ನಾಳೆ ನಾಲ್ಕನೇ ಟಿ20 ಪಂದ್ಯ | ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ಗುರಿ

PC : PTI
ಪುಣೆ: ವೇಗದ ಬೌಲಿಂಗ್ ಎದುರಿಸುವಲ್ಲಿ ಪರದಾಡುತ್ತಿರುವ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಕಳಪೆ ಫಾರ್ಮ್ ಹಾಗೂ ಫಿಟ್ನೆಸ್ ಹೊಂದಿರುವ ರಿಂಕು ಸಿಂಗ್ ಬಗ್ಗೆ ಚಿಂತಿತವಾಗಿರುವ ಟೀಮ್ ಇಂಡಿಯಾ ಶುಕ್ರವಾರ ನಡೆಯಲಿರುವ ನಾಲ್ಕನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಎದುರಿಸಲಿದೆ. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಸೂರ್ಯಕುಮಾರ್ ಬಳಗ ಸರಣಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.
ರಾಜ್ಕೋಟ್ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ 26 ರನ್ನಿಂದ ಸೋತು ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಫೆ.2ರಂದು ಮುಂಬೈನಲ್ಲಿ ನಡೆಯಲಿರುವ ಕೊನೆಯ ಪಂದ್ಯಕ್ಕಿಂತ ಮೊದಲು ಎಂಸಿಎ ಕ್ರೀಡಾಂಗಣದಲ್ಲಿ ಪುಟಿದೆದ್ದು ಸರಣಿ ವಶಪಡಿಸಿಕೊಳ್ಳುವ ಮತ್ತೊಂದು ಸುವರ್ಣಾವಕಾಶ ಲಭಿಸಿದೆ. ಚೆನ್ನೈ ಹಾಗೂ ಕೋಲ್ಕತಾದಲ್ಲಿ ನಡೆದಿರುವ ಮೊದಲೆರಡು ಟಿ20 ಪಂದ್ಯಗಳನ್ನು ಭಾರತ ತಂಡವು ಗೆದ್ದುಕೊಂಡಿತ್ತು.
ಈ ಸರಣಿಗಿಂತ ಮೊದಲು ಕೇರಳದ ವಿಕೆಟ್ಕೀಪರ್-ಬ್ಯಾಟರ್ ಸ್ಯಾಮ್ಸನ್ ಅವರು ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧ 3 ಶತಕಗಳನ್ನು ಸಿಡಿಸಿ ಟಿ20 ಋತುವನ್ನು ಭರ್ಜರಿಯಾಗಿ ಆರಂಭಿಸಿದ್ದರು. ಸದ್ಯ ನಡೆಯುತ್ತಿರುವ ಟಿ20 ಸರಣಿಯಲ್ಲಿ ಸ್ಯಾಮ್ಸನ್ ಅವರು 26, 5 ಹಾಗೂ 3 ರನ್ ಗಳಿಸಿದ್ದಾರೆ. ಗಂಟೆಗೆ 145 ಕಿ.ಮೀ.ವೇಗದಲ್ಲಿ ಬರುವ ಚೆಂಡನ್ನು ಎದುರಿಸುವಲ್ಲಿ ಸ್ಯಾಮ್ಸನ್ ಎಡವುತ್ತಿದ್ದಾರೆ. ಇಂಗ್ಲೆಂಡ್ನ ಜೋಫ್ರಾ ಆರ್ಚರ್ ಹಾಗೂ ಮಾರ್ಕ್ವುಡ್ ಗಂಟೆಗೆ 145ರಿಂದ 155 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.
ಮುಖ್ಯಕೋಚ್ ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರನಾಗಿರುವ ಸ್ಯಾಮ್ಸನ್ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡುವ ಆಕಾಂಕ್ಷೆ ಹೊಂದಿದ್ದಾರೆ. ಗಂಭೀರ್ ಹಾಗೂ ನೂತನ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಆದಷ್ಟು ಬೇಗನೆ ಸ್ಯಾಮ್ಸನ್ರ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಬೇಕಾಗಿದೆ.
