟು 10 ಏಕದಿನ ಪಂದ್ಯಗಳ ಪೈಕಿ ಒಂಭತ್ತರಲ್ಲಿ ಜಯ ಗಳಿಸಿದೆ. ಒಟ್ಟಾರೆಯಾಗಿ ಅದು ಅಜೇಯವಾಗಿ ಉಳಿದಿದೆ.