ರಿಂಕು ಸಿಂಗ್ ಬೆನ್ನುನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಟೀಮ್ ಮ್ಯಾನೇಜ್ಮೆಂಟ್ ಧ್ರುವ್ ಜುರೆಲ್ರನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತು. ಆದರೆ, ಅವರು ಟಿ20 ಮಾದರಿ ಕ್ರಿಕೆಟ್ನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿರುವ ರಿಂಕು ಸಿಂಗ್ 4ನೇ ಪಂದ್ಯಕ್ಕಿಂತ ಮೊದಲು ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ. ಶಿವಂ ದುಬೆ ತನ್ನ ಬೌಲಿಂಗ್ ಮೂಲಕ ಮಿಂಚುತ್ತಿದ್ದ ಕಾರಣ ಟಿ20 ವಿಶ್ವಕಪ್ ತಂಡದಲ್ಲಿ ರಿಂಕು ಸ್ಥಾನ ಪಡೆದಿರಲಿಲ್ಲ.
ಭಾರತದ ಮಧ್ಯಮ ಸರದಿಯು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ದುಬೆ ಅವರಿಗೆ ಅವಕಾಶ ನೀಡಲು ಗಂಭೀರ್ ಯೋಚಿಸಬಹುದು. 3ನೇ ಆಯ್ಕೆಯಾಗಿರುವ ರಮಣ್ದೀಪ್ ಸಿಂಗ್ ದುಬೆಗಿಂತ ಉತ್ತಮ ವೇಗದ ಬೌಲರ್ ಆಗಿದ್ದು, ಆದರೆ ಬ್ಯಾಟಿಂಗ್ನಲ್ಲಿ ಇಂಗ್ಲೆಂಡ್ ಉತ್ತಮ ಬೌಲಿಂಗ್ಗೆ ಸವಾಲಾಗುವ ಸಾಧ್ಯತೆ ಇಲ್ಲ.
3ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಹಾಗೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅನ್ನು ಹೆಚ್ಚಾಗಿ ಅವಲಂಭಿಸಿ ಮುಗ್ಗರಿಸಿರುವ ಭಾರತ ತಂಡವು ವಾಶಿಂಗ್ಟನ್ ಸುಂದರ್ ಬದಲಿಗೆ ವೇಗದ ಬೌಲಿಂಗ್ ಆಲ್ರೌಂಡರ್ ರಮಣ್ದೀಪ್ ಸಿಂಗ್ಗೆ ಅವಕಾಶ ನೀಡಬಹುದು.
ರಾಜ್ಕೋಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಕ್ಕೆ ವಾಪಸಾಗಿರುವ ವೇಗದ ಬೌಲರ್ ಮುಹಮ್ಮದ್ ಶಮಿ ಅಷ್ಟೊಂದು ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ.
ಇಂಗ್ಲೆಂಡ್ ವಿರುದ್ಧ ಮೊದಲ ಬಾರಿ ಟಿ20 ಅಂತರರಾಷ್ಟ್ರೀಯ ಸರಣಿ ಸೋತ ಮೊದಲ ಕೋಚ್ ಆಗಲು ಗಂಭೀರ್ಗೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಅಗ್ರ ಟಿ20 ಬೌಲರ್ ಆಗಿರುವ ಅರ್ಷದೀಪ್ ಸಿಂಗ್ ಆಡುವ 11ರ ಬಳಗಕ್ಕೆ ವಾಪಸಾಗುವ ನಿರೀಕ್ಷೆ ಇದೆ. ಪವರ್ ಪ್ಲೇ ಓವರ್ನಲ್ಲಿ ತಂಡಕ್ಕೆ ನೆರವಾಗುವ ವಿಶ್ವಾಸದಲ್ಲಿದ್ದಾರೆ.
ವರುಣ್ ಚಕ್ರವರ್ತಿ ಭಾರತದ ಸ್ಟಾರ್ ಆಟಗಾರನಾಗಿದ್ದಾರೆ. 3ನೇ ಪಂದ್ಯದಲ್ಲಿ ಭಾರತವು ಸೋತಿದ್ದರೂ ಆ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ವರುಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ವರುಣ್ ಟಿ20 ಕ್ರಿಕೆಟ್ನಲ್ಲಿ 2ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಇಂಗ್ಲೆಂಡ್ ಬ್ಯಾಟರ್ಗಳು ವರುಣ್ರನ್ನು ದಿಟ್ಟವಾಗಿ ಎದುರಿಸುವಲ್ಲಿ ಎಡವುತ್ತಿದ್ದಾರೆ. ನಾಯಕ ಜೋಸ್ ಬಟ್ಲರ್ ಇಂಗ್ಲೆಂಡ್ ಬ್ಯಾಟಿಂಗ್ ಸಂಘಟಿತ ಪ್ರದರ್ಶನ ನೀಡಲು ಸ್ಪೂರ್ತಿ ತುಂಬಲಿದ್ದಾರೆ.